ಬೆಂಗಳೂರು:
ಶೆಡ್ನಲ್ಲಿ ಮಲಗಿದ್ದ ಮಗ್ಗುಲಲ್ಲೇ ಇಬ್ಬರು ಸೆಕ್ಯುರಿಟಿ ಗಾರ್ಡ್ಗಳನ್ನು ರಾಡ್ನಿಂದ ಮನಸೋಇಚ್ಚೆ ಹೊಡೆದು ಜೋಡಿ ಕೊಲೆ ಮಾಡಿರುವ ಭಯಾನಕ ಘಟನೆ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಕಮ್ಮನಹಳ್ಳಿಯ ಬಳಿ ಮಂಗಳವಾರ ಮಧ್ಯರಾತ್ರಿ ನಡೆದಿದೆ
ಕೊಲೆಯಾದವರನ್ನು ದೊಡ್ಡಕಮ್ಮನ ಹಳ್ಳಿಯ ತೇಜಸ್ವಿನಿ ನಗರದ ನಿರ್ಮಾಣ ಹಂತದ ಸಿಟಿ ವಿಲ್ಲಾ ಬಳಿ ಕಾವಲಿಗಿದ್ದ ಅಸ್ಸಾಂ ಮೂಲದ ಸೈಫುಲ್ಲಾ (24) ಹಾಗೂ ಬಿಕ್ರಂ (25)ಎಂದು ಗುರುತಿಸಲಾಗಿದೆ.
ನಿರ್ಮಾಣ ಹಂತದ ಸಿಟಿ ವಿಲ್ಲಾದ ಕಾವಲಿಗೆ ಸೈಫುಲ್ಲಾ, ಬಿಕ್ರಂ ಹಾಗೂ ಮತ್ತೊಬ್ಬನನ್ನು ನಿಯೋಜಿಸಲಾಗಿತ್ತು.ರಾತ್ರಿ ಸೈಫುಲ್ಲಾ ಹಾಗೂ ಬಿಕ್ರಂ ಸೆಕ್ಯುರಿಟಿ ಗಾರ್ಡ್ನ ಶೆಡ್ನಲ್ಲಿ ಮಲಗಿದ್ದ ಮಗ್ಗುಲಲ್ಲೆ ರಾಡ್ನಿಂದ ಹೊಡೆದು ಕೊಲೆಗೈಯಲಾಗಿದೆ.
ಬುಧವಾರ ಬೆಳಿಗ್ಗೆ 7ರ ವೇಳೆ ವಿಲ್ಲಾ ಬಳಿ ಕೆಲಸಕ್ಕೆ ನಿರ್ಮಾಣ ಕಾಮಗಾರಿಗೆ ಬಂದ ಕಾರ್ಮಿಕರು ಕೊಲೆಯಾಗಿರುವುದನ್ನು ನೋಡಿ ಮಾಹಿತಿ ನೀಡಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಹುಳಿಮಾವು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಸೈಫುಲ್ಲಾ ಹಾಗೂ ಬಿಕ್ರಂ ಜತೆಗಿದ್ದ ಮತ್ತೊಬ್ಬ ಸೆಕ್ಯುರಿಟಿಗಾರ್ಡ್,ಕೆಲಸ ಬಿಟ್ಟು ಹೋಗಲು ಮುಂದಾಗಿದ್ದ. ಆದರೆ, ಆತನನ್ನು ತಡೆ ಹಿಡಿದಿದ್ದ ಇವರಿಬ್ಬರು ಎಲ್ಲಿಯೂ ಹೋಗಲು ಬಿಡದೆ ಕಾಯುತ್ತಿದ್ದರು. ಇದರಿಂದಾಗಿ ರೊಚ್ಚಿಗೆದ್ದ ಆತ, ಜೋಡಿ ಕೊಲೆ ನಡೆಸಿರಬಹುದೆಂದು ತಿಳಿದು ಬಂದಿದೆ.
ಪ್ರಕರಣ ದಾಖಲಿಸಿರುವ ಹುಳಿಮಾವು ಪೊಲೀಸರು ಪರಾರಿಯಾಗಿರುವ ಸೆಕ್ಯುರಿಟಿ ಗಾರ್ಡ್ಗಾಗಿ ತೀವ್ರ ಶೋಧ ನಡೆಸಿದ್ದಾರೆಂದು ಡಿಸಿಪಿ ಡಾ. ಬೋರಲಿಂಗಯ್ಯ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
