ಹಾವೇರಿ

ದಿನನಿತ್ಯದ ಜೀವನಕ್ಕೆ ಶಿಕ್ಷಣ ಬೇಕು ಹಾಗೂ ಸುಲಭವಾದ ಜೀವನಕ್ಕೆ ಅಕ್ಷರದ ಅವಶ್ಯಕತೆ ಇದೆ. ಶಿಕ್ಷಣವು ಹುಟ್ಟಿನಿಂದ ಸಾಯುವವರೆಗೆ ನಿರಂತರವಾಗಿ ನಡೆಯುವ ಪ್ರಕ್ರಿಯೆ ಎಂದು ಜಿ.ಪಂ.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಲೀಲಾವತಿ ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ಜರುಗಿದ ಮೂರು ದಿನಗಳ ಮುಖ್ಯ ತರಬೇತುದಾರರ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ,ಈ ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯವರು ಸಕ್ರಿಯವಾಗಿ ಕಾರ್ಯ ಮಾಡಬೇಕಾಗಿದೆ ಪ್ರತಿಯೊಬ್ಬರ ಜೀವನದಲ್ಲಿ ಶಿಕ್ಷಣವೆಂಬ ಬೆಳಕು ಮತ್ತು ಜ್ಞಾನ ಅವಶ್ಯಕವಾಗಿ ಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಲೋಕ ಶಿಕ್ಷಣ ಸಮಿತಿ ಅಧ್ಯಕ್ಷರು ಹಾಗೂ ಜಿ.ಪಂ.ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ ಮಾತನಾಡಿ, ಅಕ್ಷರ ಮತ್ತು ಅನ್ನ ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ. ಆಧುನಿಕ ಯುಗದಲ್ಲಿ ಕನಿಷ್ಠ ಅಕ್ಷರ ಕಲಿಸಬೇಕಾಗಿದೆ. ಅಕ್ಷರ ಜ್ಞಾನ ಹೊಂದಿದವರು ಬೇಸರ ಮಾಡಿಕೊಳ್ಳದೇ ಅಕ್ಷರ ಜ್ಞಾನವನ್ನು ಬೇರೆಯವರಿಗೆ ಧಾರೆ ಎರೆಯಬೇಕು. ದೇಶದ ಸರ್ವತೋಮುಖ ಅಭಿವೃದ್ಧಿಗೆ ಅಕ್ಷರ ಅರಿವು ಅವಶ್ಯವಾಗಿದೆ ಎಂದು ಹೇಳಿದರು.
ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ದುಗ್ಗತ್ತಿ ಅವರು ಮಾತನಾಡಿ, ಅನಕ್ಷರಸ್ಥರಿಗೆ ಶಿಕ್ಷಣ ಕೊಡುವುದು ಪುಣ್ಯದ ಕಾರ್ಯವಾಗಿದೆ. ಸಮಸ್ಯೆಗಳನ್ನು ಎದುರಿಸುವ ಶಕ್ತಿ ಶಿಕ್ಷಣಕ್ಕಿದೆ ಎಂದರು.
ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಎಂ.ಎಚ್.ಪಾಟೀಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ನಾಲ್ಕು ಯೋಜನೆಗಳು ಅನುಷ್ಠಾನಗೊಂಡಿದ್ದು, ಒಟ್ಟು 28,957 ಅಕ್ಷರ ಕಲಿಕೆ ಗುರಿ ಇಟ್ಟುಕೊಂಡು 40 ಜನ ಮುಖ್ಯ ತರಬೇತುದಾರರಿಗೆ ತರಬೇತಿ ನೀಡಲಾಗುತ್ತಿದೆ. ಜಿಲ್ಲೆಯ 2500 ಬೋಧಕರಿಗೆ ಇವರು ಪಠ್ಯಾಧಾರಿತ ತರಬೇತಿ ನೀಡಲು ಮೂರು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ಸದ್ಯ ಜಿಲ್ಲೆಯ ಸಾಕ್ಷರತಾ ಪ್ರಮಾಣ 77.60% ಇದ್ದು ಹಂತ-ಹಂತವಾಗಿ 2021 ರ ಅವಧಿಗೆ ಶೇ.95% ಸಾಕ್ಷರತಾ ಪ್ರಮಾಣ ಹೆಚ್ಚಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಬೋಧಕರು, ಪ್ರೇರಕರು ಹಾಗೂ ಸಂಯೋಜಕರು ಉತ್ತಮವಾಗಿ ಕಾರ್ಯ ನಿರ್ವಹಿಸಬೇಕು ಹಾಗೂ ಮಹಿಳಾ ಸಾಕ್ಷರತೆಯನ್ನು ಪುರುಷ ಸಾಕ್ಷರತಾ ಪ್ರಮಾಣಕ್ಕೆ ಹೆಚ್ಚಿಸಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಲೋಕ ಶಿಕ್ಷಣ ನಿರ್ದೇಶನಾಲಯದ ಮಾಜಿ ಸದಸ್ಯರಾದ ಶ್ರೀಮತಿ ಮಾಧುರಿ ದೇವದರ, ರಾಜ್ಯಸಂಪನ್ಮೂಲ ವ್ಯಕ್ತಿಗಳಾದ ವೈ.ಟಿ.ಹೆಬ್ಬಳ್ಳಿ, ಶ್ರೀಮತಿ ರೇಣುಕಾ ಎಸ್. ತ್ರಿಪಾಟಿ, ಜಿ.ಎಫ್.ಹರಣೇನವರ, ಶ್ರೀಮತಿ ದ್ಯಾಮವ್ವ ಕೆ. ಲಮಾಣಿ, ಎಂ.ಎಂ.ನದಾಫ, ಎನ್.ಎಚ್.ಕರೇಗೌಡ್ರ, ಎಂ.ಎಸ್.ದಂಡಗಿ, ಎಫ್.ಆರ್.ಹಿರೇಮಠ, ಸಿ. ಎನ್. ಕಲಕೋಟಿ, ಎಂ.ಎಸ್.ಬಡಿಗೇರ, ವ್ಹಿ. ಬಿ. ಆಲದಕಟ್ಟಿ, ಶ್ರೀಮತಿ ನಾಗರತ್ನಾ ಹುಲ್ಲತ್ತಿ, ಶ್ರೀಮತಿ ನಿರ್ಮಲಾ ರೊಡ್ಡಣ್ಣನವರ, ಮಲ್ಲಿಕಾರ್ಜುನ ಕಾಳೆ, ಮಾಲತೇಶ ಮಾದರ ಉಪಸ್ಥಿತರಿದ್ದರು. ಚಂದ್ರಕಾಂತ ಕೂಸನೂರ ಸ್ವಾಗತಿಸಿದರು. ಶ್ರೀಮತಿ ಸುನಂದಾ ಚಿನ್ನಾಪುರ ಹಾಗೂ ಸಂಗಡಿಗರು ಸಾಕ್ಷರ ಗೀತೆ ಹಾಡಿದರು. ಜಿಲ್ಲಾ ಸಂಯೋಜಕರಾದ ನಾರಾಯಣ ಕರೆವ್ವನವರ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಸಂಯೋಜಕರ ಎಲ್. ಯು. ನಾಯ್ಕರ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
