ಆಟಿಸಂ ಗುರುತಿಸಿ, ಮಕ್ಕಳ ಬೆಳವಣಿಗೆಗೆ ಸಹಕರಿಸಿ

ದಾವಣಗೆರೆ:

          ನರ ಮಂಡಲದ ಬೆಳವಣಿಗೆಯ ನ್ಯೂನ್ಯತೆಯಿಂದ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಆಟಿಸಂ(ಸ್ವಲೀನತೆ) ವಿಕಲತೆಯನ್ನು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಗುರುತಿಸುವ ಮೂಲಕ ಮಕ್ಕಳ ಬೆಳವಣಿಗೆಗೆ ಸಹಕರಿಸಬೇಕೆಂದು ಸೃಷ್ಠಿ ಸ್ಪೆಷಲ್ ಅಕಾಡೆಮಿಯ ಸಂಸ್ಥಾಪಕಿ ಸುಚಿತಾ ಸೋಮಶೇಖರಯ್ಯ ಕಿವಿಮಾತು ಹೇಳಿದರು

           ನಗರದ ರೋಟರಿ ಬಾಲ ಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಡಿಸೆಬಿಲಿಟಿ ಎನ್‍ಜಿಒಸ್ ಅಲೈಯನ್ಸ್ ಹಾಗೂ ಸ್ಪೂರ್ತಿ ಸಂಸ್ಥೆ ಇವುಗಳ ಸಂಯುಕ್ತಾಶ್ರಯದಲ್ಲಿ ಡಿ.10ರಿಂದ 12ರ ವರೆಗೆ ನಡೆಯಲಿರುವ ಗ್ಲೋಬಲ್ ಆಟಿಸಂ ಸಮಾವೇಶದ ಪೂರ್ವಭಾವಿಯಾಗಿ ಏರ್ಪಡಿಸಿದ್ದ ಆಟಿಸಂ ಕುರಿತ ಜಾಗೃತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

          ತನ್ನಲ್ಲಿ ತಾನಿರಬೇಕೆಂಬ ನಡವಳಿಕೆಯನ್ನು ಹೊಂದಿರುವುದೇ ಆಟಿಸಂ (ಸ್ವಲೀನತೆ) ಆಗಿದೆ. ಇದೊಂದು ಕ್ಲಿಷ್ಟಕರ ಸಮಸ್ಯೆಯಾಗಿದ್ದು, ಇದನ್ನು ಯಾವುದೇ ವೈದ್ಯಕೀಯ ತಪಾಸಣೆಯಿಂದ ಪತ್ತೆ ಹಚ್ಚಲು ಸಾಧ್ಯವಿಲ್ಲ. ಮಕ್ಕಳೊಂದಿಗೆ ಬರೆಯುವ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಮತ್ತು ಪೋಷಕರಿಂದ ಮಾತ್ರ ಈ ವಿಕಲತೆಯನ್ನು ಗುರುತಿಸಲು ಸಾಧ್ಯ ಎಂದರು.

          ಸಾಮಾಜಿಕ, ಸಂವಹನ ಶಕ್ತಿ ಮತ್ತು ಮಗುವಿನ ನಡುವಳಿಕೆಯಿಂದ ಮಾತ್ರ ಆಟಿಸಂ ಅನ್ನು ಗುರುತಿಸಲು ಸಾಧ್ಯವಾಗಲಿದ್ದು, 3 ವರ್ಷದ ಒಳಗಿನ ಮಕ್ಕಳಲ್ಲಿ ಈ ವಿಕಲತೆಯನ್ನು ಗುರುತಿಸಲು ಸುಲಭವಾಗಲಿದೆ. ಆದರೆ, ಆಟಿಸಂ ಕಾರಣ ತಿಳಿಯಲು ಬಹಳಷ್ಟು ಸಂಶೋಧನೆ ನಡೆದರು, ನಡೆಯುತ್ತಿದ್ದರೂ ಸ್ಪಷ್ಟ ಕಾರಣ ಏನೆಂಬುದನ್ನು ತಿಳಿಯಲು ಇನ್ನೂ ಸಾಧ್ಯವಾಗಿಲ್ಲ.

           ಈ ವಿಕಲತೆ ಶ್ರೀಮಂತ, ಬಡವ ಎಂಬ ಭೇದವಿಲ್ಲದೇ ಯಾರಿಗೆಬೇಕಾದರೂ ಬರಬಹುದು ಎಂದು ಹೇಳಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ಹೆಚ್.ವಿಜಯಕುಮಾರ್ ಮಾತನಾಡಿ, ಮಗುವಿನ ಬೆಳವಣಿಗೆ ಯಾವ ರೀತಿ ಆಗಿದೆ ಎಂಬುದನ್ನು ಗುರುತಿಸಲು ಮಕ್ಕಳ ಪೋಷಕರಿಗೂ ಸಹ ಗೊತ್ತಿರುವುದಿಲ್ಲ. ಆಟಿಸಂ ವಿಕಲತೆಗೆ ತುತ್ತಾಗಿರುವ ಮಕ್ಕಳು ಯಾವ ಮಕ್ಕಳ ಜೊತೆಗೂ ಬೆರೆಯದೇ, ಒಬ್ಬಂಟಿಗಳಾಗಿ ಒಂದು ಕಡೆ ಕೂತಿರುತ್ತಾರೆ.

          ಊಟ ಮಾಡುವ ಬಗೆಯೂ ವಿಭಿನ್ನವಾಗಿರುತ್ತದೆ. ಮಾಡುವುದನ್ನೇ ಪದೇ, ಪದೇ ಮಾಡುತ್ತಿದ್ದಾರೆ. ಇಂತಹ ನಡವಳಿಕೆ ಇರುವ ಮಕ್ಕಳನ್ನು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು ಗುರುತಿಸಿ ಇಲಾಖೆಯ ಗಮನಕ್ಕೆ ತಂದು ಮಗುವಿನ ಬೆಳವಣಿಗೆಗೆ ದಾರಿದೀಪವಾಗಬೇಕೆಂದು ಸಲಹೆ ನೀಡಿದರು. 

          ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಕಲ್ಯಾಣಾಧಿಕಾರಿ ಶಶಿಧರ್ ಮಾತನಾಡಿ, ವಿಕಲಚೇತನತೆಯಲ್ಲಿ ಆಟಿಸಂ ಸಹ ಒಂದಾಗಿದೆ. ಇದರ ಲಕ್ಷಣಗಳೇನು? ಹಾಗೂ ಆಟಿಸಂ ವಿಕಲತೆಗೆ ತುತ್ತಾಗಿರುವ ಮಗುವಿಗೆ ಹೇಗೆ ಪುನರ್ವಸತಿ ಕಲ್ಪಿಸಬೇಕೆಂಬುದರ ಬಗ್ಗೆ ಚರ್ಚಿಸುವುದು ಈ ಕಾರ್ಯಾಗಾರದ ಮೂಲ ಉದ್ದೇಶವಾಗಿದೆ. ಆಟಿಸಂ ನ್ಯೂನತೆಗೆ ತುತ್ತಾಗಿರುವ ಮಕ್ಕಳ ಲಾಲನೆ-ಪಾಲನೆಗಾಗಿ ಒಂದು ಫೋರ್‍ಂ ರಚಿಸುವ ಅವಶ್ಯಕತೆ ಇದೆ. ಇಂಥಹ ಮಕ್ಕಳ ಪೋಷಕರು ಮುಂದೆ ಬಂದರೆ, ಸಂಘ ಕಟ್ಟಲು ನಮ್ಮ ಇಲಾಖೆಯಿಂದ ಅಗತ್ಯ ನೆರವು ನೀಡಲಾಗುವುದು ಎಂದರು.

            ನ್ಯಾಷ್ನಲ್ ಟ್ರಸ್ಟ್ ಕಾಯ್ದೆಯ ಅಡಿಯಲ್ಲಿ ಬರುವ 4 ವಿಕಲಚೇತನತೆಗಳಲ್ಲಿ ಆಟಿಸಂ ಸಹ ಒಂದಾಗಿದೆ. ಇದಕ್ಕೆ ತುತ್ತಾಗಿರುವ ಮಕ್ಕಳನ್ನು ಯಾರು ನೋಡಿಕೊಳ್ಳಬೇಕು ಹಾಗೂ ಆಸ್ತಿಯನ್ನು ಯಾರು ನಿರ್ವಣೆ ಮಾಡಬೇಕೆಂಬುದರ ಬಗ್ಗೆ ತೀರ್ಮಾನಿಸಲು ಟ್ರಸ್ಟ್ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸ್ಥಳೀಯ ಸಮಿತಿ ರಚಿಸಿದ್ದು, ಆಟಿಸಂ ವಿಕಲತೆಯಿಂದ ಬಳಲುತ್ತಿರುವ ಮಕ್ಕಳ ಪೋಷಕರು ಮುಂದೆ ಬಂದರೆ, ಆತನ ತಂದೆ-ತಾಯಿ ಮೃತಪಟ್ಟ ಮೇಲೆ ಆತನ್ನ ಯಾರು ನೋಡಿಕೊಳ್ಳಬೇಕು ಮತ್ತು ಆ ಮಗುವಿನ ಪಾಲಿನ ಆಸ್ತಿಯ ರಕ್ಷಣೆ ಮಾಡಲಿದೆ ಎಂದು ಮಾಹಿತಿ ನೀಡಿದರು.

             ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ರೂಪಾ ನಾಯ್ಕ ಮಾತನಾಡಿ, ಮಕ್ಕಳಲ್ಲಿರುವ ಆಟಿಸಂ ಅನ್ನು ಗುರುತಿಸದಿದ್ದರೆ, ಆರು ವರ್ಷಗಳ ನಂತರ ಮಗುವಿಗೆ ಬಹಳಷ್ಟು ಕಷ್ಟವಾಗಲಿದೆ. ಮಕ್ಕಳಲ್ಲಿರುವ ವಿಕಲಚೇತನತೆಯನ್ನು ಗುರುತಿಸುವ ಉದ್ದೇಶದಿಂದ ಸ್ಪೂರ್ತಿ ಸಂಸ್ಥೆ ಚನ್ನಗಿರಿ ತಾಲೂಕಿನಲ್ಲಿ ಕೆಲಸ ಮಾಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಆಟಿಸಂ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳನ್ನು ವೇದಿಕೆಗೆ ಕರೆತಂದ ಆಶಾ ಕಿರಣ ಶಾಲೆಯ ಶಿಕ್ಷಕಿ ಮೇರಿ ಆಟಿಸಂ ಗುರುತಿಸಬೇಕಾದ ಲಕ್ಷಣಗಳ ಬಗ್ಗೆ ವಿವರಿಸಿದರು.

            ಮಾನಸಿಕ ಆರೋಗ್ಯ ತಜ್ಷ ಡಾ.ಗಂಗಮ್ ಸಿದ್ಧಾರೆಡ್ಡಿ ಮಾತನಾಡಿದರು. ಡಿಸೆಬಿಲಿಟಿ ಎನ್‍ಜಿಒಸ್ ಅಲೈಯನ್ಸ್‍ನ ಪ್ರಧಾನ ವ್ಯವಸ್ಥಾಪಕ ಗುರುಪ್ರಸಾದ್ ಪ್ರಾಸ್ತಾವಿಕ ಮಾತನಾಡಿದರು. ಸ್ಪೂರ್ತಿ ಸಂಸ್ಥೆಯ ಕೆಂಚಪ್ಪ ಪ್ರಾರ್ಥಿಸಿ ಕಾರ್ಯಕ್ರಮ ನಿರೂಪಿಸಿದರು. ಲೋಕೇಶ್ ಸ್ವಾಗತಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link