ಕುಣಿಗಲ್ :
ತಾಲೂಕಿನ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಮುಕ್ತ ಹಾಗೂ ನಿರ್ಭೀತಿಯಿಂದ ಬರೆದು, ಗರಿಷ್ಠ ಅಂಕಗಳಿಸಲು ಶಿಕ್ಷಕರ ಸಲಹೆ, ಸಹಕಾರ ಅತಿಮುಖ್ಯ ಎಂದು ಶಾಸಕ ಹೆಚ್.ಡಿ.ರಂಗನಾಥ್ ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಎಸ್ಎಸ್ಎಲ್ಸಿ ಪರೀಕ್ಷೆಗೆ ಸಂಬಂಧ ಪಟ್ಟಂತೆ ತಾಲೂಕು ಮಟ್ಟದ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಇದೇ ಜು.19 ಹಾಗೂ ಜು.22 ರಂದು ವಿದ್ಯಾರ್ಥಿಗಳು ಪರೀಕ್ಷೆಯನ್ನು ತಾಲೂಕಿನಾದ್ಯಂತ 3014 ವಿದ್ಯಾರ್ಥಿಗಳು 17 ಪರೀಕ್ಷಾ ಕೇಂದ್ರಗಳಲ್ಲಿ ಬರೆಯಲಿದ್ದು, ಈಗಾಗಲೇ ಶಿಕ್ಷಕರು ವಿದ್ಯಾರ್ಥಿಗಳಿಗೆ ಆನ್ಲೈನ್ ಶಿಕ್ಷಣದ ವ್ಯವಸ್ಥೆಯನ್ನು ಕೈಗೊಂಡಿದ್ದು, ವಿದ್ಯಾರ್ಥಿಗಳಿಗೆ ಅದು ಸಮರ್ಪಕವಾಗಿ ಇರುವುದಿಲ್ಲ. ಹಾಗಾಗಿ ವಿದ್ಯಾರ್ಥಿಗಳು ಆರೋಗ್ಯವಂತರಾಗಿ ಮುಕ್ತವಾಗಿ ನಿರ್ಭೀತಿಯಿಂದ ಪರೀಕ್ಷೆ ಬರೆಯಲು ಶಿಕ್ಷಕರು ಸಲಹೆ-ಸಹಕಾರ ನೀಡಬೇಕು.
ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉಪಹಾರ, ಕುಡಿಯುವ ನೀರು, ಸ್ಯಾನಿಟೈಸರ್ ವ್ಯವಸ್ಥೆ ಮಾಡಿ 6 ಸಾವಿರ ಮಾಸ್ಕ್ಗಳನ್ನು ವಿತರಿಸುವುದಾಗಿ ತಿಳಿಸಿದರು. ತಾಲೂಕಿನ 17 ಕಡೆ ಪರೀಕ್ಷೆ ನಡೆಯಲಿದ್ದು, ಡೆಸ್ಕ್ಗೆ ಒಬ್ಬರಂತೆ ಪರೀಕ್ಷೆ ಬರೆಯಲಿದ್ದಾರೆ. ಪಟ್ಟಣದ 4 ಕೇಂದ್ರದಲ್ಲಿ, ಅಮೃತೂರು 2, ಹುಲಿಯೂರುದುರ್ಗ 2, ಅಂಕನಹಳ್ಳಿ ಮಠ 1, ಸಂತೆ ಮಾವತ್ತೂರು 1, ಅರವಿಂದ ಶಾಲೆ 1, ದೊಡ್ಡಮಧುರೆ ಹಾಗೂ ಭಕ್ತರಹಳ್ಳಿ ಕೇಂದ್ರದಲ್ಲಿ ತಲಾ 1 ಪರೀಕ್ಷಾ ಕೇಂದ್ರವನ್ನು ತೆರೆಯಲಾಗಿದೆ ಎಂದರು. ಕೆಎಸ್ಆರ್ಟಿಸಿ, ಆರೋಗ್ಯ ಇಲಾಖೆಯ ವೈದ್ಯರು, ತಾಲೂಕು ಮಟ್ಟದ ಅಧಿಕಾರಿಗಳು ಪರೀಕ್ಷೆಯು ಯಶಸ್ವಿಯಾಗಲು ಶ್ರಮಿಸಬೇಕು ಎಂದು ತಿಳಿಸಿದರು.
ಕ್ಷೇತ್ರಶಿಕ್ಷಣಾಧಿಕಾರಿ ತಿಮ್ಮರಾಜು ಪರೀಕ್ಷೆಗೆ ಸಂಬಂಧಿಸಿದ ಮಾಹಿತಿ ನೀಡಿದರು. ತಹಶೀಲ್ದಾರ್ ಮಹಾಬಲೇಶ್ವರ, ಇಓ ಜೋಸೆಫ್, ಪೊಲೀಸ್ ವೃತ್ತ ನಿರೀಕ್ಷಕರಾದ ಗುರುಪ್ರಸಾದ್, ಪುರಸಭಾ ಮುಖ್ಯಾಧಿಕಾರಿ ರವಿಕುಮಾರ್, ಡಾ.ಜಗದೀಶ್, ಡಿ.ಎಲ್.ರಾಜು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
