ಭ್ರಷ್ಟಾಚಾರಕ್ಕಿಂತ ದೊಡ್ಡ ಪಿಡುಗು ಮಧುಮೇಹ : ಡಿಸಿಎಂ

ಬೆಂಗಳೂರು

    ಮಧುಮೇಹ ಎನ್ನುವುದು ಸದ್ದಿಲ್ಲದೆ ಕೊಲ್ಲುವಂತ ಕಾಯಿಲೆಯಾಗಿದ್ದು ಇದು ಜೀವ ಹಾಗೂ ಜೀವನ ಎರಡನ್ನೂ ಹಿಂಡಿ ಹಿಪ್ಪೆ ಮಾಡಿ ಬಿಡಲಿದ್ದು ಪಟ್ಟಣ ಮಾತ್ರವಲ್ಲ ಗ್ರಾಮೀಣ ಪ್ರದೇಶವನ್ನು ಆವರಿಸಿರುವ ಈ ಕಾಯಿಲೆ ಮಕ್ಕಳಲ್ಲೂ ಕಂಡುಬರುತ್ತಿರುವುದು ಆತಂಕದ ಸಂಗತಿ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥನಾರಾಯಣ ಅವರು ಕಳವಳ ವ್ಯಕ್ತಪಡಿಸಿದರು.

     ಆಧುನಿಕ ಯುಗದಲ್ಲಿ ದೇಹಕ್ಕೆ ಸಾಕಷ್ಟು ವ್ಯಾಯಾಮ ಹಾಗೂ ಸಮತೋಲನ ಆಹಾರ ಸಿಗುತ್ತಿಲ್ಲ. ಇದರ ಫಲವಾಗಿ ನಾನಾ ರೀತಿಯ ಸಮಸ್ಯೆ ಕಾಡುತ್ತಿವೆ. ಇದರಲ್ಲಿ ಮಧುಮೇಹವೂ ಒಂದಾಗಿದೆ. ಮಧುಮೇಹ ಬರಿ ರಕ್ತ, ಮೂತ್ರದಲ್ಲಿ ಕಾಣಿಸಿಕೊಂಡು ದೇಹವನ್ನು ನಿಶಕ್ತಿ ಮಾಡುವುದಷ್ಟೆ ಅಲ್ಲದೆ, ಹೃದಯ ಸಂಬಂಧಿ ಕಾಯಿಲೆ, ಮೂತ್ರಪಿಂಡಕ್ಕೆ ಹಾನಿ, ಕಣ್ಣಿನ ತೊಂದರೆ, ನರಗಳ ದೌರ್ಬಲ್ಯ ಕಾಣಿಸಿಕೊಳ್ಳುತ್ತವೆ. ಶೇ.20 ಮಂದಿಗೆ ಮಧುಮೇಹ ಕಾಯಿಲೆಯಿದೆ ಎಂದು ತಿಳಿಸಿದರು

    ನಗರದ ಅರಮನೆ ರಸ್ತೆಯ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಟೈಪ್ 1 ಡಯಾಬಿಟಿಸ್ ಫೌಂಡೇಶನ್ ಆಫ್ ಇಂಡಿಯಾದ ಅರಿವು ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿ ಭ್ರಷ್ಟಾಚಾರಕ್ಕಿಂತ ದೊಡ್ಡ ಪಿಡುಗು ಮಧುಮೇಹವಾಗಿದ್ದು ಈ ಬಗ್ಗೆ ಹೆಚ್ಚಿನ ಸಂಶೋಧನೆ ಮತ್ತು ಸಮಸ್ಯೆ ನಿವಾರಿಸಲು ಪ್ರಾಧಿಕಾರ ರಚಿಸುವ ಅವಶ್ಯಕತೆ ಇದೆ ಎಂದು ಹೇಳಿದರು.

     ವೈದ್ಯಕೀಯ ವಲಯದಲ್ಲಿ ಎಲ್ಲೂ ಸಂಶೋಧನೆ ನಡೆಯುತ್ತಿದೆ.ಆದರೆ, ರಾಜ್ಯದಲ್ಲಿ ಸಂಶೋಧನೆ ನಡೆಯಬೇಕು ಎನ್ನುವುದು ನಮ್ಮ ಕಳಕಳಿ ಆಗಿದ್ದು, ರಾಜ್ಯ ಸರ್ಕಾರ ಈ ಬಗ್ಗೆ ಸಂಘ ಸಂಸ್ಥೆಗಳನ್ನು ಉತ್ತೇಜಿಸಲಿದೆ ಎಂದರು.ಫೌಂಡೇಶನ್ ನ ಸಂಸ್ಥಾಪನ ಮುಖ್ಯಸ್ಥರಾದ ಕೆ.ಎಸ್ ನವೀನ್ ಮಾತನಾಡಿ, ದಿನೇ ದಿನೇ ಭಾರತವು ಡಯಾಬಿಟಿಸ್ ನ ರಾಜಧಾನಿಯಾಗಿ ಪರಿವರ್ತನೆ ಆಗುತ್ತಿದೆ. ಭಾರತ ವಿಶ್ವದಲ್ಲಿಯೇ ಡಯಾಬಿಟಿಸ್ ಕಾಯಿಲೆಯುಳ್ಳವರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಈ ಕಾಯಿಲೆ, ಮಕ್ಕಳು ಮತ್ತು ವಯಸ್ಕರಲ್ಲಿ ಹೆಚ್ಚಾಗಿ ಕಂಡುಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.

     ಒಂದು ಮಾಹಿತಿಯ ಪ್ರಕಾರ ರಾಜ್ಯದಲ್ಲಿ 3 ಲಕ್ಷಕ್ಕೂ ಹೆಚ್ಚು ಮಕ್ಕಳಲ್ಲಿ ಈ ಟೈಪ್ 1 ಡಯಾಬಿಟಿಸ್ ಕಾಣಿಸಿಕೊಂಡಿದೆ. ತಂದೆ ತಾಯಿಗೆ ಡಯಾಬಿಟಿಸ್ ಇಲ್ಲದಿದ್ದರೂ ಮಕ್ಕಳಲ್ಲಿ ಈ ಕಾಯಿಲೆ ಕಾಣಿಸಿಕೊಳ್ಳುತ್ತಿದೆ. ಇದರ ಚಿಕಿತ್ಸಾ ವೆಚ್ಚ ದುಬಾರಿಯಾಗಿದ್ದು, ಸಾಮಾನ್ಯ ಬಡವರಿಗೆ ಈ ವೆಚ್ಚ ಭರಿಸಲು ಸಾಧ್ಯವಾಗುವುದಿಲ್ಲ.

     ಇವರಿಗೆ ಸರ್ಕಾರದಿಂದಲೂ ಸಹ ಯಾವುದೇ ನೆರವು ಸಿಗುತ್ತಿಲ್ಲ. ಹೀಗಾಗಿ ಟೈಪ್ 1 ಡಯಾಬಿಟಿಸ್ ಸಮಸ್ಯೆಗಳನ್ನು ಸರ್ಕಾರಗಳ ಗಮನಕ್ಕೆ ತರುವ ಮತ್ತು ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ದೇಶದ ಮೂಲೆ ಮೂಲೆಯಲ್ಲಿರುವ ಸಣ್ಣ ಸಣ್ಣ ಡಯಾಬಿಟಿಸ್ ಫೌಂಡೇಶನ್ ಗಳನ್ನು ಒಟ್ಟುಗೂಡಿಸಿ ಟೈಪ್ 1 ಡಯಾಬಿಟಿಸ್ ಫೌಂಡೇಶನ್ ಆಫ್ ಇಂಡಿಯಾ ಸ್ಥಾಪನೆ ಮಾಡಲಾಗಿದೆ ಎಂದು ವಿವರಿಸಿದರು.

ಸಂವಿಧಾನ ವಿರೋಧಿ ಅಲ್ಲ

      ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಯಾವುದೇ ಕಾನೂನು ಬಾಹಿರ ಹೇಳಿಕೆ ನೀಡಿಲ್ಲ.ಅಲ್ಲದೆ, ಅವರ ಬಾಯಿಮುಚ್ಚಿಸಲು ಯಾರಿಂದಲೂ ಸಾಧ್ಯವಿಲ್ಲ ಯತ್ನಾಳ್ ಹೇಳಿಕೆಯನ್ನಿಟ್ಟುಕೊಂಡು ಸದನ ನಡೆಯಲು ಬಿಡುವುದಿಲ್ಲ ಎನ್ನುವುದು ಸರಿಯಲ್ಲ. ಅಲ್ಲದೆ, ಅವರ ಯಾವುದೇ ಕಾನೂನು ಬಾಹಿರ, ಸಂವಿಧಾನ ವಿರೋಧಿ ಹೇಳಿಕೆ ನೀಡಿಲ್ಲ. ಎಲ್ಲಾ ಆಯಾಮ ಗಳ ಚೌಕಟ್ಟಿನಲ್ಲಿ ಮಾತನಾಡಿದ್ದಾರೆ ಎಂದು ಅವರು ತಿಳಿಸಿದರು

    ಸದನ ಅರವತ್ತು ದಿನ ನಡೆಯಲೇಬೇಕು. ಅಲ್ಲಿ ಸಂವಿಧಾನ ಕುರಿತು ಭಾವನೆ ಕುರಿತು ವಿಚಾರ ಮಂಡನೆ ಅವಕಾಶ ಇರುತ್ತದೆ. ಹಾಗಾಗಿ ವಿರೋಧ ಬೇಡ. ಎಲ್ಲವೂ ಸದನದ ಮೂಲಕ ಚರ್ಚೆ ಮಾಡಬೇಕು ಎಂದು ತಿಳಿಸಿದರು.

ನಾಯಕತ್ವದ ಗುಣ

     ರಾಜ್ಯದಲ್ಲಿ ಸುಭದ್ರ ಸರ್ಕಾರ ಆಡಳಿತದಲ್ಲಿದೆ. ಅಷ್ಟೇ ಅಲ್ಲದೆ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳೇ ನಮಗೆ ಸಹಕಾರ ನೀಡಿವೆ.ಹಾಗಾಗಿ, ಯಾರಾದರೂ ಬಿಜೆಪಿ ಸೇರ್ಪಡೆ ಆದರೆ, ಅದು ಅವರ ವೈಯುಕ್ತಿಕ. ಜೊತೆಗೆ ನಮ್ಮ ನಾಯಕರ ನಾಯಕತ್ವ ಗುಣ ಎಂದು ಅಶ್ವಥನಾರಾಯಣ ಹೇಳಿದರುಇನ್ನೂ ಸಚಿವ ಸಂಪುಟದಲ್ಲಿ ಆರು ಸ್ಥಾನ ಖಾಲಿ ಇದ್ದು, ಇತರರಿಗೆ ಅವಕಾಶ ನೀಡುವುದು ಒಳ್ಳೆಯದು. ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಪಕ್ಷದ ವರಿಷ್ಠರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಅಶ್ವಥನಾರಾಯಣ ತಿಳಿಸಿದರು.ಈ ಸಂದರ್ಭದಲ್ಲಿ ಸಂಸದರಾದ ತೇಜಸ್ವಿ ಸೂರ್ಯ, ಫೌಂಡೇಶನ್ ನ ಸದಸ್ಯರಾದ ಬೀಮಾ ಜಾನ್ ಯೂಸೇಫ್ ಪ್ರಶಾಂತ್,ಬೀನು ಸಿಂಗ್, ಕೀರ್ತಿ ಚಂದ್ರ, ಗೀತಾಂಜಲಿ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ