ಹುಳಿಯಾರು
ನಾನೊಬ್ಬ ಸಾಮಾನ್ಯ ಸಂಸದ. ದೇವೇಗೌಡರು ಮಾಜಿ ಪ್ರಧಾನಿಗಳು. ಹಾಗಾಗಿ ಅವರು ತುಮಕೂರು ಕ್ಷೇತ್ರದಿಂದ ನಿಲ್ಲುವುದಾದರೆ ಸ್ವಾಗತಿಸುತ್ತೇನೆಂದು ಹೇಳುವ ಮೂಲಕ ನಾನು ನನ್ನ ಹೃದಯ ವೈಶಾಲ್ಯತೆ ಮೆರೆದಿದೆ. ಇದೇ ರೀತಿ ಕ್ಷೇತ್ರದಲ್ಲಿ ಚೆನ್ನಾಗಿ ಕೆಲಸ ಮಾಡಿರು ಲೋಕಸಭೆಯಲ್ಲಿ ಜನಪರ ಧ್ವನಿ ಎತ್ತಿರುವ ನಿನ್ನಂತºವರ ಭವಿಷ್ಯ ಮಂಕಾಗಬಾರದು. ಹಾಗಾಗಿ ನೀನೇ ನಿಂತು ಗೆದ್ದು ಬಾ ಎಂದು ಹಾರೈಸುವ ಮೂಲಕ ದೇವೇಗೌಡರು ಸಹ ಹೃದಯ ವೈಶಾಲ್ಯತೆ ಪ್ರದರ್ಶಿಸುವ ವಿಸ್ವಾಸವಿದೆ ಎಂದು ಸಂಸದ ಎಸ್.ಪಿ.ಮುದ್ದಹನುಮೇಗೌಡ ಅವರು ಹೇಳಿದರು.
ಹುಳಿಯಾರಿನ ಕಾಂಗ್ರೆಸ್ ಮುಖಂಡ ಎಚ್.ಅಶೋಕ್ ಅವರ ಮನೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಂಸದರು ಹೊಂದಾಣಿಕೆ ತೀರ್ಮಾನವೆನ್ನುವ ನೆಪದಲ್ಲಿ ತುಮಕೂರಿನ ಹಾಲಿ ಸಂಸದರು ಅದರಲ್ಲೂ ಕ್ರಿಯಾಶೀಲ ಸಂಸದರನ್ನು ಸ್ಪರ್ಧಿಸಲು ನಿರಾಕರಿಸಿರುವುದು ಜಿಲ್ಲೆಯ ಜನರಿಗೆ ತಪ್ಪು ಸಂದೇಶ ಹೋಗಿದೆ. ಯಾರಿಗೆ ಬೇಕಾದರೂ ತಪ್ಪಬಹುದು ಮುದ್ದಹನುಮೇಗೌಡರಿಗೆ ಟಿಕೆಟ್ ತಪ್ಪುವುದಿಲ್ಲ ಎಂದು ಜನ ಭಾವಿಸಿದ್ದರು.
ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದಲೂ ಮುದ್ದಹನುಮೇಗೌಡರು ಪುನರಾಯ್ಕೆ ಆಗಬೇಕೆಂದು ಜನ ಬಯಸಿದ್ದರು. ಹಾಗಾಗಿ ಜನರ ಭಾವನೆ ಮತ್ತು ಸ್ಥಳೀಯ ಪಕ್ಷದ ಕಾರ್ಯಕರ್ತರ ಪರಿಸ್ಥಿತಿ ಅರ್ಥ ಮಾಡಿಕೊಂಡು ತೆಗೆದುಕೊಂಡ ನಿರ್ಧಾರವನ್ನು ಎರಡೂ ಪಕ್ಷದ ನಾಯಕರು ಪುನರ್ ಪರಿಶೀಲಿಸುವಂತೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ರಾಜ್ಯದ ಎಲ್ಲ ಸಂಸದರಿಗೂ ಮತ್ತೆ ಸ್ಪರ್ಧಿಸುವ ಅವಕಾಶ ಕೊಟ್ಟು ನನ್ನನ್ನು ಮಾತ್ರ ಸ್ಪರ್ಧೆಯಿಂದ ಹೊರಗಿಡುವಂತಹ ತಪ್ಪುನ್ನು ನಾನೇನು ಮಾಡಿದ್ದೇನೆ ಎಂಬುದನ್ನು ತಿಳಿಸಬೇಕು. ಜೊತೆಗೆ ಕ್ರಿಯಾಶೀಲ ಸಂಸದರನ್ನು ಸ್ಪರ್ಧಿಸದಂತೆ ಮಾಡಿರುವ ಬಗ್ಗೆ ರಾಜ್ಯದ ಜನರಿಗೂ ಸಕಾರಣವನ್ನು ನೀಡಬೇಕು.
ಇಲ್ಲವಾದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೆಲಸ ಮಾಡಿದವರಿಗೆ ಟಿಕೆಟ್ ಇಲ್ಲ ಎಂದಾದರೆ ಮುಂದಿನ ದಿನಗಳಲ್ಲಿ ಯಾವ ಜನಪ್ರತಿನಿಧಿಯು ಕೆಲಸ ಮಾಡಲು ಮುಂದೆ ಬರುವುದಿಲ್ಲ. ಪ್ರಾಮಾಣಿಕತೆಗೆ ಬೆಲೆ ಇಲ್ಲ ಎಂದಾದಲ್ಲಿ ಚುನಾಯಿತ ಪ್ರತಿನಿಧಿಗಳು ಮುಂದೆ ಟಿಕೆಟ್ ದೊರೆಯುವುದು ಇಲ್ಲವೋ ಎಂಬ ಒತ್ತಡದಲ್ಲಿಯೇ ಕೆಲಸ ಮಾಡಬೇಕಾಗುತ್ತದೆ. ಇದರಿಂದಾಗಿ ಕ್ಷೇತ್ರದಲ್ಲಿ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ ಎಂದರು.
ಜಿಲ್ಲೆಯಲ್ಲಿ ಜಾತಿ ಪಕ್ಷದ ತಾರತಮ್ಯ ಮಾಡದೆ ಪ್ರಜಾಪ್ರಭುತ್ವದ ಆಶಯದಂತೆ ಕೆಲಸ ಮಾಡಿದ ಫಲವಾಗಿ ಇಂದು ಪಕ್ಷದಿಂದ ಸ್ಪರ್ಧಿಸಲು ಅವಕಾಶ ತಪ್ಪಿದರೂ ಸಹ ಸ್ಪರ್ಧಿಸಲು ಮತದಾರರು ಒತ್ತಡ ಹೇರುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರೇ ಸಾರ್ವಭೌಮರು. ಮತದಾರರೇ ನಿರ್ಣಾಯಕರು ಹಾಗಾಗಿ ಅವರ ತೀರ್ಮಾನಕ್ಕೆ ಬದ್ಧನಾಗಿ ನಾನು ನಾಮಪತ್ರ ಸಲ್ಲಿಸಿದ್ದು ಮಂಗಳವಾರ ಉಭಯ ಪಕ್ಷದ ನಾಯಕರು ತಮ್ಮ ನಿರ್ಧಾರ ಬದಲಿಸಿ ನನಗೆ ಟಿಕೆಟ್ ಕೊಟ್ಟು ರಾಜಕಾರಣದಲ್ಲಿ ಇನ್ನೂ ಮೌಲ್ಯ ಉಳಿದಿದೆ ಎಂದು ದೇಶಕ್ಕೆ ತೋರಿಸಿಕೊಡುತ್ತಾರೆ ಎಂಬ ಆಶಾಭಾವನೆ ಇಟ್ಟುಕೊಂಡಿರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಸಾಸಲು ಸತೀಶ್, ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ದೇವರಾಜ್, ಜಿಪ ಮಾಜಿ ಅಧ್ಯಕ್ಷ ರಘುನಾಥ್, ತಾಪಂ ಮಾಜಿ ಸದಸ್ಯ ಸ್ವಾಮಿನಾಥ್, ತಿಮ್ಲಾಪುರ ಗ್ರಾಪಂ ಉಪಾಧ್ಯಕ್ಷ ಮೋಹನ್, ಪಪಂ ಸದಸ್ಯ ಎಚ್.ಆರ್.ವೆಂಕಟೇಶ್, ಎಪಿಎಂಸಿ ಮಾಜಿ ನಿರ್ದೇಶಕ ಅಂಕಸಂದ್ರ ರಾಜಣ್ಣ, ಕಾರ್ಯಕರ್ತರಾದ ಎಚ್.ಅಶೋಕ್ ಪ್ರಸನ್ನ ಕುಮಾರ್, ಉಮೇಶ್, ಸೋಮಶೇಖರ್, ಇಮ್ರಾಜ್ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
