ಹರಿಹರ :
ಸಾರ್ವಜನಿಕರಿಗೆ ನನ್ನ ಅಣ್ಣನಾದ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ಉಚಿತವಾಗಿ ಏನ್ನನ್ನು ನೀಡುವುದಿಲ್ಲ, ಅದರ ಬದಲಾಗಿ ಆಸಕ್ತಿಯಿಂದ ದುಡಿಯುವ ಕೈಗಳಿಗೆ ಬೇಕಾದ ಎಲ್ಲಾ ರೀತಿಯ ಸಹಾಯ ಮತ್ತು ಸಹಕಾರವನ್ನು ನೀಡುತ್ತಾರೆ ಎಂದು ಧಾರವಾಡದ ಎಸ್ಡಿಎಂ ಆಸ್ಪತ್ರೆಯ ನಿರ್ದೇಶಕರಾದ ಪದ್ಮಲತಾ ನಿರಂಜನಕುಮಾರ್ ಅವರು ಮಹಿಳೆಯರಿಗೆ ಸಲಹೆ ನೀಡಿದರು.
ನರದ ಗಿರಿಯಮ್ಮ ಕಾಲೇಜಿನ ಮೈದಾನದಲ್ಲಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ.) ವತಿಯಿಂದ ಹಮ್ಮಿಕೊಂಡಿದ್ದ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ವಲಯ ಮಟ್ಟದ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು, ಪೂಜೆ ಹಾಗೂ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಹಿಳೆಯರಿಗೆ ಸಲಹೆ ನೀಡಿದರು.
ಪೂಜ್ಯ ಶ್ರೀ ವೀರೇಂದ್ರ ಹೆಗ್ಗೆಡೆ ಅವರು ತಮ್ಮ ಕುಟುಂಬಕ್ಕೆ ಸೀಮಿತರಾಗದೇ, ಯೋಜನೆಯಲ್ಲಿ ಸದಸ್ಯತ್ವ ಹೊಂದಿದ ಪ್ರತಿಯೊಬ್ಬರು ನನ್ನ ಕುಟುಂಬದ ಸದಸ್ಯರು ಎಂದು ತಿಳಿದು, ಯಾರಿಗೂ ಉಚಿತವಾಗಿ ಏನ್ನನ್ನು ನೀಡದೇ, ಆಸಕ್ತಿಯಿಂದ ದುಡಿಯುವ ಕೈಗಳಿಗೆ ಆರ್ಥಿಕವಾಗಿ ಸಹಾಯ ಮಾಡುವ ಮೂಲಕ, ಅವರು ಸರ್ವತೋಮುಕ ಅಭಿವೃದ್ಧಿ ಹೊಂದುವಂತೆ ಸ್ಪಂದಿಸುತ್ತಾರೆ. ಒಂದು ವೇಳೆ ಬಡವರಿಗೆ ಉಚಿತವಾಗಿ ಸೌಲಭ್ಯಗಳನ್ನು ನೀಡಿದರೆ ಅವರು ಸೋಮಾರಿಗಳಾಗಿ, ಕಷ್ಟಪಟ್ಟು ದುಡಿಯದೆ, ತಮ್ಮ ಜೀವನವನ್ನು ಆಳು ಮಾಡಿಕೊಳ್ಳುತ್ತಾರೆ ಎಂದು ಮಾಹಿತಿ ನೀಡಿದರು.
ಸಂಸದ ಜಿ.ಎಂ ಸಿದ್ದೇಶ್ವರ್ ಮಾತನಾಡಿ, ಸತ್ಯನಾರಾಯಣ ಪೂಜೆಯಿಂದ ತಾಲೂಕಿಗೆ ಉತ್ತಮ ಮಳೆ ಬೆಳೆ ಪ್ರಾಪ್ತಿಯಾಗಲಿ. ಹಿಂದಿನ ಪೂರ್ವಜರು ಮಕ್ಕಳಿಗೆ ಆಸ್ತಿಯನ್ನು ಮಾಡುತ್ತಿದ್ದರು. ನಂತರ ಹಣವನ್ನು ಗಳಿಸುತ್ತಿದ್ದರು, ಆದರೆ ಇಂದು ತಮ್ಮ ಮಕ್ಕಳನ್ನು ಆಸ್ತಿಯನ್ನಾಗಿ ಮಾಡುತ್ತಿದ್ದಾರೆ. ಪುರುಷರಿಗೆ ಸರಿಸಮನಾಗಿ ಮಹಿಳೆಯರು ಜೀವಿಸುತ್ತಿದ್ದಾರೆ ಎಂದರೆ ಅದಕ್ಕೆ ಧರ್ಮಸ್ಥಳ ಸಂಸ್ಥೆ ನೀಡುತ್ತಿರುವ ಯೋಜನೆಗಳೇ ಕಾರಣ. ಸರ್ಕಾರ ಮಾಡಬೇಕಾದ ಕೆಲಸಗಳನ್ನು ಸಂಸ್ಥೆ ಮಾಡುತ್ತಿದೆ. ಇದರ ಜೊತೆಯಲ್ಲಿ ಕೇಂದ್ರ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಿ ಎಂದು ಕರೆ ನೀಡಿದರು.
ಮಾಜಿ ಶಾಸಕ ಬಿ.ಪಿ ಹರಿಶ್ ಮಾತನಾಡಿ, ಪ್ರಸ್ತುತ ಸರ್ಕಾರಗಳು ಜಾರಿ ಮಾಡುತ್ತಿರುವ ಯೋಜನೆಗಳನ್ನು, ಧರ್ಮಸ್ಥಳ ಸಂಸ್ಥೆ ಹತ್ತು ವರ್ಷಗಳ ಹಿಂದೆಯೇ ಜಾರಿ ಮಾಡಿದೆ. ಈ ಹಿಂದೆ ಮಹಿಳೆಯರು ಕೇವಲ ಮನೆ ಕೆಲಸಕ್ಕೆ ಸೀಮಿತರಾಗಿದ್ದರು, ಆದರೆ ಇಂದು ತಮ್ಮ ಕುಟುಂಬದ ಜವಾಬ್ದಾರಿಯನ್ನು ನಿಬಾಯಿಸುವಷ್ಟು ಸಂಸ್ಥೆ ಅವರನ್ನು ಬೆಳೆಸುತ್ತಿದೆ ಎಂದರು.ಬೆಳಿಗ್ಗೆ 7 ಗಂಟೆಯಿಂದಲೇ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಪ್ರಾರಂಭವಾಗಿ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ವಲಯ ಮಟ್ಟದ ಒಕ್ಕೂಟಗಳ ಪದಗ್ರಹಣವನ್ನು ನಡೆಸಿಕೊಡಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಶ್ರೀ ಶಾರದೇಶಾನಂದಸ್ವಾಮಿ ಮಹರಾಜ್, ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ಸೀತಾರಾಮ್ ಶೆಟ್ಟಿ, ಜಿಲ್ಲಾ ನಿರ್ದೇಶಕರಾದ ಜಯಂತ್ ಪೂಜಾರಿ, ಹರಿಹರದ ಯೋಜನಾಧಿಕಾರಿ ಬಿ. ರಾಘವೇಂದ್ರ, ಪೂಜಾ ಸಮಿತಿಯ ಅಧ್ಯಕ್ಷರಾದ ಎಚ್.ಪಿ ಬಸವರಾಜ್, ಆರ್.ವಿ ಭಕ್ತವತ್ಸಲ, ಗಿರಿಯಮ್ಮ ಕಾಲೇಜಿನ ಪ್ರಾಂಶುಪಾಲರಾದ ಎಸ್.ಎಚ್ ಪ್ಯಾಟಿ ಮಾತನಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
