ನೌಕರರ ಮೇಲೆ ತಹಸೀಲ್ದಾರ್ ಕುಟುಂಬದಿಂದ ಹಲ್ಲೆ..!

ಮಧುಗಿರಿ
 
    ತಹಸೀಲ್ದಾರ್ ಮತ್ತು ಅವರ ಪತ್ನಿ ವಸತಿ ಗೃಹಕ್ಕೆ ಕರೆಸಿಕೊಂಡು ಮಹಿಳಾ ನೌಕರರ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಗ್ರಾಮ ಲೆಕ್ಕಿಗರು ತಾಲ್ಲೂಕು ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು.
   ಇತ್ತೀಚೆಗೆ ತಹಸೀಲ್ದಾರ್ ನಂದೀಶ್ ಮತ್ತು ಅವರ ಪತ್ನಿ ತ್ರಿವೇಣಿ ಅವರು ಮಿಡಿಗೇಶಿ ಹೋಬಳಿಯ ಗ್ರಾಮಲೆಕ್ಕಾಧಿಕಾರಿ ಮಂಜುಳಾರವರನ್ನು ಮನೆಗೆ ಕರೆಸಿಕೊಂಡು ಅವಾಚ್ಯ ಶಬ್ದಗಳಿಂದ  ನಿಂದಿಸಿ, ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪವಿದೆ.
     ಈ ಸಂಬಂಧ ಮಂಜುಳ ಅವರು ಜಿಲ್ಲಾ ಘಟಕಕ್ಕೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕಿನ ನೂರಾರು ಗ್ರಾಮಲೆಕ್ಕಿಗರು ತಾಲ್ಲೂಕು ಕಚೇರಿ ಮುಂಭಾಗ ಜಮಾಯಿಸಿ, ತಹಸೀಲ್ದಾರ್ ನಂದೀಶ್ ಮತ್ತು ಅವರ ಪತ್ನಿ ತ್ರಿವೇಣಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ತಹಸೀಲ್ದಾರ್‍ರವರನ್ನು ವರ್ಗಾವಣೆಗೊಳಿಸಿ ಅವರ ಪತ್ನಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳ ಬೇಕೆಂದು ಪಟ್ಟು ಹಿಡಿದು ಸಂಜೆವರೆಗೂ ಪ್ರತಿಭಟನೆ ನಡೆಸಿದರು. 
   ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಿಗರ ಸಂಘದ ಜಿಲ್ಲಾಧ್ಯಕ್ಷ ಮುರಳೀಧರ ಮಾತನಾಡಿ, ತಹಸೀಲ್ದಾರ್ ಅವರು ಮೊದಲಿನಿಂದಲೂ ಸಹ ಸಿಬ್ಬಂದಿಗಳ ಮೇಲೆ ಹಾಗೂ ತಮ್ಮ ಕೆಳ ಅಧಿಕಾರಿಗಳ ಮೇಲೆ ದೌರ್ಜನ್ಯ ಎಸಗುತ್ತಿದ್ದು, ಗುರುವಾರದಂದು ಮಿಡಿಗೇಶಿ ಹೋಬಳಿಯ ಮಂಜುಳಾರವರನ್ನು ಮನೆಗೆ ಕರೆಸಿಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಮತ್ತು ಅವರ ಪತ್ನಿಯು ಈಕೆಯನ್ನು ಥಳಿಸಿರುವುದು ಖಂಡನೀಯ ಎಂದರು.
 
    ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಾತನಾಡಿ, ತಹಸೀಲ್ದಾರ್ ಅವರು ಅಶ್ಲೀಲ ಪದಗಳನ್ನು ಮಾತನಾಡಿರುವುದು ಮತ್ತು ಅವರ ಪತ್ನಿ ತ್ರಿವೇಣಿ ಮಂಜುಳರವರಿಗೆ ಥಳಿಸಿರುವುದು ತುಂಬಾ ಅನ್ಯಾಯ. ಇವರನ್ನು ಎತ್ತಂಗಡಿ ಮಾಡಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸದೆ ಹೋದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
    ಸಂತ್ರಸ್ತೆ ಮಂಜುಳಾ ಮಾತನಾಡಿ, ಸುಮಾರು ಹದಿನೈದು ದಿನಗಳಿಂದ ತಹಸೀಲ್ದಾರ್ ಅವರು ಕಚೇರಿ ಸಮಯ ಹೊರತುಪಡಿಸಿ ಬೆಳಗ್ಗೆ ಮತ್ತು ಸಂಜೆಯ ವೇಳೆಯಲ್ಲಿ ಮನೆಗೆ ಕರೆಸಿಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ. ಗುರುವಾರದ ಘಟನೆಯಿಂದ ಬೇಸತ್ತು ನಾನು ಆತ್ಮಹತ್ಯೆಗೆ ಪ್ರಯತ್ನ ನಡೆಸಿದ್ದೆ. ನಂತರ ನಮ್ಮ ಎಲ್ಲಾ ಸಂಘದ ಪದಾಧಿಕಾರಿಗಳಿಗೆ ಈ ವಿಚಾರವನ್ನು ತಿಳಿಸಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು ಮತ್ತು ನನ್ನಂತೆ ಇತರ ಮಹಿಳೆಯರನ್ನು ಈ ರೀತಿ  ನಿಂದಿಸುವುದನ್ನು ತಡೆಯಲು ಮುಂದೆ ಆಗಬಹುದಾದ ಅನಾಹುತಗಳನ್ನು ತಡೆಯಲು ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದರು. 
    ಉಪ ವಿಭಾಗಾಧಿಕಾರಿ ಚಂದ್ರಶೇಖರಯ್ಯ ಮಾತನಾಡಿ ಈ ಸಂಬಂಧ ಜಿಲ್ಲಾಧಿಕಾರಿಗಳು ತಮ್ಮ ಕಚೇರಿಯಲ್ಲಿ ಸಭೆ ಕರೆಯಲಾಗಿದೆ. ಆದ್ದರಿಂದ ಎಲ್ಲಾ ಗ್ರಾಮ ಲೆಕ್ಕಾಧಿಕಾರಿಗಳು ಪ್ರತಿಭಟನೆಯನ್ನು ಕೈಬಿಟ್ಟು ಸಭೆಗೆ ತೆರಳುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಕೈಬಿಟ್ಟು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದರು. ಇದೇ ಸಂದರ್ಭದಲ್ಲಿ ಸಿಪಿಐ ದಯಾನಂದ ಶೇಗುಣಸಿ, ಪಿಎಸ್‍ಐ ಮೋಹನ್ ಕುಮಾರ್, ಸರ್ವಮಂಗಳ ಹಾಗೂ ಪೋಲೀಸರು ಬಿಗಿ ಬಂದೋಬಸ್ತ್ ಕೈಗೊಂಡರು. 
 
     ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ವಿ.ಎಚ್.ವೆಂಕಟೇಶ್, ಜಿಲ್ಲಾ ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ಎಂ.ಡಿ.ಮಹೇಶ್, ಎಂ.ಎನ್.ರಶ್ಮಿ, ಜಯರಾಮಯ್ಯ, ಶಿವರಾಮಯ್ಯ, ಎಸ್.ದೇವರಾಜು, ರವಿ, ಮಲ್ಲಿಕಾರ್ಜುನಯ್ಯ, ಜಯರಾಮ್, ರಾಜೇಶ್ ಪ್ರಸನ್ನ ಕುಮಾರ್, ನಾಗಭೂಷಣ, ವಿಜಯಕುಮಾರ್, ಎಸ್.ಶ್ರೀನಿವಾಸ್ ಸೇರಿದಂತೆ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link