ಕೋವಿಡ್ ಹೆಲ್ತ್ ಕೇರ್ ಸೆಂಟರ್‍ಗೆ ಜಿಲ್ಲಾಧಿಕಾರಿ ಭೇಟಿ

ಹಾವೇರಿ

   ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ ಶಿಗ್ಗಾಂವ ತಾಲೂಕಾ ಡೆಡಿಕೇಟೆಡ್ ಕೋವಿಡ್ ಹೆಲ್ತ್‍ಕೇರ್ ಸೆಂಟರ್‍ಗೆ ಭೇಟಿ ನೀಡಿ ಆಕ್ಸಿಜನ್ ಪೂರೈಕೆ ಘಟಕ, ಹಾಸಿಗೆ ವ್ಯವಸ್ಥೆ ಕುರಿತಂತೆ ಪರಿಶೀಲನೆ ನಡೆಸಿ ವೈದ್ಯರಿಂದ ಮಾಹಿತಿ ಪಡೆದುಕೊಂಡರು.

   ಬುಧವಾರ ಶಿಗ್ಗಾಂವ ಡೆಡಿಕೇಟೆಡ್ ಕೋವಿಡ್ ಹೆಲ್ತ್‍ಕೇರ್ ಸೆಂಟರ್‍ಗೆ ಭೇಟಿ ನೀಡಿದ ಅವರು ಕೋವಿಡ್ ಪಾಸಿಟಿವ್ ವ್ಯಕ್ತಿಗಳ ಚಿಕಿತ್ಸೆಯಲ್ಲಿ ಯಾವುದೇ ಲೋಪವಾಗಬಾರದು. ಯಾವುದೇ ಕೊರತೆಗಳಾಗಬಾರದು. ಆರೈಕೆಯಲ್ಲಿ ಯಾವುದೇ ವ್ಯತ್ಯಯವಾಗಬಾರದು. ವೈದ್ಯಕೀಯ ವಿಭಾಗದಿಂದ ಯಾವುದೇ ದೂರುಗಳು ಬರದಂತೆ ಎಲ್ಲ ಮುನ್ನೆಚ್ಚರಿಕೆ ವಹಿಸುವಂತೆ ಶಿಗ್ಗಾಂವ ತಾಲೂಕಾ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

   ಪ್ರೆಸರೈಸ್ ಆಕ್ಸಿಜನ್ ಪೂರೈಕೆಯಲ್ಲಿ ಯಾವುದೇ ಲೋಪವಾಗದಂತೆ ಗರಿಷ್ಠ ಎಚ್ಚರಿಕೆ ಇರಬೇಕು. ಯಾವುದೇ ತಾಂತ್ರಿಕ ತೊಂದರೆಗಳು ಯಂತ್ರದಲ್ಲಿ ಎದುರಾದರೂ ತಕ್ಷಣ ದುರಸ್ತಿಗೆ ಕ್ರಮವಹಿಸಬೇಕು. ವೈದ್ಯಕೀಯ ಸಿಬ್ಬಂದಿ ಹಾಗೂ ಅರೇವೈದ್ಯಕೀಯ ಸಿಬ್ಬಂದಿಗಳು ಸಕಾಲದಲ್ಲಿ ರೋಗಿಗಳಿಗೆ ಸ್ಪಂದಿಸಬೇಕು ಎಂದು ಸಲಹೆ ನೀಡಿದರು.

    ಇದೇ ಸಂದರ್ಭದಲ್ಲಿ ಕೋವಿಡ್ ಚಿಕಿತ್ಸೆಗಾಗಿ ಕೈಗೊಂಡಿರುವ ಹಾಸಿಗೆ ವ್ಯವಸ್ಥೆ, ವೆಂಟಿಲೇಟರ್ ವ್ಯವಸ್ಥೆ, ಬೆಡ್‍ಗಳ ವ್ಯವಸ್ಥೆ, ಸ್ವಚ್ಛತೆ, ಊಟದ ವ್ಯವಸ್ಥೆ, ಶೌಚಾಲಯಗಳ ಸ್ವಚ್ಛತೆ ಕುರಿತಂತೆ ಪ್ರತಿ ವಿಭಾಗಕ್ಕೂ ತೆರಳಿ ಪರಿಶೀಲನೆ ನಡೆಸಿ ಸಿಬ್ಬಂದಿಗಳಿಗೆ ಅಗತ್ಯ ಸಲಹೆಗಳನ್ನು ನೀಡಿದರು.

   ಜಿಲ್ಲಾಧಿಕಾರಿಗಳೊಂದಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಮೇಶ ದೇಸಾಯಿ, ಅಪರ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ, ಶಿಗ್ಗಾಂವ ತಹಶೀಲ್ದಾರ ಉಪಸ್ಥಿತರಿದ್ದರು.ಕೋವಿಡ್ ಚಿಕಿತ್ಸೆಗೆ ವ್ಯವಸ್ಥೆ: ಜಿಲ್ಲಾ ಆಸ್ಪತ್ರೆಯಲ್ಲಿ 78 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದ್ದು, 10 ಐ.ಸಿ.ಯು. ಬೆಡ್‍ಗಳ ವ್ಯವಸ್ಥೆ ಮಾಡಲಾಗಿದೆ. 58 ಕೇಂದ್ರೀಕೃತ ಪ್ರೆಸರೈಸ್ ಆಕ್ಸಿಜನ್ ವ್ಯವಸ್ಥೆ ಮಾಡಲಾಗಿದೆ. 36ವೆಂಟಿಲೇಟರ್ ಅಳವಡಿಸಲಾಗಿದೆ.

   ಅವಶ್ಯಕತೆಗನುಗುಣವಾಗಿ ವೈದ್ಯಾಧಿಕಾರಿಗಳ ನೇಮಕಮಾತಿ ನಡೆಸಲಾಗಿದೆ. ಈಗಾಗಲೇ 55 ವೈದ್ಯಾಧಿಕಾರಿಗಳ ನೇಮಕಾತಿ ಮಾಡಿಕೊಳ್ಳಲಾಗಿದೆ. 20 ಶೂಶ್ರುಷಕರು, 25 ಲ್ಯಾಬ್‍ಟೆಕ್ನಿಷಿಯನ್‍ಗಳನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ರೂ.150 ಲಕ್ಷ ವೆಚ್ಚದಲ್ಲಿ ಕೋವಿಡ್ ಶಂಕಿತರ ಗಂಟಲು ದ್ರವ ಪರೀಕ್ಷೆಗಾಗಿ ಸುಸಜ್ಜಿತ ಪ್ರಯೋಗಾಲಯ ತೆರೆಯಲಾಗಿದೆ. 8000 ಸಾವಿರ ರ್ಯಾಪಿಡ್ ಆಂಟಿಜನ್ ಕಿಟ್‍ಗಳು ಜಿಲ್ಲೆಗಳು ಜಿಲ್ಲೆಗೆ ಪೂರೈಕೆಯಾಗಿವೆ. ಅಗತ್ಯಕ್ಕೆ ತಕ್ಕಂತೆ ವೈದ್ಯಕೀಯ ಸೌಲಭ್ಯಗಳ ಹೆಚ್ಚಳಕ್ಕೆ ಕ್ರಮ ವಹಿಸಲಾಗುತ್ತಿದೆ.

   ಸವಣೂರು, ಶಿಗ್ಗಾಂವ, ರಾಣೇಬೆನ್ನೂರ ಹಾಗೂ ಹಿರೇಕೆರೂರಿನಲ್ಲಿ ತಲಾ 50 ಹಾಸಿಗೆಯ ಡೆಡಿಕೆಟೆಡ್ ಕೋವಿಡ್ ಹೆಲ್ತ್‍ಕೇರ್ ಸೆಂಟರ್‍ಗಳನ್ನು ತೆರೆದು ಸೌಲಭ್ಯ ಕಲ್ಪಿಸಲಾಗಿದೆ. ಬ್ಯಾಡಗಿ ಮತ್ತು ಹಾನಗಲ್ ತಾಲೂಕು ಆಸ್ಪತ್ರೆಗಳಲ್ಲಿ ಕೋವಿಡ್ ಹೆಲ್ತ್‍ಕೇರ್ ಸೆಂಟರ್ ಆರಂಭಿಸುವ ಕಾರ್ಯ ಪ್ರಗತಿಯಲ್ಲಿದೆ.

    ಬಸಾಪುರ ಕಿತ್ತೂರರಾಣಿ ಚೆನ್ನಮ್ಮ ವಸತಿ ಶಾಲೆ, ಕಲಕೇರಿ ಇಂದಿರಾಗಾಂಧಿ ವಸತಿ ಶಾಲೆ, ಹಲಗೇರಿ ಪಿಶಿಷ್ಟ ವರ್ಗಗಳ ಬಾಲಕಿಯರ ಹಾಸ್ಟೇಲ್, ದೂದಿಹಳ್ಳಿ ಕಿತ್ತೂರಾಣಿ ಚೆನ್ನಮ್ಮ ವಸತಿ ಶಾಲೆ, ಬ್ಯಾಡಗಿ ಕಿತ್ತೂರರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರ್‍ಗಳನ್ನು ತೆರೆಯಲಾಗಿದೆ. ಈಗಾಗಲೇ 400 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಅಕ್ಕಿಆಲೂರು ಹಾಗೂ ಬಾಡ ವಸತಿ ಶಾಲೆಯಲ್ಲಿ ಸೌಲಭ್ಯ ಕಲ್ಪಿಸುವ ಕಾರ್ಯ ಪ್ರಗತಿಯಲ್ಲಿದೆ. ವಾರದಲ್ಲಿ ಹೆಚ್ಚುವರಿಯಾಗಿ 485 ಹಾಸಿಗೆಗಳ ವ್ಯವಸ್ಥೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹೆಚ್ಚುವರಿಯಾಗಿ ಒಟ್ಟಾರೆ 830 ಹಾಸಿಗೆಗಳ ವ್ಯವಸ್ಥೆ ಕಲ್ಪಿಸುವ ಕಾರ್ಯ ಪ್ರಗತಿಯಲ್ಲಿದೆ.

    ತಲಾ 50 ಹಾಸಿಗೆ ಸೌಲಭ್ಯಯುಳ್ಳ ಕೋವಿಡ್ ಕೇರ್ ಸೆಂಟರ್‍ಗಳನ್ನು ತೆರೆದು 400 ಹಾಸಿಗೆಗಳ ಸೌಲಭ್ಯ ಕಲ್ಪಿಸಲಾಗಿದೆ. ಜಿಲ್ಲೆಯಾದ್ಯಂತ 425 ಹಾಸಿಗೆಗಳಿಗೆ ಪ್ರೆಸರೈಸ್ ಆಕ್ಸಿಜನ್ ಪೂರೈಕೆ ಕಲ್ಪಿಸುವ ಕಾರ್ಯ ಪ್ರಗತಿಯಲ್ಲಿದೆ. ಈಗಾಗಲೇ 185 ಹಾಸಿಗೆಗಳಿಗೆ ವ್ಯವಸ್ಥೆ ಕಲ್ಪಿಸಲಾಗಿದೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ