ದಾವಣಗೆರೆ:
ಇಂದಿಗೂ ಸಹ ವೀರಶೈವ-ಲಿಂಗಾಯತರನ್ನು ಬೇರೆ, ಬೇರೆ ಮಾಡುವ ಪ್ರಯತ್ನ ನಡೆಯುತ್ತಿದ್ದು, ಇದಕ್ಕೆ ಯಾರೂ ಕಿವಿಗೊಡಬಾರದು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರು, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಕರೆ ನೀಡಿದರು.ನಗರದ ಶ್ರೀಅಭಿನವ ರೇಣುಕಾ ಮಂದಿರದಲ್ಲಿ ಶುಕ್ರವಾರ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದಿಂದ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.95ಕ್ಕೂ ಹೆಚ್ಚು ಅಂಕ ಪಡೆದ ವೀರಶೈವ-ಲಿಂಗಾಯತ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವೀರಶೈವ-ಲಿಂಗಾಯತರು ಒಂದಾದರೆ, ನಮ್ಮನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ. ಆದ್ದರಿಂದ ನಮ್ಮಲ್ಲಿರುವ ಒಳ ಪಂಗಡಗಳ ಭೇದ ಮರೆತು, ಒಳ ಪಂಗಡಗಳಲ್ಲಿಯೇ ಮದುವೆ ಮಾಡಿಕೊಳ್ಳುವ ಮೂಲಕ ನಮ್ಮ ಸಮಾಜದಲ್ಲಿ ಮೂಡುತ್ತಿರುವ ಒಡಕನ್ನು ಹೋಗಲಾಡಿ ಸಬೇಕೆಂದು ಕಿವಿಮಾತು ಹೇಳಿದರು.
ಮಹಾಸಭಾದ ಕರ್ನಾಟಕ ಘಟಕದ ರಾಜ್ಯಾಧ್ಯಕ್ಷ ಎನ್.ತಿಪ್ಪಣ್ಣ ಮಾತನಾಡಿ, ಹಿಂದೇ ಇದೇ ರೇಣುಕಾ ಮಂದಿರಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ವೀರಶೈವ-ಲಿಂಗಾಯತ ಎರಡೂ ಒಂದೇ ಎಂಬುದಾಗಿ ಪ್ರತಿಪಾದಿಸಿದಕ್ಕೆ ನನ್ನ ಭಾಷಣಕ್ಕೆ ದೊಡ್ಡ ಸ್ವಾಮೀಜಿ ಒಬ್ಬರು ಆಕ್ಷೇಪ ವ್ಯಕ್ತಪಡಿಸಿ, ಮೊಟಕುಗೊಳಿಸಿದ್ದರು. ಆದರೆ, ಈಗ ಆ ಪರಿಸ್ಥಿತಿ ಇಲ್ಲ ಎಂದರು.
ಹಿಂದೆ ನಾವು 2 ಕೋಟಿ ಜನಸಂಖ್ಯೆ ಇದೆ ಎಂಬುದಾಗಿ ಹೇಳುತ್ತಿದ್ದಾಗ, ಎಲ್ಲಿದ್ದೀರಿ ತೋರಿಸಿ ಎಂಬುದಾಗಿ ಸೂಚಿಸಿ ನೇಮಿಸಿದ್ದ ಚಿನ್ನಪ್ಪರೆಡ್ಡಿ ಕಮಿಷನ್ ಪ್ರಕಾರ ನಮ್ಮ ಜನಸಂಖ್ಯೆ 1.30 ಕೋಟಿ ಆಗಿತ್ತು. ಆದರೆ, ಸಿದ್ದರಾಮಯ್ಯ ಸರ್ಕಾರದ ಜಾತಿವಾರು ಜನಗಣತಿ ಪ್ರಕಾರ ನಮ್ಮ ಸಂಖ್ಯೆ ರಾಜ್ಯದಲ್ಲಿ 65 ಲಕ್ಷಕ್ಕೆ ಕುಸಿದಿದೆ. ಇದಕ್ಕೆ ಸರ್ಕಾರಕ್ಕೆ ದೂಷಣೆ ಮಾಡುವುದರಲ್ಲಿ ಯಾವುದೇ ಪ್ರಯೋಜನವಿಲ್ಲ. ಇದರಲ್ಲಿ ನಮ್ಮವರ ತಪ್ಪು ಸಹ ಇದೆ ಎಂದು ವಿಮರ್ಷಿಸಿದರು.
ನಾವೆಲ್ಲರೂ ಒಳ ಪಂಗಡ ಭೇದ ಮರೆಯಲು ಪ್ರಯತ್ನಿಸುತ್ತಿದ್ದರೇ, ಸರ್ಕಾರ ಒಳ ಪಂಗಡವನ್ನು ಸೃಷ್ಟಿ ಮಾಡಿತು. ಆ ಸಂದರ್ಭದಲ್ಲಿ ನಮ್ಮವರು ಸೌಲಭ್ಯ ಸಿಗುವುದಿಲ್ಲ ಎಂಬ ಕಾರಣಕ್ಕಾಗಿಯೇ ಜಾತಿವಾರು ಜನಗಣತಿಯ ಧರ್ಮದ ಕಾಲಂ ನಲ್ಲಿ ವೀರಶೈವ ಲಿಂಗಾಯತ ಎಂಬುದಾಗಿ ಬರೆಸಲಿಲ್ಲ. ಹೀಗೆ ಒಳ ಪಂಗಡಗಳ ಮಧ್ಯೆ ಅಂತರ ಹೆಚ್ಚಿಸುವ ಮೂಲಕ ಸರ್ಕಾರ ನಮಗೆ ಏನೂ ಸೌಲಭ್ಯ ಸಿಗದಂತೆ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಿಂದೆ ರಾಜ್ಯದ ವಿಧಾನಸಭೆಯಲ್ಲಿ 95ರಿಂದ 100 ಜನ ವೀರಶೈವ ಮತ್ತು ಲಿಂಗಾಯತ ಶಾಸಕರು ಇರುತ್ತಿದ್ದರು. ಅದು ಈಗ 58ಕ್ಕೆ ಕುಸಿದಿದೆ. ಇದು ಯಾರ ತಪ್ಪು ಎಂಬುದರ ಬಗ್ಗೆ ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಆದ್ದರಿಂದ ನಮ್ಮಲ್ಲಿರುವ ಒಳ ಪಂಗಡಗಳ ಭೇದ ಮರೆತು ಒಂದಾದರೆ, ನಮ್ಮವರೇ 100 ಜನ ಶಾಸಕರಾಗುವುದನ್ನು ಯಾರಿಂದಲೂ ತಡೆಯಲಾಗುವುದಿಲ್ಲ ಎಂದು ನುಡಿದರು.
ವೀರಶೈವ-ಲಿಂಗಾಯತರು ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಯಾರಿಗೂ ಸಹ ದ್ರೋಹ ಬಗೆಯುವುದಿಲ್ಲ. ಏಕೆಂದರೆ, ದ್ರೋಹ ಬಗೆಯುವರ್ಯಾರೂ ಲಿಂಗಾಯತರಲ್ಲ. ಎಲ್ಲ ಧರ್ಮಿಯರಿಗೂ ಗೌರವ ನೀಡುತ್ತೇವೆ. ಆದರೆ, ನಮ್ಮವರಲ್ಲಿ ಸ್ವಲ್ಪ ಸಿಟ್ಟು, ಅಸೂಯೆ ಜಾಸ್ತಿ. ಹೀಗಾಗಿ ನಮ್ಮವರಲ್ಲಿಯೇ ಯಾರಾದರೂ ಬೆಳೆದರೆ, ಕಾಲು ಹಿಡಿದು ಎಳೆಯುವವರೇ ಹೆಚ್ಚಿದ್ದಾರೆ. ಹೀಗೆ ಮಾಡುವುದರಿಂದ ಬಸವಣ್ಣನವರ ಆಶಯಕ್ಕೆ ಅಪಮಾನ ಮಾಡಿದಂತಾಗಲಿದೆ ಎಂದರು.
ನಾವು ಬೇರೆಯವರಿಗೆ ದ್ರೋಹ ಬಗೆಯದಂತೆ ಮುನ್ನಡೆದರೆ, ನಮ್ಮನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ ಎಂದರು .ಆವರಗೊಳ್ಳ ಪುರವರ್ಗ ಮಠದ ಶ್ರೀಓಂಕಾರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ದೇವರಮನಿ ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಹಾಸಭಾ ಉಪಾಧ್ಯಕ್ಷರುಗಳಾದ ಅಥಣಿ ಎಸ್. ವೀರಣ್ಣ, ಅಣಬೇರು ರಾಜಣ್ಣ, ಜಾನಪದ ತಜ್ಞ ಡಾ.ಎಂ.ಜಿ.ಈಶ್ವರಪ್ಪ, ಜಿಲ್ಲಾ ಉಪಾಧ್ಯಕ್ಷರುಗಳಾದ ಸುಧಾ ದಿಬ್ಬದಹಳ್ಳಿ ರಾಜಶೇಖರ್, ಕಿರುವಾಡಿ ಸೋಮಶೇಖರ್, ಕಾರ್ಯದರ್ಶಿಗಳಾದ ಪ್ರಭು ಕಲಬುರ್ಗಿ, ಜಯಪ್ರಕಾಶ್ ಮಾಗಿ, ನಿರ್ಮಲ ಸುಭಾಷ್, ಖಜಾಂಚಿ ಮುಂಡಾಸ ವೀರೇಂದ್ರ, ದೊಗ್ಗಳ್ಳಿ ಶಿವಾನಂದಗೌಡ್ರು, ಪಲ್ಲವಿ ಪಾಟೀಲ್, ರೇಣುಕಾ ಪ್ರಸನ್ನ ಮತ್ತಿತರರು ಉಪಸ್ಥಿತರಿದ್ದರು.
. ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
