ಕೆರೆಗಳು ಭರ್ತಿಯಾಗಲು ಪಕ್ಷಾತೀತ ಹೋರಾಟ ಅಗತ್ಯ

ಶಿರಾ:

      ಶಿರಾ ಭಾಗಕ್ಕೆ ಹೇಮಾವತಿಯ ನೀರು ಹರಿಯುವಲ್ಲಿ ಅನೇಕ ಮಂದಿಯ ಪರಿಶ್ರಮವಿದ್ದು ಇಲ್ಲಿನ ಜನತೆಯ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಪಕ್ಷಾತೀತ ಹೋರಾಟ ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ಎಲ್ಲರ ಸಹಕಾರವೂ ಅಗತ್ಯವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ ತಿಳಿಸಿದರು.

      ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಕೆರೆಗೆ ಹೇಮಾವತಿಯ ನೀರು ಹರಿದು ಬರುತ್ತಿದ್ದು ಸದರಿ ಕೆರೆಯ ಸಮೀಪದ ಪಿಕಪ್‍ಗಳಿಗೆ ಹಾಗೂ ಕಳ್ಳಂಬೆಳ್ಳ ಕೆರೆಗೆ ಮಂಗಳವಾರ ಭೇಟಿ ನೀಡಿ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.

      ಈ ಮೊದಲೇ ಶಿರಾ ಕ್ಷೇತ್ರದ ಜನ ಬರದ ದವಡೆಯಿಂದ ಹತ್ತು ಹಲವು ವರ್ಷಗಳಿಂದಲೂ ನಲುಗುವಂತಾಗಿದ್ದು ಈ ವರ್ಷ ಹದವರಿತು ಮಳೆ ಬಂದಿರುವುದನ್ನು ಬಿಟ್ಟರೆ ತಾಲ್ಲೂಕಿನ ಯಾವುದೇ ಕೆರೆಗಳು ಭರ್ತಿಯಾಗುವಷ್ಟು ಮಳೆಯೇ ಬಂದಿಲ್ಲ. ಎಲ್ಲಾ ಕೆರೆಗಳು ಖಾಲಿಯೇ ಇದ್ದು ಕೆರೆಗಳನ್ನು ತುಂಬಿಸಿಕೊಳ್ಳಲು ಯಾವುದೇ ರಾಜಕಾರಣದ ಒಳ ಸುಳಿಯೂ ಮೈದಳೆಯಬಾರದು ಎಂದರು.

     ಕಳ್ಳಂಬೆಳ್ಳ ಕೆರೆ ಸಂಪೂರ್ಣ ಖಾಲಿಯಾಗಿದ್ದು ಕಳೆದ ಎರಡು ದಿನಗಳ ಹಿಂದಷ್ಟೆ ಕಳ್ಳಂಬೆಳ್ಳ ಕೆರೆಗೆ ಹೇಮಾವತಿ ಪಾದಾರ್ಪಣೆ ಮಾಡಿದೆ. ಮೊದಲ ಹಂತದಲ್ಲಿ ಕೇವಲ 10 ದಿನಗಳು ಮಾತ್ರಾ ನೀರನ್ನು ಹರಿಸುವುದಾಗಿ ಜಿಲ್ಲಾಡಳಿತ ಹೇಳಿದೆಯಾದರೂ ಇನ್ನೂ ಹೆಚ್ಚು ದಿನ ಪೂರೈಸುವಂತೆ ನಾನು ಮುಖ್ಯಮಂತ್ರಿಗಳಿಗೆ ಹಾಗೂ ಜಿಲ್ಲಾ ಸಚಿವರಿಗೆ ಮನವಿ ಮಾಡಿದ್ದೇನೆ ಎಂದರು.ಕುಡಿಯಲು ನೀರು ಕೇಳುವುದು ನಮ್ಮ ಹಕ್ಕೂ. ನಮ್ಮ ಪಾಲಿನ ನೀರನ್ನು ನಾವು ಪಡೆಯದಿದ್ದರೆ ಕುಡಿಯಲು ನೀರಿಲ್ಲದೆ ಪರಿತಪಿಸಬೇಕಾಗುತ್ತದೆ. ಯಾವುದೇ ರಾಜಕೀಯ ದುರೀಣರಾಗಲಿ, ಸಂಘ-ಸಂಸ್ಥೆಗಳಾಗಲಿ ಪಕ್ಷಾತೀತವಾಗಿ ಒಗ್ಗೂಡಿ ನೀರನ್ನು ಹರಿಸಿಕೊಳ್ಳಲು ಸರ್ಕಾರಕ್ಕೆ ಒತ್ತಡ ತರಬೇಕೇ ಹೊರತು ಹರಿದು ಬರುವ ನೀರಿಗೆ ಯಾರೂ ಕೂಡಾ ಅಡ್ಡಗಾಲಾಗಬಾರದು ಎಂದರು.

     ಗೋರೂರು ಜಲಾಶಯ ಭಾಗದಲ್ಲಿ ಉತ್ತಮ ಮಳೆ ಬಂದಿದೆ. ಈ ವರ್ಷ ಮದಲೂರು ಕೆರೆಗೂ ಹೇಮಾವತಿಯ ನೀರು ಹರಿಸಿಕೊಳ್ಳುವ ಅಗತ್ಯವಿದ್ದು. ಮದಲೂರು ಭಾಗಕ್ಕೂ ನೀರು ಬಂದರೆ ಅರ್ಧ ಭಾಗದಷ್ಟು ತಾಲ್ಲೂಕಿನ ರೈತರ ಭೂಮಿಯಲ್ಲಿ ಅಂತರ್ಜಲ ಹೆಚ್ಚುತ್ತದೆ. ಹೀಗಾಗಿ ಮದಲೂರು ಕೆರೆಗೂ ಈ ವರ್ಷ ನೀರನ್ನು ಹರಿಸಿಕೊಳ್ಳುವ ಪ್ರಯತ್ನ ಎಲ್ಲರದ್ದಾಗಬೇಕು ಎಂದರು.

     ಜಿ.ಪಂ. ಮಾಜಿ ಸದಸ್ಯ ಸಿ.ಆರ್.ಉಮೇಶ್, ಜಿ.ಪಂ. ಮಾಜಿ ಉಪಾಧ್ಯಕ್ಷ ಮುದಿಮಡು ರಂಗಸ್ವಾಮಯ್ಯ, ಜೆ.ಡಿ.ಎಸ್. ಮುಖಂಡರಾದ ಸುಧಾಕರಗೌಡ, ಆಂಜಿನಪ್ಪ ಸೇರಿದಂತೆ ಕಳ್ಳಂಬೆಳ್ಳ ಹೋಬಳಿಯ ಅನೇಕ ಜೆ.ಡಿ.ಎಸ್. ಮುಖಂಡರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link