ಹುಳಿಯಾರು
ಹುಳಿಯಾರಿನ ಗ್ರಾಮದೇವತೆ ಶ್ರೀ ದುರ್ಗಾಪರಮೇಶ್ವರಿ ದೇವಿಯ 49 ನೇ ವರ್ಷದ ಜಾತ್ರಾಮಹೋತ್ಸವದ ಅಂಗವಾಗಿ ಗುರುವಾರ ಮುಂಜಾನೆ ನಡೆದ ಕಳಸ ಮಹೋತ್ಸವದಲ್ಲಿ ನೂರಾರು ಹೆಣ್ಣು ಮಕ್ಕಳು ಕಳಸವನ್ನು ಹೊತ್ತು ತಮ್ಮ ಭಕ್ತಿಯನ್ನು ಸಮರ್ಪಿಸಿದರು.
ಬುಧವಾರ ತಡರಾತ್ರಿ ದುರ್ಗಮ್ಮ, ಹುಳಿಯಾರಮ್ಮ, ಹೊಸಹಳ್ಳಿಯ ಕೊಲ್ಲಾಪುರದಮ್ಮ, ಕೆಂಚಮ್ಮ, ಗೌಡಗೆರೆ ದುರ್ಗಮ್ಮ, ಹೊಸಳ್ಳಿಪಾಳ್ಯದ ಅಂತಘಟ್ಟೆಅಮ್ಮ, ತಿರುಮಲಾಪುರದ ಕೊಲ್ಲಾಪುರದಮ್ಮ ದೇವರುಗಳ ಕೂಡು ಭೇಟಿ ನಡೆದು ಸಕಲ ದೇವರುಗಳು ಗುರುವಾರ ಮಂಜಾನೆ ಪಟ್ಟಣದ ಕೆರೆಬಾವಿ ಹತ್ತಿರ ಆಗಮಿಸಿ ಪಟ್ಟದ ಕಳಸ ಸ್ಥಾಪನೆ ನಡೆಯಿತು.
ನಂತರ ಸುತ್ತೇಳು ಹಳ್ಳಿಗಳ ನೂರಾರು ಹೆಣ್ಣು ಮಕ್ಕಳು ಕಳಸ ಹೊತ್ತು ಅಮ್ಮನವರ ಪಟ್ಟದ ಕಳಸದೊಂದಿಗೆ ವಾದ್ಯದ ಹಿಮ್ಮೇಳದಲ್ಲಿ ನಡೆಮುಡಿಯೊಂದಿಗೆ ಮೂಲಸ್ಥಾನಕ್ಕೆ ಸಾಗಿದರು. ಪೋಷಕರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತಾಧಿಗಳು ಹೆಜ್ಜೆ ಹಾಕಿದರು.
ಹುಳಿಯಾರು ಕೆರೆ ಬಾವಿ ಅಂಗಳದಿಂದ ಹೆಬ್ಬಾಗಿಲು, ರಂಗನಾಥಸ್ವಾಮಿ ದೇವಾಲಯದ ರಸ್ತೆ, ಹುಳಿಯಾರಮ್ಮ ದೇವಸ್ಥಾನ ಮುಂಭಾಗ, ಬ್ರಾಹ್ಮಣರ ಬೀದಿ, ಕೆಂಚಮ್ಮನ ದೇವಸ್ಥಾನ, ಆಚಾರ್ ಬೀದಿಯ ಮೂಲಕ ಹಾದು ದುರ್ಗಮ್ಮನ ಮೂಲಸ್ಥಾನಕ್ಕೆ ತಲುಪಿ ಕಳಸ ವಿಸರ್ಜಿಸಲಾಯಿತು. ಸೇವಾಕರ್ತರಿಂದ ಪಾನಕ, ಫಲಾಹಾರ ವಿತರಿಸಲಾಯಿತು.
ದೇವಸ್ಥಾನದ ಧರ್ಮದರ್ಶಿ ಪಟಾಕಿ ಶಿವಣ್ಣ, ಕನ್ವೀನಿಯರ್ ಹು.ಕೃ. ವಿಶ್ವನಾಥ್ ಸೇರಿದಂತೆ ಗುಂಚಿಗೌಡರುಗಳು, ವಿವಿಧ ದೇವಾಲಯಗಳ ಪ್ರಮುಖರು, ಗ್ರಾಮಸ್ಥರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
