ಚಳ್ಳಕೆರೆ
ತಾಲ್ಲೂಕಿನಾದ್ಯಂತ ಸುಮಾರು 21 ಸಾವಿರಕ್ಕೂ ರೈತರು ಕಳೆದ 2018-19ನೇ ಸಾಲಿನಲ್ಲಿ ಬೆಳೆ ವಿಮೆ ಮಾಡಿಸಿದ್ದು, ಇದುವರೆಗೂ ಕಂಪನಿಯಿಂದ ಬರಬೇಕಾದ ಸುಮಾರು 70 ಕೋಟಿಗೂ ಹೆಚ್ಚು ಹಣ ರೈತರಿಗೆ ಸಂದಾಯವಾಗದೇ ರೈತರು ಸಂಕಷ್ಟದಲ್ಲಿದ್ದು, ವಿಮಾ ಕಂಪನಿ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಹಿರಿಯ ಉಪಾಧ್ಯಕ್ಷ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದು, ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ಕೂಡಲೇ ತಮ್ಮನ್ನು ಭೇಟಿಯಾಗುವಂತೆ ರೈತ ಸಂಘದ ಮುಖಂಡರಿಗೆ ಆಹ್ವಾನ ನೀಡಿದ್ದರು.
ಈ ಹಿನ್ನೆಲೆಯಲ್ಲಿ ರೈತ ಸಂಘದ ರಾಜ್ಯ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಮತ್ತು ತಂಡ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿ, ರೈತ ಸಂಘದ ಮನವಿಯನ್ನು ಅರ್ಪಿಸಿ ಇಲ್ಲಿನ ವಾಸ್ತವ ಪರಿಸ್ಥಿತಿಯನ್ನು ವಿವರಿಸಿದರು. ಕಳೆದ ಸರಿಸುಮಾರು 10 ವರ್ಷಗಳಿಂದ ಈ ಭಾಗದಲ್ಲಿ ಮಳೆಯಾಗದೇ ಸಂಪೂರ್ಣ ಬರಗಾಲ ತಲೆದೋರಿದ್ದು, ಸರ್ಕಾರ ಈಗಾಗಲೇ ಬರಗಾಲದ ಸ್ಥಿತಿಯನ್ನು ಘೋಷಣೆ ಮಾಡಿದೆ. ರೈತರ ಸ್ಥಿತಿ ಚಿಂತಾಜನಕವಾಗಿದೆ.
ಇಂತಹ ಸಂದರ್ಭದಲ್ಲಿ ರೈತರು ಖಾಸಗಿ ಬೆಳೆ ವಿಮಾ ಕಂಪನಿಗಳ ಪ್ರಚಾರಕ್ಕೆ ಮಾರು ಹೋಗಿ ಬೆಳೆ ವಿಮೆ ಪಾವತಿ ಮಾಡಿದ್ದು, ತಾಲ್ಲೂಕಿನ ರೈತರು ಒಟ್ಟು 80 ಲಕ್ಷಕ್ಕೂ ಹೆಚ್ಚು ವಿಮಾ ಕಂತು ಪಾವತಿಸಿದ್ದಾರೆ. ವಿಮಾ ಕಂಪನಿಗಳ ಪ್ರಕಾರ 115 ಕೋಟಿ ಹಣ ಚಳ್ಳಕೆರೆ ತಾಲ್ಲೂಕಿಗೆ ಬರಬೇಕಿದೆ. ಆದರೆ, ಇದುವರೆಗೂ ಕೇವಲ 20 ಕೋಟಿ ಹಣ ಮಾತ್ರ ಲಭ್ಯವಾಗಿದ್ದು, ಇನ್ನೂ ಬಾಕಿ ಹಣ ಬರಬೇಕಿದೆ. ತೋಟಗಾರಿಕೆ ಇಲಾಖೆಯಲ್ಲಿ 711 ರೈತರು 35 ಲಕ್ಷ ಬೆಳೆ ವಿಮೆ ಪಾವತಿಸಿದ್ದು, ಇನ್ನೂ ಹಣ ಬಂದಿಲ್ಲವೆಂದು ಮಾಹಿತಿ ನೀಡಿದರು.
ತಾಲ್ಲೂಕಿನಾದ್ಯಂತ ಅಂದಾಜು 20583 ರೈತರು ಬೆಳೆ ವಿಮೆ ಕಳೆದ ವರ್ಷ ಪಾವತಿಸಿದ್ದು, ಆ ಪೈಕಿ 7223 ಸಾವಿರ ರೈತರಿಗೆ ಅಂದಾಜು 45 ಕೋಟಿ ಬೆಳೆ ವಿಮೆ ಪಾವತಿಯಾಗಿದ್ದು, ಇನ್ನೂ 53 ಕೋಟಿ ಬಾಕಿ ಇದೆ ಎಂದರು. ಖಾಸಗಿ ಬೆಳೆ ವಿಮಾ ಕಂಪನಿಯವರು ರೈತರಿಗೆ ನಿಗಧಿಪಡಿಸಿದ ಮೊತ್ತವನ್ನು ಪಾವತಿ ಮಾಡುವಲ್ಲಿ ವಿಫಲರಾಗಿದ್ಧಾರೆ. ಅದ್ದರಿಂದ ರೈತರಿಗೆ ಮೊಸವೆಸಗಿದ ಬೆಳೆ ವಿಮಾ ಕಂಪನಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರೈತ ಸಂಘದ ಬೇಡಿಕೆಗಳ ಮನವಿ ಪತ್ರವನ್ನು ಸ್ವೀಕರಿಸಿ ಮಾತನಾಡಿ, ತಾಲ್ಲೂಕಿನ ಸಾವಿರಾರು ರೈತರಿಗೆ ಬೆಳೆ ವಿಮಾ ಕಂಪನಿಗಳು ತಾವು ನೀಡಿದ ಭರವಸೆಯಂತೆ ಹಣ ಪಾವತಿ ಮಾಡದೇ ಇರುವುದು ಕಾನೂನು ಬಾಹಿರವಾಗಿದೆ.
ಅದ್ದರಿಂದ ಬೆಳೆ ವಿಮಾ ಕಂಪನಿಯ ವ್ಯವಸ್ಥಾಪಕರನ್ನೇ ಕರೆಸಿ ಮಾತನಾಡಿದ್ದು, ಅವರು ತಾಲ್ಲೂಕಿನ ರೈತರಿಗೆ ನೀಡಬೇಕಿದ್ದ ವಿಮಾ ಹಣವನ್ನು ಸೆ.5ರೊಳಗೆ ಪಾವತಿ ಮಾಡುವ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರು ಅಲ್ಲಿಯ ತನಕ ಕಾಲಾವಕಾಶ ನೀಡಬೇಕಿದೆ. ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ವಿಮಾ ಕಂಪನಿಗಳ ಅಧಿಕಾರಿಗಳೊಂದಿಗೆ ಸರ್ಕಾರ ಸಂಪರ್ಕದಲ್ಲಿದ್ದು, ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ.
ಈ ಹಿನ್ನೆಲೆಯಲ್ಲಿ ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ರೈತರ ಹಿತದೃಷ್ಠಿಯಿಂದ ವಿಮಾ ಕಂಪನಿಗೆ ಕೆಲವು ದಿನಗಳು ಮಾತ್ರ ಕಾಲಾವಕಾಶ ನೀಡಿದೆ. ಅಷ್ಟರೊಳಗೆ ಹಣ ಪಾವತಿಯಾಗದೇ ಇದ್ದಲ್ಲಿ ತಮ್ಮನ್ನು ಸಂಪರ್ಕಿಸುವಂತೆ ಸೂಚನೆ ನೀಡಿದ್ದಾರೆ. ಸಚಿವ ಲಕ್ಷ್ಮಣ್ ಸವದಿ, ವಿವಿಧ ಇಲಾಖೆಯ ಅಧಿಕಾರಿಗಳು, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
