ದಾವಣಗೆರೆ:
ಕೇವಲ ಬಡ್ಡಿ ವ್ಯವಹಾರಗಳಿಂದ ಸಹಕಾರಿ ಸಂಸ್ಥೆಗಳ ಸರ್ವತೋಮುಖ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂದು ರಾಜ್ಯ ಸೌಹಾರ್ದ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ನಿರ್ದೇಶಕ ಜಿ.ನಂಜನಗೌಡ ಅಭಿಪ್ರಾಯಪಟ್ಟರು.ನಗರದ ಭಾರತ ಸೇವಾದಳ ಭವನದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ. ಆಶ್ರಯದಲ್ಲಿ ಸೌಹಾರ್ದ ಸಹಕಾರಿಗಳಿಗಾಗಿ ಜಿಎಸ್ಟಿ ಮತ್ತು ಆದಾಯ ತೆರಿಗೆ ಹಾಗೂ ಬಡ್ಡಿಯೇತರ ಮೂಲಗಳು ಕುರಿತು ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರಿ ಸಂಸ್ಥೆಗಳು ಕೇವಲ ಬಡ್ಡಿ ವ್ಯವಹಾರಗಳಿಂದ ಸರ್ವತೋಮುಖ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಸಂಸ್ಥೆಗಳಿಗೆ ಹೆಚ್ಚು ಸದಸ್ಯರು, ಗ್ರಾಹಕರು ಆರ್ಥಿಕವಾಗಿ ಹೂಡಿಕೆ ಮಾಡುವ ನಿಟ್ಟಿನಲ್ಲಿ ಪ್ರೇರೆಪಣೆ ನೀಡಿದರೆ, ಮಾತ್ರ ಸಹಕಾರ ಸಂಸ್ಥೆಗಳ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಹೇಳಿದರು.
ಸೌಹಾರ್ದ ಸಹಕಾರಿ ಸಂಸ್ಥೆಗಳಿಗೆ ಯಾವುದೇ ರೀತಿಯ ಕಾನೂನಿನ ತೊಡಕುಗಳು ಎದುರಾಗದಂತೆ ನೋಡಿಕೊಳ್ಳಲು ಹಾಗೂ ಸಹಕಾರಿಗಳ ಏಳಿಗೆಗೆ ಶ್ರಮಿಸಲು ಸೌಹಾರ್ದ ಸಂಯುಕ್ತ ಸಹಕಾರಿ ನಿ. ಬದ್ಧವಾಗಿದೆ ಎಂದರು.ನಿತ್ಯವೂ ಕಾನೂನುಗಳು ಕಾಲಕ್ರಮೇಣ ಬದಲಾಗುತ್ತಲೇ ಇರುತ್ತವೆ. ಆದ್ದರಿಂದ ಹೊಸ ಹೊಸ ತಿದ್ದುಪಡಿ ಕಾನೂನುಗಳ ಬಗ್ಗೆ ಮಾಹಿತಿ ಪಡೆಯುವುದು ಅತ್ಯವಶ್ಯಕವಾಗಿದ್ದು, ಅದಕ್ಕಾಗಿ ನಮ್ಮ ಸಹಕಾರಿ ಸಂಸ್ಥೆಯು ವ್ಯವಸ್ಥಾಪಕರು, ಸದಸ್ಯರಿಗೆ ತರಬೇತಿ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಹೀಗಾಗಿ ನೀವು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ದಿ ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ನ ಅಧ್ಯಕ್ಷ ಬಿ.ಸಿ.ಉಮಾಪತಿ ಮಾತನಾಡಿ, ಪ್ರಸ್ತುತ ಸಹಕಾರಿ ಬ್ಯಾಂಕ್ಗಳನ್ನು ನಡೆಸುವುದು ಸುಲಭವಲ್ಲ. ಸದಸ್ಯರಿಗೆ ಸಾಲ ಕೊಡುವ ಮತ್ತು ವಿಶ್ವಾಸಕ್ಕೆ ತೆಗೆದುಕೊಂಡು ನಿಗದಿತ ಸಮಯದಲ್ಲಿ ವಸೂಲಿ ಮಾಡುವ ನಿರ್ವಹಣೆ ಸೇರಿದಂತೆ ಹಲವಾರು ಕಷ್ಟಗಳನ್ನು ಎದುರಿಸುವಂತಹ ಸ್ಥಿತಿ ನಿರ್ಮಾಣವಾಗಿದೆ.
ಸಹಕಾರಿ ಬ್ಯಾಂಕ್ ನಿರ್ದೆಶಕರು ಮೊದಲು ಸಹಕಾರ ಕ್ಷೇತ್ರದಲ್ಲಿ ಆಗುವ ವಿವಿಧ ಕಾಯ್ದೆಗಳ ತಿದ್ದುಪಡಿಗಳ ಬಗ್ಗೆ ಪರಿಪೂರ್ಣ ತಿಳಿವಳಿಕೆ ಹೊಂದಿರಬೇಕು ಎಂದರು.ಕಾರ್ಯಕ್ರಮದಲ್ಲಿ ಚಾರ್ಟಡ್ ಅಕೌಂಟೆಂಟ್ ಬಿ.ವಿ. ರವೀಂದರನಾಥ್ ಉಪಸ್ಥಿತರಿದ್ದರು. ಸಂಜಯ್ ಕೋರಟಕರ್ ಸ್ವಾಗತಿಸಿದರು. ನಟರಾಜ್ ನಿರೂಪಿಸಿದರು. ಪರಮೇಶ್ವರಪ್ಪ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
