ತುಮಕೂರು

ಸಂಗೀತ, ಸಾಹಿತ್ಯ ಕೆಲಗಳಲ್ಲಿ ಆಸಕ್ತಿಯಿಲ್ಲದವನು ಬಾಲ ಕೊಂಬು ಇಲ್ಲದ ಪಶುವಿದ್ದಂತೆ ಎಂದು ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಕೆ.ಚಿದಾನಂದಗೌಡ ನುಡಿದರು.
ವಿಶ್ವಮಾನವ ಸಾಂಸ್ಕೃತಿಕ ಪ್ರತಿಷ್ಠಾನದ ತುಮಕೂರು ಜಿಲ್ಲಾ ಘಟಕ ಹಾಗೂ ಶ್ರೀ ಸಿದ್ಧಾರ್ಥ ಇನ್ಸ್ಟಿಟ್ಯೂಟ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್ನ ಸಹಯೋಗದಲ್ಲಿ ನಗರದ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಸೆಮಿನಾರ್ಹಾಲ್ನಲ್ಲಿ ಆಯೋಜಿಸಲಾಗಿದ್ದ ವಿಶ್ವಮಾನವ ಕುವೆಂಪು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಇಂದಿನ ಕಾಲದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಅಗತ್ಯ. ವಿಶ್ವಮಾನವ, ಸಾಂಸ್ಕೃತಿಕ ಪ್ರತಿಷ್ಠಾನ, ಸಿದ್ಧಾರ್ಥ ಈ ಪದಗಳಿಗೆ ವೈಶಿಷ್ಠ ಹಾಗೂ ಮಾನ್ಯತೆ ಇದೆ. ಸಾಹಿತ್ಯ ಮತ್ತು ಸಂಸ್ಕøತಿಗೆ ನಮ್ಮ ಕರ್ನಾಟಕ ಹಾಗೂ ಭಾರತದಲ್ಲಿ ಒತ್ತು ನೀಡುತ್ತೇವೆ ಎಂದರಲ್ಲದೆ, ಒಮ್ಮೆ ಬ್ರಹ್ಮ ದೇವನು ಚಿಂತಾಗ್ರಸ್ಥನಾಗಿ ಕುಳಿತಾಗ ಸರಸ್ವತಿ ದೇವಿಯು ಬ್ರಹ್ಮ ದೇವನ್ನು ಕೇಳುತ್ತಾಳೆ. ಯಾಕೆ ಹೀಗೆ ಕುಳಿತಿದ್ದೀರಾ ಎಂದಾಗ ಅದಕ್ಕೆ ಬ್ರಹ್ಮನು ಮನುಕುಲವನ್ನು ಸೃಷ್ಠಿಸಿದ್ದೇನೆ.
ಆದರೆ ಅವರು ಸಂತೋಷವಾಗಿಲ್ಲ ಎಂದು ತಿಳಿಸುತ್ತಾನೆ. ಅದಕ್ಕೆ ಸgಸ್ವತಿ ದೇವಿಯು ನೀವು ಷಡ್ರಸಗಳನ್ನು ಸೃಷ್ಟಿ ಮಾಡಿದ್ದೀರಾ ನಾನು ಅದಕ್ಕೆ ನವರಸಗಳನ್ನು ಸೃಷ್ಟಿ ಮಾಡಿ ಮನುಕುಲವನ್ನು ಸಂತಸವಾಗಿರುವಂತೆ ಮಾಡುತ್ತೇನೆ ಎನ್ನುತ್ತಾಳೆ. ಅದಕ್ಕೆ ಪೂರಕವಾಗಿ ಇಂದು ಸಾಹಿತ್ಯದಲ್ಲಿ, ಭರತನಾಟ್ಯದಲ್ಲಿ ನವರಸಗಳನ್ನು ಪ್ರದರ್ಶಿಸಲಾಗುತ್ತದೆ ಎಂದು ಸಾಹಿತ್ಯದ ಬಗ್ಗೆ ತಿಳಿಸಿದರು.
ಕುವೆಂಪುರವರ ಕೊನೆ ದಿನಗಳಲ್ಲಿ ಅವರನ್ನು ಭೇಟಿ ಮಾಡಲು ಬರುತ್ತಿದ್ದ ಪ್ರತಿಯೊಬ್ಬರಿಗೂ ವಿಶ್ವಮಾನವ ಸಂದೇಶದ ಪ್ರತಿಗಳನ್ನು ನೀಡುತ್ತಿದ್ದರು. ಅದನ್ನು ಓದಿ ಪಾಲಿಸಬೇಕು ಎಂದು ತಿಳಿಸುತ್ತಿದ್ದರು. ಅವರು ಹೇಳಿದಂತೆ ಆ ಪ್ರತಿಯಲ್ಲಿ ಪಂಚಸೂತ್ರಗಳನ್ನು ಮುದ್ರಿಸಲಾಗಿತ್ತು. ಅದನ್ನು ಓದಿದವರಿಗೆ ಅದರ ಮಹತ್ವ ಏನು ಎಂಬುದು ತಿಳಿಯುತ್ತದೆ. ಎಂದರಲ್ಲದೆ, ಕುವೆಂಪುರವರ ವಿಶ್ವಮಾನವ ಸಂದೇಶದ ಪಂಚಸೂತ್ರಗಳನ್ನು ಎಳೆಎಳೆಯಾಗಿ ವಿವರಿಸಿದರು.
ಕುವೆಂಪುವರವರ ಪುತ್ರಿ ಹಾಗೂ ಲೇಖಕಿ ತಾರಿಣಿ ಚಿದಾನಂದಗೌಡ ಮಾತನಾಡಿ, ವಿಶ್ವಮಾನವ ಪ್ರಶಸ್ತಿ ನೀಡಿರುವುದು ಸಂತಸದ ವಿಷಯವಾಗಿದೆ. ಮಕ್ಕಳು ಮನೆಗೆ ಭೇಟಿ ನೀಡಿದಾಗ ಕುವೆಂಪುರವರು ವಿಶ್ವಮಾನವ ಸಂದೇಶದ ಪ್ರತಿಯನ್ನು ನೀಡಿ ವಿಶ್ವಮಾನವರಾಗಿ ಎಂದು ಹಾರೈಸುತ್ತಿದ್ದರು. ಒಮ್ಮೆ ಸೋದರಮಾವನ ಮನೆಗೆ ಹೋದಾಗ ಅಲ್ಲಿ ನಡೆದ ಘಟನೆಯನ್ನು ಉದಾಹರಣೆಯಾಗಿ ತಿಳಿಸಿ ಹುಟ್ಟುವಾಗ ವಿಶ್ವಮಾನವನಾಗಿಯೆ ಹುಟ್ಟಿದ ಮಗುವನ್ನು ನಾವು ದೇಶ, ಭಾಷೆ, ಮತ, ಜಾತಿ, ಜನಾಂಗ, ವರ್ಣ ಇತ್ಯಾದಿ ಉಪಾಧಿಗಳಿಂದ ಬದ್ಧನನ್ನಾಗಿ ಮಾಡುತ್ತೇವೆ. ಅವೆಲ್ಲವುಗಳಿಂದ ಪಾರಾಗಿ ಅವನನ್ನು ವಿಶ್ವಮಾನವನನ್ನಾಗಿ ಪರಿವರ್ತಿಸುವುದೆ ನಮ್ಮ ವಿದ್ಯೆ, ಸಂಸ್ಕೃತಿ, ನಾಗರಿಕತೆ ಎಲ್ಲದರ ಆದ್ಯ ಕರ್ತವ್ಯವಾಗಬೇಕು ಎಂದು ತಿಳಿಸಿದರು.
ಒಮ್ಮೆ ಕುವೆಂಪುರವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಾಗ ನಾಗಮಂಗಲದಲ್ಲಿ ದೊಡ್ಡ ಕಾರ್ಯಕ್ರಮ ಆಯೋಜಿಸಿ ಅಲ್ಲಿ ಕುವೆಂಪುರವರನ್ನು ಸನ್ಮಾನಿಸಿ ನಾಟ್ಯಸರಸ್ವತಿಯ ಪಂಚಲೋಹದ ವಿಗ್ರಹವನ್ನು ನೀಡಲಾಗಿತ್ತು. ಅದನ್ನು ಮನೆಯಲ್ಲಿದ್ದ ಹಳೆಯ ರೇಡಿಯೋ ಮೇಲ್ಭಾಗದಲ್ಲಿ ಇಡಲಾಗಿತ್ತು. ಒಮ್ಮೆ ದೊರೆಸ್ವಾಮಿ ಅಯ್ಯಂಗಾರ್ರವರ ವೀಣಾ ವಾದನವನ್ನು ರೇಡಿಯೋದಲ್ಲಿ ಕೇಳುವಾಗ ಆ ವಿಗ್ರಹವನ್ನು ನೋಡುತ್ತಾ ವೀಣಾವಾದನವನ್ನು ಕೇಳುತ್ತಾ ಒಂದು ಕವನವನ್ನು ರಚಿಸಿದ್ದರು. ಅವರು ಕವನ ರಚಿಸಲು ಸಂಗೀತ ಸಾಹಿತ್ಯವೇ ಪರಿಣಾಮ ಬೀರಿತ್ತು ಎಂದು ಕುವೆಂಪುರವರ ಕವನ ರಚನೆಯ ಅನುಭವವನ್ನು ತಿಳಿಸಿದರು.
ಭಾರತ ಸಂಗೀತದ ಹಿನ್ನೆಲೆ ಗಾಯಕಿ ಡಾ.ಶಮಿತಾ ಮಲ್ನಾಡ್ ಮಾತನಾಡಿ, ಕನ್ನಡ ಎಂದರೆ ಕುವೆಂಪು, ಕುವೆಂಪು ಅಂದರೆ ಕನ್ನಡ. ಕನ್ನಡದಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದ ಕುವೆಂಪುರವರ ಓಡಾಡಿದ ಸ್ಥಳದಲ್ಲಿ ನಾನು ಓಡಾಡಿದ್ದೇನೆ ಎಂಬ ಹಿರಿಮೆ ನನಗಿದೆ. ನಾವು ಹೇಳಿದ್ದನ್ನು ನಾವೇ ಪ್ರತಿಪಾದಿಸುವುದಿಲ್ಲ. ಹಾಗೆ ಪ್ರತಿಪಾದಿಸುವವರು ತುಂಬಾ ವಿರಳವಾಗಿರುತ್ತಾರೆ. ಆದರೆ ಕುವೆಂಪುರವರು ತಾವು ಹೇಳಿದ್ದನ್ನು, ಬರೆದಿದ್ದನ್ನು ಚಾಚುತಪ್ಪದೆ ಪಾಲಿಸುತ್ತಿದ್ದರು.
ಅವರ ಜೀವನ ನಮ್ಮೆಲ್ಲರಿಗೆ ಆದರ್ಶವಾಗಿದೆ. ನಾವು ಅವರನ್ನು ನೋಡದೇ ಇದ್ದರೂ ಅವರ ಮಗಳ ಮುಖದಲ್ಲಿ ಕುವೆಂಪುರವರು ಕಾಣುತ್ತಾರೆ ಎಂದು ತಿಳಿಸಿದರಲ್ಲದೆ, ವೈದ್ಯೆಯಾಗಿ ಜನರ ಸೇವೆ ಮಾಡಬೇಕು ಎಂಬ ಆಶಯವನ್ನಿಟ್ಟುಕೊಂಡಿದ್ದ ಅವರು ಹೇಗೆ ಗಾಯಕ ಲೋಕಕ್ಕೆ ಆಕಸ್ಮಿಕವಾಗಿ ಬಂದರು ಎಂಬ ಹಿನ್ನೆಲೆಯಲ್ಲಿ ವಿವರಿಸಿ, ತಾವೇ ರಾಗ ಸಂಯೋಜನೆ ಮಾಡಿದ ಕುವೆಂಪುರವರ ಆನಂದಮಯ ಎಂಬ ಕವನ ವಾಚನ ಮಾಡಿದರು.
ಪ್ರಶಸ್ತಿ ಸ್ವೀಕಾರ ಮಾಡಿ ಮಾತನಾಡಿದ ಶ್ರೀ ಸಿದ್ಧಾರ್ಥ ಇನ್ಸ್ಟಿಟ್ಯೂಟ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್ನ ಪ್ರಾಂಶುಪಾಲ ಡಾ.ಎನ್.ಎಸ್.ರವಿಕುಮಾರ್ ಮಾತನಾಡಿ, ಕನ್ನಡದಲ್ಲಿ ಸಾಕಷ್ಟು ಕವಿಗಳು ಬಂದು ಹೋಗಿದ್ದಾರೆ. ಅವರಲ್ಲಿ ಒಬ್ಬೊಬ್ಬರಿಗೆ ಒಂದೊಂದು ಹೆಸರಿದೆ. ಆದರೆ ಕುವೆಂಪುರವರಿಗೆ ಮಾತ್ರ ರಸಋಷಿ ಎಂಬ ಹೆಸರು ಇದೆ. ನಾವು ಈಗಲೂ ಕುವೆಂಪುರವರ ಬಗ್ಗೆ ಮಾತನಾಡಬೇಕಾದರೆ ರಸಋಷಿ ಎಂದೇ ಪ್ರಾರಂಭ ಮಾಡುತ್ತೇವೆ. ಅವರು ರಚಿಸಿದ ಓನನ್ನ ಕೇತನ ಆಗು ನಿ ಅನಿಕೇತನ ಕವನದಂತೆ ನಡೆದರೆ ಸಾಕು ಎಂದು ತಿಳಿಸಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಜಿಲ್ಲಾಧ್ಯಕ್ಷ ಡಾ.ಬಿ.ತೇಜಸ್ವಿಕಿರಣ್, ಕುವೆಂಪು ಅವರ ಆದರ್ಶಗಳನ್ನು ನಮ್ಮ ದೈನಂದಿನ ಜೇವನದಲ್ಲಿ ಅಳವಡಿಸಿ ಕೊಳ್ಳಬೇಕು ಎಂಬ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕುವೆಂಪುರವರ ಬರವಣಿಗೆ ಇಂದಿನ ಜೀವನಕ್ಕೆ ಆದರ್ಶವಾಗಿದೆ. ಜ್ವಲಂತ ಸಮಸ್ಯೆಗಳ ಬಗ್ಗೆ ಬರವಣಿಗೆ ಮೂಲಕ ತಿಳಿಸಿದ್ದಾರೆ. ಶ್ರೀ ರಾಮಾಯಣ ದರ್ಶನಂನಲ್ಲಿ ಸಮಾನತೆಗೆ ಆದ್ಯತೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ವಿವಿಧ ಕಲೆ ಹಾಗೂ ಪ್ರತಿಭೆಯುಳ್ಳವರನ್ನು ಗುರುತಿಸಿ ಕುವೆಂಪುರವರ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ತಿಳಿಸಿದರು.
ಕುವೆಂಪು ಪ್ರತಿಷ್ಠಾನದ ರಾಜ್ಯಾಧ್ಯಕ್ಷ ಡಾ.ಎಂ.ಪುಟ್ಟರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಎಸ್ಎಸ್ಐಟಿ ಬಿಸಿನೆಸ್ ಮ್ಯಾನೇಜ್ಮೆಂಟ್ನ ಪ್ರಾಂಶುಪಾಲ ಡಾ.ಎನ್.ಎಸ್.ರವಿಕುಮಾರ್, ಭಾರತೀಯ ಹಿನ್ನೆಲೆ ಗಾಯಕಿ ಡಾ.ಶಮಿತಾ ಮಲ್ನಾಡ್ರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಹಿರಿಯ ಸಾಹಿತಿ ಜಿ.ಕೆ.ಕುಲಕರ್ಣಿ, ಉಪನ್ಯಾಸಕಿ ಎಲ್.ವೆಂಕಟಮ್ಮ, ವಕೀಲರಾದ ಬಸಪ್ಪ, ಲೇಖಕಿ ಬಿ.ಎನ್.ಪರಿಮಳ ಸತೀಶ್, ಗಾಯಕರಾದ ಎನ್.ಎಸ್.ಮಮತಾ, ಗಿರಿಜಾಗೌಡ, ಉಪನ್ಯಾಸಕಾರದ ನಾಗೇಂದ್ರಕುಮಾರ್ ಎಸ್.ಪಿ., ಬಿ.ಎಸ್.ನಳಿನಾಕ್ಷಿ ಅವರಿಗೆ ವಿಶ್ವಮಾನವ ಕುವೆಂಪು ಪುರಸ್ಕಾರ ನೀಡಿ ಗೌರವಿಸಲಾಯಿತು. ಟಿ.ಎನ್.ವಾಸುದೇವಾಚಾರ್ ಮತ್ತು ಎಂ.ಜ್ಞಾನೇಶ್ವರಿ, ಡಾ.ಬಿ.ಡಿ.ಜಗದೀಶ್ ಮತ್ತು ಎನ್.ಎಂ.ಸುಮಿತ್ರಾ, ನರಸಿಂಹಮೂರ್ತಿ ಮತ್ತು ಬಿ.ಆರ್.ಹಂಸವೇಣಿ, ಡಾ.ಸೋ.ಮು.ಭಾಸ್ಕರಾಚಾರ್ ಮತ್ತು ಡಾ.ಎನ್.ಎ.ಜಯ ದಂಪತಿಗಳಿಗೆ ವಿಶ್ವಮಾನವ ಕುವೆಂಪು ಆದರ್ಶ ದಂಪತಿಗಳ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣವನ್ನು ಪ್ರತಿಷ್ಠಾನದ ಜಿಲ್ಲಾಧ್ಯಕ್ಷ ಡಾ.ಬಿ.ತೇಜಸ್ವಿಕಿರಣ್ ಮಾಡಿದರೆ, ನಿರೂಪಣೆಯನ್ನು ಡಾ.ಆರ್.ರಾಜೇಶ್ವರಿ ನೆರವೇರಿಸಿದರು. ವಂದನಾರ್ಪಣೆಯನ್ನು ಕಾರ್ಯದರ್ಶಿ ಟಿ.ವಿ.ಸುರೇಂದ್ರ ಸಲ್ಲಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
