ಹುಳಿಯಾರು
ತುಮಕೂರು ಕ್ಷೇತ್ರದಿಂದ ಲೋಕಸಭೆಗೆ ದೇವೇಗೌಡರು ಗೆದ್ದರೆ ಕೇಂದ್ರ ಸರ್ಕಾರದಿಂದ ಜಿಲ್ಲೆಯಲ್ಲಿ ಆರಂಭವಾಗಿರುವ ಎಚ್ಎಎಲ್ ಹಾಗೂ ಫುಡ್ಪಾರ್ಕ್ನ ಉದ್ಯೋಗಗಳೂ ಕೂಡ ಹಾಸನದವರ ಪಾಲಾಗಲಿದೆ. ಇದಕ್ಕೆ ಕೆಎಂಎಫ್ ಹಾಗೂ ಪಿಡ್ಲ್ಯೂಡಿ ಇಲಾಖೆ ನಿದರ್ಶನವಾಗಿದೆ ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಹುಳಿಯಾರು ಹೋಬಳಿಯ ಕೆಂಕೆರೆ ಗ್ರಾಮದಲ್ಲಿ ಗುರುವಾರ ಏರ್ಪಡಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ದೇವೇಗೌಡರಿಗೆ ತುಮಕೂರು ಜಿಲ್ಲೆಯ ಜನರಿಗಿಂತ ಹಾಸನ ಜನರ ಮೇಲೆ ಪ್ರೀತಿ ಹೆಚ್ಚು. ಪಾಪಾ ಮೊಮ್ಮಗನಿಗೆ ಕ್ಷೇತ್ರ ಬಿಟ್ಟು ಕೊಟ್ಟ ಅನಿವಾರ್ಯತೆಯಿಂದ ತುಮಕೂರು ಜಿಲ್ಲೆಗೆ ಬಂದಿದ್ದಾರೆ. ಮಾಜಿ ಪ್ರಧಾನಿಗಳೆಂದು ಅಭಿಮಾನದಿಂದಲೋ ನಮ್ಮ ಜಾತಿಯವರೆಂಬ ಪ್ರೀತಿಯಿಂದಲೋ ಅವರನ್ನು ಗೆಲ್ಲಿಸಿದರೆ ಜಿಲ್ಲೆಯ ಜನ ನಿರುದ್ಯೋಗ ಸಮಸ್ಯೆ ಎದುರಿಸಬೇಕಾಗುತ್ತದೆ. ಮತ್ತೊಬ್ಬ ಒಕ್ಕಲಿಕ ನಾಯಕ ಇಲ್ಲಿ ಬೆಳೆಯೋದು ಕನಸಿನ ಮಾತಾಗುತ್ತದೆ ಎಚ್ಚರ ಎಂದರು.
ಇಡೀ ದೇಶದಲ್ಲಿ ಜೆಡಿಎಸ್ ಪಕ್ಷದಿಂದ ಕಣದಲ್ಲಿರುವ ಅಭ್ಯರ್ಥಿಗಳೆ ಏಳೆಂಟು ಕ್ಷೇತ್ರದಲ್ಲಿ ಅದರಲ್ಲಿ ಒಂದೋ ಎರಡೋ ಗೆಲ್ಲುತ್ತಾರೆ. ಗೆದ್ದಿರುವ ಇಬ್ಬರು ಸಂಸದರನ್ನು ಇಟ್ಟುಕೊಂಡು ದೇವೇಗೌಡರು ಮತ್ತೆ ಪ್ರಧಾನಿಯಾಗಲು ಸಾಧ್ಯವಿಲ್ಲ. 545 ಸಂಸದರ ನಡುವೆ ರಾಜ್ಯದ ಪರ ಧ್ವನಿ ಎತ್ತಲು ಸಾಧ್ಯವಿಲ್ಲ. ಹಾಗಾಗಿ ಜಿಲ್ಲೆಯಲ್ಲಿ ಮತ್ತು ರಾಜ್ಯದಲ್ಲಿ ಅಭಿವೃದ್ಧಿ ಕೆಸಲಗಲಾಗಬೇಕಿದ್ದರೆ ಬಿಜೆಪಿ ಗೆಲ್ಲಿಸಿ. ದೇವೇಗೌಡರ ವಿರುದ್ಧ ಗೆದ್ದಿರುವ ಕಾರಣದಿಂದ ಜಿ.ಎಸ್.ಬಸವರಾಜು ಸಂಸದರಾಗುತ್ತಾರೆ. ಆಗ ಜಿಲ್ಲೆಗೆ ಒಳ್ಳೊಳ್ಳೆಯ ಕೆಲಸಗಳನ್ನು ಮಾಡಬಹುದು ಎಂದರು.
ನರೇಂದ್ರ ಮೋದಿ ಅವರು ದೇಶದ ಬಡವರಿಗೆ ಉಚಿತವಾಗಿ ಗ್ಯಾಸ್ ನೀಡಿದ್ದಾರೆ. ಆರೋಗ್ಯ ಕಾರ್ಡ್ ಕೊಟ್ಟು 5 ಲಕ್ಷದ ವರೆವಿಗೂ ಉಚಿತ ಚಿಕಿತ್ಸೆಗೆ ನೆರವಾಗಿದ್ದಾರೆ. ರೈತರಿಗೆ ನೆರವಾಗುವ ನಿಟ್ಟಿನಲ್ಲಿ ವಾರ್ಷಿಕ 6 ಸಾವಿರ ರೂ. ಕೊಡುತ್ತಿದ್ದಾರೆ. ಫಸಲ್ ಭಿಮಾ ಯೋಜನೆಯಲ್ಲಿ ಬೆಳೆ ನಷ್ಟಕ್ಕೆ ಪರಿಹಾರ ನೀಡುತ್ತಿದ್ದಾರೆ. ಕೊಬ್ಬರಿಗೆ 9500 ರೂ. ಬೆಂಬಲ ಬೆಲೆ ಘೋಷಿಸಿದ್ದಾರೆ. ಬಹುಮುಖ್ಯವಾಗಿ ದೇಶದತ್ತ ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡಿದ್ದಾರೆ. ನೆರೆ ರಾಷ್ಟ್ರಗಳು ಬಾಲ ಮುದುರಿ ಕೂರುವಂತೆ ಮಾಡಿದ್ದಾರೆ. ಹಾಗಾಗಿ ದೇಶದ ಭವಿಷ್ಯದ ದೃಷ್ಠಿಯಿಂದ ಮೋದಿ ಮತ್ತೊಮ್ಮೆ ಪ್ರಧಾನಿ ಮಾಡಲು ಬಿಜೆಪಿ ಬೆಂಬಲಿಸಿ ಎಂದರು.
ತಾಪಂ ಸದಸ್ಯ ಕೇಶವಮೂರ್ತಿ, ಮಾಜಿ ಅಧ್ಯಕ್ಷ ಕೆಂಕೆರೆ ನವೀನ್, ಮಾಜಿ ಸದಸ್ಯ ವಸಂತಕುಮಾರ್, ಹಾಲಿನ ಡೇರಿ ಅಧ್ಯಕ್ಷರುಗಳಾದ ಮಧುಸೂಧನ್, ಪ್ರಸನ್ನಕುಮಾರ್, ಮುಖಂಡರಾದ ರಾಜಶೇಖರ್, ಕೆ.ಬಿ.ಮರುಳಪ್ಪ, ಕೇಶವಮೂರ್ತಿ ಮತ್ತಿತರರು ಇದ್ದರು.