ಚಿಕ್ಕನಾಯಕನಹಳ್ಳಿ :
ತಾಲ್ಲೂಕಿನ 26 ಕೆರೆಗಳ ನೀರು ತುಂಬಿಸುವ ಹೇಮಾವತಿ ನಾಲಾ ಕಾಮಗಾರಿಯನ್ನು ಚುರುಕುಗೊಳಿಸಬೇಕೆಂದು ತಾಲ್ಲೂಕು ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಡಾ|| ಪರಮೇಶ್ವರ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ತಾಲ್ಲೂಕಿನ ತಿಗಳನಹಳ್ಳಿ ಸಮೀಪದ ಹೇಮಾವತಿ ನಾಲೆ ಕಾಮಗಾರಿಯನ್ನು ಸ್ಥಳಕ್ಕೆ ಭೇಟಿ ನೀಡಿದ ತಾಲ್ಲೂಕು ನೀರಾವರಿ ಸಮಿತಿಯ ಪದಾಧಿಕಾರಿಗಳು ವೀಕ್ಷಣಾ ಸಂದರ್ಭದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದರು.
ತಾಲ್ಲೂಕಿನಲ್ಲಿ ಕಳೆದ 15 ವರ್ಷಗಳಿಂದ ಕುಡಿಯುವ ನೀರಿಗಾಗಿ ಕ್ಷೇತ್ರದಲ್ಲಿ ಹೋರಾಟವನ್ನು ನಡೆಸಿಕೊಂಡು ಬರಲಾಗಿದ್ದು, ಹೇಮಾವತಿ ಕಾಮಗಾರಿಯು ಮಂದಗತಿಯಲ್ಲಿ ಸಾಗುತ್ತಿದೆ. ಅಂತರ್ಜಲ ಕುಸಿದಿರುವುದರಿಂದ ರೈತರ ಬೋರುಗಳಲ್ಲಿ ಹಾಗೂ ಊರುಗಳಲ್ಲಿ ನೀರಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾ ಮಂತ್ರಿಗಳು ಹೇಮಾವತಿ ಯೋಜನೆಯ ಕಾಮಗಾರಿಯನ್ನು ಚುರುಕಾಗಿ ಕೆಲಸ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಒತ್ತಡವನ್ನು ಹೇರಬೇಕು.
ಬರುವ ಮುಂಗಾರಿನ ಹೊತ್ತಿಗೆ ಕೆರೆಗಳಿಗೆ ನೀರು ಹರಿಯಬೇಕು ಎಂದು ಒತ್ತಾಯಿಸಿದರು. ರೈತ ಮುಖಂಡ ಕೆಂಕೆರೆ ಸತೀಶ್ ಮಾತನಾಡಿ, ಚುನಾವಣೆ ಬಂದಾಗ ರಾಜಕೀಯ ಪಕ್ಷಗಳು ನೀರಾವರಿ ಬಗ್ಗೆ ಮಾತನಾಡುತ್ತಾರೆ. ಅಧಿಕಾರ ಸಿಕ್ಕಾಗ ನೀರಾವರಿ ಬಗ್ಗೆ ಉದಾಸೀನ ಮಾಡುತ್ತಾರೆ. ಜನರಿಗೆ ರಾಜಕೀಯದ ಮಾತು ಬೇಕಾಗಿಲ್ಲ ಕುಡಿಯುವ ನೀರು ಕೆರೆಗಳಿಗೆ ಬಂದರೆ ಸಾಕು ಎಂದರು. ಈ ಸಂದರ್ಭದಲ್ಲಿ ನೀರಾವರಿ ಹೋರಾಟ ಸಮಿತಿಯ ಕೆಂಕೆರೆ ಸತೀಶ್, ಕೆ.ಜಿ.ಕೃಷ್ಣೆಗೌಡ, ಸಿ.ಡಿ.ಸುರೇಶ್, ಚಂದ್ರಪ್ಪ, ನಾಗರಾಜು, ಕೃಷ್ಣಪ್ಪ, ನಿಶಾನಿ ಕಿರಣ್ , ಮಾರಿಮುತ್ತು ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ







