ಹುಳಿಯಾರು
ಮೊದಲು ಹಾಸನಕ್ಕೆ ಮಾತ್ರ ಸೀಮಿತರಾಗಿದ್ದ ದೇವೇಗೌಡರು ನಂತರ ರಾಮನಗರ, ಇತ್ತೀಚೆಗೆ ಮಂಡ್ಯ, ಈಗ ತುಮಕೂರು ಜಿಲ್ಲೆ ಆಕ್ರಮಿಸಿಸಲು ಬರುತ್ತಿದ್ದಾರೆ. ಹಿಂದೆ ರಾಜರು ಒಂದೊಂದೆ ಪ್ರದೇಶ ಗೆದ್ದು ತಮ್ಮ ಸಾಮ್ರಾಜ್ಯ ವಿಸ್ತರಿಸಿಕೊಂಡಂತೆ ಹಳೆ ಮೈಸೂರು ಪ್ರಾಂತ್ಯದ ದೊರೆಯಾಗಲು ಪ್ರಯತ್ನಿಸುತ್ತಿದ್ದಾರೆ. ದೇವೇಗೌಡರ ಈ ರಾಜಪ್ರಭುತ್ವಕ್ಕೆ ಕೊನೆ ಹಾಡಿ ಪ್ರಜಾಪ್ರಭುತ್ವ ಎತ್ತಿ ಹಿಡಿಯಲು ದೇವೇಗೌಡರನ್ನು ಈ ಚುನಾವಣೆಯಲ್ಲಿ ಸೋಲಿಸಿ ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ಅವರು ಕರೆ ನೀಡಿದರು.
ಹುಳಿಯಾರು ಕೋಡಿಪಾಳ್ಯದ ಸೇವಾಲಾಲ್ ಸಾಂಸ್ಕøತಿಕ ಸದನದಲ್ಲಿ ಶನಿವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇವೇಗೌಡರ ಮೇಲೆ ಒಕ್ಕಲಿನ ಜನಾಂಗಕ್ಕೆ ಇರುವ ಅಭಿಮಾನ ದೇವೇಗೌಡರಿಗೆ ಒಕ್ಕಲಿಗರ ಮೇಲೆ ಇಲ್ಲ. ಅವರ ಅಭಿಮಾನ, ಪ್ರೀತಿ, ವ್ಯಾಮೋಹ ಎಲ್ಲವೂ ತಮ್ಮ ಕುಟುಂಬದ ಮೇಲೆ. ಏಕೆಂದರೆ ದೇಶದ ಪ್ರಧಾನಿಯಾಗಿದ್ದಲ್ಲೆ ನಲವತ್ತೈವತ್ತು ವರ್ಷ ಸುದೀರ್ಘ ರಾಜಕೀಯ ಕ್ಷೇತ್ರದಲ್ಲಿ ಕಳೆದಿರುವ ಅವರು ತಮ್ಮ ಕುಟುಂಬದವರನ್ನು ಬಿಟ್ಟರೆ ಒಬ್ಬನೇ ಒಬ್ಬ ಒಕ್ಕಲಿಗ ನಾಯಕನನ್ನು ಬೆಳೆಸಲಿಲ್ಲ. ಬೆಳೆಸುವುದು ಹಾಗಿರಲಿ ತಮ್ಮ ಸ್ವಸಾಮಥ್ರ್ಯದಿಂದ ಬೆಳೆದ ಬೇರೇಗೌಡ, ಚಂದ್ರೇಗೌಡ, ನಾಗೇಗೌಡ, ನಂಜೇಗೌಡ, ಶಂಕರ್. ಈಗ ಪಾಪ ಮುದ್ದಹನುಮೇಗೌಡ ಹೀಗೆ ಎಲ್ಲಾ ಒಕ್ಕಲಿಗ ನಾಯಕರು ಬೆಳೆಯದಂತೆ ಮಾಡಿಬಿಟ್ಟರು ಎಂದರು.
ಘಟಬಂಧನ್ ಗೆದ್ದರೆ ಸಾಂದರ್ಭಿಕ ಶಿಶು ಜನನ
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಾನೊಬ್ಬ ಕಾಂಗ್ರೆಸ್ ಜೆಡಿಎಸ್ ಮೈತ್ರಿಯಿಂದ ಹುಟ್ಟಿದ ಸಾಂದರ್ಭಿಕ ಶಿಶು ಎಂದಿದ್ದಾರೆ. ಹಾಗಾದರೆ ಹತ್ತದಿನೈದು ಪಕ್ಷ ಒಗ್ಗೂಡಿ ಮಾಡಿಕೊಂಡಿರುವ ಮಹಾ ಘಟಬಂಧನ್ ಗೆದ್ದು ಅಧಿಕಾರಕ್ಕೆ ಬಂದಾಗ ಹುಟ್ಟುವುದೂ ಸಾಂದರ್ಭಿಕ ಶಿಶು ತಾನೆ. ಈ ಸಂದರ್ಭಿಕ ಶಿಶುವಿನಿಂದ ಸುಭದ್ರ ಸರ್ಕಾರ, ಜನಪರ ಆಡಳಿತ ನಿರೀಕ್ಷಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಮೋದಿ ಸೋತರೆ ದೇಶಕ್ಕೇ ಅವಮಾನ
ಪ್ರಪಂಚದಲ್ಲೇ ಬಡ ರಾಷ್ಟ್ರ ಎಂಬುದಾಗಿ ಗುರುತಿಸಿಕೊಂಡಿದ್ದ ಭಾರತವನ್ನು ಕೇವಲ 5 ವರ್ಷದಲ್ಲಿ ಪ್ರಪಂಚವೇ ಹಾಡಿ ಹೋಗಳುವಂತೆ ಮಾಡಿದ್ದಾರೆ. ರಕ್ಷಣೆ ಮತ್ತು ಅಭಿವೃದ್ಧಿಯಲ್ಲಿ ದೇಶದ ಜನ ಎದೆ ಉಬ್ಬಿಸಿ ನಡೆಯುವಂತೆ ಮಾಡಿದ್ದಾರೆ. ದೇಶದ ಗೌರವ ಮತ್ತು ಘನತೆಯನ್ನು ಹೆಚ್ಚಿಸಿದ ಮೋದಿ ಅವರು ಮತ್ತೆ ಪ್ರಧಾನಿಯಾಗದಿದ್ದರೆ ವಿಶ್ವದೆದುರು ದೇಶ ಅವಮಾನ ಎದುರಿಸಬೇಕಾಗುತ್ತದೆ ಎಂದರು.
90 ಸಾವಿರ ಮತ ಪಡೆಯಲು ಸಾಧ್ಯವಿದೆ
ವಿಧಾನಸಭಾ ಚುನಾವಣೆಯಲ್ಲಿ 70 ಸಾವಿರ ಮತಗಳನ್ನು ಬಿಜೆಪಿ ಪಡೆದಿತ್ತು. ಈಗ ಮೋದಿ ಅವರ ಜನಪರ ಆಡಳಿತ ಮತ್ತು ತಾವು ಕ್ಷೇತ್ರದಲ್ಲಿ ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟು ಚುನಾವಣೆ ಮಾಡಿದರೆ 90 ಸಾವಿರ ಮತಗಳನ್ನು ಗಳಿಸಲು ಸಾಧ್ಯ. ಹಾಗಾಗಿ ಕಾರ್ಯಕರ್ತರು ತಮ್ಮತಮ್ಮ ಊರಿನಲ್ಲೇ ಮನೆಮನೆಗೆ ಹೋಗಿ ಸಾಧನೆಗಳ ಬಗ್ಗೆ ಮಾತನಾಡಿ ಮತದಾರರ ಮನವೊಲಿಸುವ ಕಾರ್ಯ ಮಾಡಿ ಎಂದು ಕಿವಿ ಮಾತು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/03/23HULIYAR4.gif)