ಶಿರಾ : ಕಿವಿ ಮೇಲೆ ಹೂ ಧರಿಸಿ ಪ್ರತಿಭಟನೆ

ಶಿರಾ : 

      ನಗರ ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗೆ ನಿವೇಶನ ನೀಡದೆ ನೂರಾರು ವರ್ಷಗಳಿಂದ ವಾಸಿಸುತ್ತಿರುವ ಮನೆಗಳ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನೂ ನೀಡದೆ, ಇಲ್ಲಿನ ನಗರಸಭೆಯು ನಿರ್ಲಕ್ಷ್ಯ ತೋರಿರುವ ಹಿನ್ನೆಲೆಯಲ್ಲಿ ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿಯ (ಆS4) ಪದಾಧಿಕಾರಿಗಳು ಕಿವಿ ಮೇಲೆ ಹೂ ಇಟ್ಟುಕೊಂಡು ಅತ್ಯಂತ ವಿನೂತನವಾಗಿ ಪ್ರತಿಭಟಿಸಿ, ತಮ್ಮ ಆಕ್ರೋಶ ಹೊರ ಹಾಕಿದರು.

      ಕಳೆದ ಹತ್ತಾರು ವರ್ಷಗಳಿಂದಲೂ ನಿವೇಶನ ಹಂಚಿಕೆಯ ನೆಪದಲ್ಲಿ ನಗರದ ಮತದಾರರನ್ನು ವಂಚಿಸುತ್ತಾ ಬಂದಿರುವ ನಗರಸಭೆಯು ಫಲಾನುಭವಿಗಳ ಕಿವಿಗೆ ಹೂವು ಮುಡಿಸಿ ಮೂರ್ಖರನ್ನಾಗಿಸುತ್ತಿದೆ ಎಂದು ಆರೋಪಿಸಿ ಡಿಎಸ್-4 ಪ್ರತಿಭಟನೆ ನಡೆಸಲು ಕಾರಣವಾಗಿತ್ತು. ಬುಧವಾರ ಬೆಳಗ್ಗೆ ನಗರದ ನಗರಸಭೆಯ ಆವರಣದಲ್ಲಿ ನೂರಾರು ಮಂದಿ ಡಿ.ಎಸ್.-4 ಸದಸ್ಯರು ಹೋರಾಟದ ಗೀತೆಗಳನ್ನು ಹಾಡುತ್ತಾ ಸಂಜೆಯವರೆಗೂ ಪ್ರತಿಭಟನೆ ನಡೆಸಿದರು.

      ಸಮಿತಿಯ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಮಾತನಾಡಿ, ಅಲ್ಪಸಂಖ್ಯಾತ ಹಿಂದುಳಿದ ಹಾಗೂ ಅರ್ಹ ದಲಿತ ಸಮುದಾಯಗಳಿಗೆ ನಿವೇಶನ ನೀಡುವಲ್ಲಿ ಇಲ್ಲಿನ ನಗರಸಭೆ ಸಂಪೂರ್ಣ ವಿಫಲವಾಗಿದೆ. ನಗರದ ಹಳೆಯ ಹಟ್ಟಿಗಳಾದ ರಂಗನಾಥ ನಗರ, ಕರೆಕಲ್ಲ ಹಟ್ಟಿ, ಮಲ್ಲಿಕಾ ಪುರ, ಕೆರೆಹಿಂದಲ ಹಟ್ಟಿಯ ನೂರಾರು ಮಂದಿ ಅರ್ಹ ಫಲಾನುಭವಿಗಳು ವಾಸದ ಮನೆ ಕಟ್ಟಿಕೊಂಡು 200 ಕ್ಕೂ ಹೆಚ್ಚು ವರ್ಷಗಳಿಂದ ಬದುಕುತ್ತಿದ್ದರೂ, ಅಂತಹ ಕುಟುಂಬಗಳಿಗೆ ಮೂಲ ನಿವೇಶನ ಹಕ್ಕು ಪತ್ರಗಳನ್ನು ಇನ್ನೂ ನೀಡಿಲ್ಲ. ಚುನಾವಣೆಯ ಸಮಯ ಹತ್ತಿರಕ್ಕೆ ಬಂದಾಗ ನಿವೇಶನ ನೀಡಲು ಅರ್ಜಿಗಳನ್ನು ಆಹ್ವಾನಿಸಿ, ನಿವೇಶನ ನೀಡದೆ ಪ್ರತಿ ಹಂತದಲ್ಲೂ ಇಲ್ಲಿನ ನಗರಸಭೆಯು ಫಲಾನುಭವಿ ಗಳನ್ನು ಶೋಷಣೆ ಮಾಡುತ್ತಿದೆ ಎಂದು ವೆಂಕಟಗಿರಿಯಯ್ಯ ದೂರಿದರು.

     ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷ ಟೈರ್ ರಂಗನಾಥ್ ಮಾತನಾಡಿ, ನಗರಸಭೆಯ ಮುಂದೆ ನಮ್ಮ ಸಮಿತಿಯು ಕಿವಿಯಲ್ಲಿ ಹೂವನ್ನು ಇಟ್ಟುಕೊಂಡು ವಿನೂತನ ಪ್ರತಿಭಟನೆ ಮಾಡಲು ಪ್ರಮುಖ ಕಾರಣವಿದೆ. ನಗರಸಭೆಯು ಪ್ರತಿ ಚುನಾವಣೆ ಹತ್ತಿರಕ್ಕೆ ಬಂದಾಗ ಜನಪ್ರತಿನಿಧಿ ಗಳು ನಿವೇಶನ ಹಂಚುವ ನಾಟಕ ಆಡುತ್ತಾರೆ. ಜನರ ಕಿವಿಗೆ ಹೂ ಮುಡಿಸುವ ಕೆಲಸ ನಡೆದಿದೆಯಾದ್ದರಿಂದ ಹೂ ಮುಡಿದು ಪ್ರತಿಭಟನೆಗೆ ಮುಂದಾಗಿದ್ದೇವೆ ಎಂದರು.

      ಅರ್ಹರಿಗೆ ಈಗಾಗಲೆ 160 ಎಕರೆ ಭೂಮಿಯಲ್ಲಿ ನಿವೇಶನ ಹಂಚುವುದಾಗಿ ಈಗಿನ ಹಾಗೂ ಹಿಂದಿನ ಎಲ್ಲಾ ಶಾಸಕರು ಹೇಳುತ್ತಲೆ ಬರುತ್ತಿದ್ದು, ಮೀಸಲಿರಿಸಿದ ಕಲ್ಲುಕೋಟೆ ಸ.ನಂ. ಜಮೀನು ಇನ್ನೂ ಕೂಡ ರಾಜೀವ್‍ಗಾಂಧಿ ನಿಗಮಕ್ಕೆ ತಾಂತ್ರಿಕ ಅನುಮೋದನೆಯನ್ನೇ ಪಡೆದಿಲ್ಲ. ಎಮ್ಮೇರಹಳ್ಳಿಯ ಬಳಿ ಗುರ್ತಿಸಲಾದ ಜಮೀನು ಸೇಂದಿವನವೆಂದು ಪಹಣಿಯಲ್ಲಿ ನಮೂದಾಗಿದ್ದು, ರಾಜಕಾರಣಿಗಳು ಫಲಾನುಭವಿಗಳನ್ನು ವಂಚಿಸುತ್ತಿದ್ದಾರೆ ಎಂದು ರಂಗನಾಥ್ ವಾಸ್ತವಾಂಶ ತೆರೆದಿಟ್ಟರು.

ನಮ್ಮ ಸಮಿತಿಯು ಈಗ ಕೇವಲ ಒಂದು ದಿನ ಪ್ರತಿಭಟನೆ ಮಾಡಿದೆ. ಆದರೆ ಅರ್ಹರಿಗೆ ನ್ಯಾಯ ಸಿಗುವವರೆಗೂ ನಮ್ಮ ಪ್ರತಿಭಟನೆ ನಿಲ್ಲುವುದಿಲ್ಲ. ಕೆಲವೆ ದಿನಗಳಲ್ಲಿ ಶಿರಾದಿಂದ ಜಿಲ್ಲಾಧಿಕಾರಿಗಳ ಕಛೇರಿಯವರೆಗೂ ಕಾಲ್ನಡಿಗೆ ಜಾಥಾ ಕೈಗೊಳ್ಳಲಾಗುವುದು ಎಂದು ಟೈರ್ ರಂಗನಾಥ್ ಹೇಳಿದರು.

      ಬೆಲ್ಲದಮಡು ಕೃಷ್ಣಪ್ಪ, ಕಾರ್ಯಾಧ್ಯಕ್ಷ ತಿಪ್ಪೇಸ್ವಾಮಿ, ಲೋಕೇಶ್ ದ್ವಾರನಕುಂಟೆ, ನರಸಮ್ಮ, ಶಾಂತಕುಮಾರ್, ರಾಜು ಕೆ, ರೂಪೇಶ್‍ಎಸ್.ಎನ್.ಕೃಷ್ಣಯ್ಯ, ಭೂತರಾಜು ಕರಿರಾಮನಹಳ್ಳಿ, ಗೋಪಾಲ್ ಹುಂಜಿನಾಳು, ಮಂಜುನಾಥ್ ಜ್ಯೋತಿನಗರ, ರಂಗನಾಥ್ ಚೆನ್ನನಕುಂಟೆ, ರಂಗನಾಥ್ ಯರಗುಂಟೆ, ಮಂಜುನಾಥ್ ಚಿನ್ನಪ್ಪನಹಳ್ಳಿ, ದಿನೇಶ್, ಚಾಂದ್‍ಪಾಷ, ಕೋದಂಡರಾಮ, ತಿಪ್ಪೇಶ್, ಕಾರ್ತಿಕ್, ಯಲ್ಲಪ್ಪ, ಯಾಷ್ಮಿನ್‍ಬಾನ್, ಶಕೀಲಾಬಾನು, ಸಲ್ಮಾಬಾನು, ಭಾಗ್ಯಮ್ಮ, ರಶ್ಮಿ, ಜಯರಾಜ್, ಕಾಂತರಾಜ್ ಕೋಡಿಹಳ್ಳಿ, ಅಫೀಜುಲ್ಲಾಖಾನ್, ಕಾರೇಹಳ್ಳಿರಂಗನಾಥ್ ಮುಂತಾದವರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link