ಚಿತ್ರದುರ್ಗ:
ಭಾರತವನ್ನು ವ್ಯಾಪಿಸಿರುವ ಆರ್ಯ ಸಂಸ್ಕೃತಿ ಹಾಗೂ ದ್ರಾವಿಡ ಸಂಸ್ಕೃತಿಗೆ ಮೂಲ ಯಾವುದು ಎನ್ನುವುದನ್ನು ಮೊದಲು ಎಲ್ಲರೂ ಚಿಂತಿಸಬೇಕಾಗಿದೆ ಎಂದು ಮುರುಘಾಮಠದ ಡಾ.ಶಿವಮೂರ್ತಿ ಶರಣರು ಹೇಳಿದರು.
ಕಬೀರಾನಂದಾಶ್ರಮದಲ್ಲಿ ಆರಂಭಗೊಂಡಿರುವ 89 ನೇ ಮಹಾಶಿವರಾತ್ರಿ ಮಹೋತ್ಸವವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
ಗುರುಗಳು-ಜಗದ್ಗುರುಗಳ ನಡುವೆ ಸದ್ಗುರುಗಳು ಬೇಕಾಗಿದ್ದಾರೆ. ಗಂಡುಮೆಟ್ಟಿನ ನಾಡು ಚಿತ್ರದುರ್ಗದಲ್ಲಿ ಆರೂಢ ಪರಂಪರೆ ಆರಂಭಗೊಂಡಿರುವುದು ಸ್ವಾಗತಾರ್ಹ. ದ್ರಾವಿಡ ಸಂಸ್ಕೃತಿ ದೇಶದ ಮೂಲ ಸಂಸ್ಕೃತಿ. ದ್ರಾವಿಡ ಸಂಸ್ಕೃತಿಯ ಮೂಲ ಜನಕ ಹರ, ಶಿವ. ಶಿವ ಸಂಸ್ಕೃತಿ ಎಲ್ಲಾ ಜಾತಿ ಜನಾಂಗಗಳನ್ನು ಒಳಗೊಂಡಿರುವ ಸಂಸ್ಕೃತಿ. ಆರ್ಯ ಸಂಸ್ಕೃತಿಯ ಪ್ರವರ್ತಕ ವಿಷ್ಣು. ಇವೆರಡು ಸಂಸ್ಕøತಿಯ ನಡುವೆ ವ್ಯವಸ್ಥಿತ ಸಂಘರ್ಷಗಳು ನಡೆಯುತ್ತಿವೆ ಎಂದು ವಿಷಾಧಿಸಿದರು.
ಸಂಸ್ಕೃತಿಯನ್ನು ವಿಕೃತಿಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ವಿಕೃತ, ವಿಪರ್ಯಾಸಗಳ ನಡುವೆ ನಾವು ನೀವುಗಳೆಲ್ಲರೂ ಬದುಕುತ್ತಿದ್ದೇವೆ. ನಮ್ಮ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ತಿಳಿಸಿದರು.
ಶಿವ ಎಂದರೆ ಶುಭ, ಮಂಗಳ, ವಿಶ್ವವ್ಯಾಪಿ ಅಗೋಚರ ಶಿವನನ್ನು ಅರ್ಥಮಾಡಿಕೊಂಡರೆ ಭಾರತದಲ್ಲಿ ಶಾಂತಿ ಕಾಣಬಹುದು. ಮನುಷ್ಯನಿಗೆ ಹಣ, ಆಸ್ತಿ, ಅಧಿಕಾರ, ಅಂತಸ್ತು ಎಲ್ಲವೂ ಇದೆ. ಆದರೆ ದೈನಂದಿನ ಬದುಕಿಗೆ ಬೇಕಾಗಿರುವ ಶಾಂತಿ ನೆಮ್ಮದಿ ಇಲ್ಲದಂತಾಗಿದೆ. ಶಿವಸಂಸ್ಕತಿಯ ಮೂಲಕ ಮಾನವ ಶಾಂತಿಯನ್ನು ಪಡೆಯಬಹುದಾಗಿದೆ. ಜನರು ಸಂಸ್ಕತರಾಗಿ ಅಕ್ಷರ ಸಂಸ್ಕತಿಗೆ ಒಳಗಾದಾಗ ಮಾತ್ರ ಆರೋಗ್ಯಪೂರ್ಣ ಸಮಾಜ ಅನಾವರಣಗೊಳ್ಳಲಿದೆ ಎಂದು ಹೇಳಿದರು.
ಸರ್ಕಾರಿ ಕಲಾ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಶಿವೋಪಾಸನೆ ಮತ್ತು ಆರೂಢ, ಅವಧೂತ ಚಿಂತನೆ ಕುರಿತು ಉಪನ್ಯಾಸ ನೀಡಿ ಆಗಮ ಸಾಹಿತ್ಯದ ದೀಕ್ಷೆ ಪಡೆದರೆ ಶೂದ್ರತ್ವ ಅಳಿಸಿ ಹೋಗುತ್ತದೆ. ವರ್ಣಾತೀತ, ಜಾತ್ಯಾತೀತರಾಗುತ್ತಾರೆ. ಶಿವೋಪಾಸನೆಗೆ ಸುಧೀರ್ಘವಾದ ಇತಿಹಾಸವಿದೆ. ಜಾತಿ, ಮತ, ಲಿಂಗ, ಬೇದಗಳನ್ನು ಆರೂಢ ಪರಂಪರೆ ನಿರಾಕರಿಸಿದೆ. ಆರೂಢ ಪರಂಪರೆ ಅರಿವು ಜ್ಞಾನ ಮಾರ್ಗದ ಪರಂಪರೆ. ಲೋಕದ ಆಕರ್ಷಣೆಗೆ ಒಳಗಾಗಿ ಮಾನವ ಬದುಕನ್ನು ಸಂಕಟ,ಸವಾಲು, ಇಕ್ಕಟ್ಟು, ಬಿಕ್ಕಟ್ಟಿಗೆ ಸಿಲುಕಿಸಿಕೊಂಡಿದ್ದಾನೆ. ಇದಕ್ಕೆಲ್ಲಾ ಆರೂಢ ತತ್ವದಿಂದ ಪರಿಹಾರವಿದೆ ಎಂದರು.
ಧಾರ್ಮಿಕ ಸಂಘರ್ಷ, ಜಾತಿ ಸಂಘರ್ಷಗಳಿಗೆ ಇಂತಹ ತತ್ವ ಪರಿಹಾರ ನೀಡುತ್ತದೆ. ಅವಧೂತರು ಎಂದರೆ ಲೌಕಿಕವಾಗಿ ಸರ್ವಸಂಗ ಪರಿತ್ಯಾಗಿಗಳು. ಅಂತರಂಗ ಪೂಜೆಗೆ ಮಹತ್ವ ಕೊಟ್ಟವರು ಅವಧೂತರು. ಅರಿವಿನ ಮಾರ್ಗದಲ್ಲಿ ನಡೆದರೆ ಶಿವನನ್ನು ಕಾಣಬಹುದೆಂದು ಅವಧೂತರು ಹೇಳಿದ್ದಾರೆ. ಮನುಷ್ಯನ ಬಾಳು ಬೆಳಕಾಗಬೇಕೆಂದು ಬಯಸಿದವರು. ಆರೂಢರು, ಅವಧೂತರು, ಸಿದ್ದರು, ನಾಥರ ತತ್ವಗಳು ಪ್ರಸ್ತುತ ಸಮಾಜಕ್ಕೆ ಅವಶ್ಯಕ. ಅರಿವಿನ ಮಾರ್ಗ, ಆಲೋಚನೆ, ಚಿಂತನೆಗಳನ್ನು ಮನುಷ್ಯ ದೂರ ಮಾಡಿರುವುದರಿಂದ ಸಂಕುಚಿತನಾಗುತ್ತಿದ್ದಾನೆ ಎಂದು ತಿಳಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಇತಿಹಾಸ ಸಂಶೋಧಕ ಪ್ರೊ.ಲಕ್ಷ್ಮಣತೆಲಗಾಗಿ ಭಾರತಕ್ಕೆ ಸಂತರ ದೊಡ್ಡ ಪರಂಪರೆಯಿದೆ. ಬುದುಕು ಮೌಲಿಕತೆಯಿಂದ ಕೂಡಿಲ್ಲದ ಪರಿಣಾಮ ಎಲ್ಲೆಲ್ಲೂ ನೋವು, ದುಃಖ, ರೋಗ, ಆತಂಕ ಮನೆ ಮಾಡಿದೆ. ಶಾಂತಿ ನೆಮ್ಮದಿಗೆ ಜಗತ್ತು ಅಂಬಲಿಸುತ್ತಿದೆ. 2300 ವರ್ಷಗಳ ಹಿಂದೆಯೇ ಅಶೋಕ ಮಹಾರಾಜ ಶಾಂತಿಯ ಸಂದೇಶವನ್ನು ಸಮಾಜಕ್ಕೆ ನೀಡಿದ್ದಾರೆ. ಆದರೆ ಯಾರು ಅದನ್ನು ಪಾಲಿಸುತ್ತಿಲ್ಲ. ತ್ಯಾಗ, ಭಕ್ತಿಯಿಂದ ಮಾನವ ನೋವಿನಿಂದ ಹೊರಬರಲು ಸಾಧ್ಯ ಎಂದರು ಹೇಳಿದರು.
ಕಬೀರಾನಂದಾಶ್ರಮದ ಶಿವಲಿಂಗಾನಂದಮಹಾಸ್ವಾಮಿ 89 ನೇ ಮಹಾಶಿವರಾತ್ರಿ ಮಹೋತ್ಸವದ ಸಾನಿಧ್ಯ ವಹಿಸಿದ್ದರು. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಸನ್ನನಾಥ ಮಹಾಸ್ವಾಮಿ, ಗೋಸಾಯಿ ಮಠ ಗವಿಪುರಂನ ಮಂಜುನಾಥ ಮಹಾರಾಜ್, ಸಂಸದ ಬಿ.ಎನ್.ಚಂದ್ರಪ್ಪ, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ತಾಲೂಕು ಪಂಚಾಯಿತಿ ಅಧ್ಯಕ್ಷ ಡಿ.ಎಂ.ಲಿಂಗರಾಜು, ಉದ್ಯಮಿ ಎಂ.ಕೆ.ತಾಜ್ಪೀರ್, ಜಿ.ದೇವರಾಜ್ ವೇದಿಕೆಯಲ್ಲಿದ್ದರು. ಸದ್ಗುರು ಕಬೀರಾನಂದಸ್ವಾಮಿ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನೆರವೇರಿತು.