ಬೆಂಗಳೂರು
ಸುಳ್ವಾಡಿಯ ಕಿಚ್ಚುಗತ್ತಿ ಮಾರಮ್ಮ ದೇವಾಲಯ ಪ್ರಸಾದ ದುರಂತದಂತೆ ಚಿಂತಾಮಣಿ ಗಂಗಮ್ಮ ಗುಡಿ ಪ್ರಸಾದ ದುರಂತಕ್ಕೂ ಅನೈತಿಕ ಸಂಬಂಧವೇ ಕಾರಣವಾಗಿದೆ.
ಲಕ್ಷ್ಮಿ ಎಂಬಾಕೆ ತನ್ನ ಅನೈತಿಕ ಸಂಬಂಧ ಬಯಲಾಗಬಾರದು ಎಂಬ ಕಾರಣಕ್ಕೆ ಪ್ರಸಾದದಲ್ಲಿ ವಿಷ ಹಾಕಿರುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.ಸುಳ್ವಾಡಿಯ ವಿಷ ಪ್ರಸಾದ ದುರಂತದಿಂದ ಸ್ಫೂರ್ತಿ ಪಡೆದ ಲಕ್ಷ್ಮಿ ಪ್ರಸಾದ ಸಂದರ್ಭದಲ್ಲಿ ಪ್ರಸಾದಕ್ಕೆ ವಿಷ ಹಾಕಿದ್ದರು ಎಂಬುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.
ಚಿಂತಾಮಣಿಯ ಗಂಗಮ್ಮ ಗುಡಿ ಎದುರು ಮನೆಯಲ್ಲಿ ವಾಸವಾಗಿರುವ ಲಕ್ಷ್ಮಿ ಹಾಗೂ ದೇವಾಲಯದ ಪಕ್ಕದ ಮನೆಯಲ್ಲೇ ಇರುವ ಲೋಕೇಶ್ ಎಂಬಾತನೊಂದಿಗೆ ಅಕ್ರಮ ಸಂಬಂಧವಿದ್ದು ಲೋಕೇಶ್ ಎರಡೂವರೇ ವರ್ಷದ ಹಿಂದೆ ಗೌರಿ ಎಂಬ ಮಹಿಳೆಯನ್ನು ಮದುವೆಯಾಗಿದ್ದ.
ಮದುವೆ ನಂತರ ಲೋಕೇಶ್ ಮತ್ತು ಲಕ್ಷ್ಮಿಯ ನಡುವಿನ ಅನೈತಿಕ ಸಂಬಂಧ ಗೌರಿಗೆ ಗೊತ್ತಾಗಿ ದೊಡ್ಡ ಜಗಳವೇ ನಡೆದಿತ್ತು .ಇದರಿಂದ ಬೇಸತ್ತ ಲೋಕೇಶ್ ಮೂರೂವರೆ ತಿಂಗಳ ಹಿಂದೆ ಮನೆ ಬಿಟ್ಟು ನಾಪತ್ತೆಯಾಗಿದ್ದ. ಇದು ಲಕ್ಷ್ಮಿಗೆ ಸಿಟ್ಟು ತರಿಸಿತ್ತು. ತನ್ನ ಪ್ರಿಯಕರ ಊರು ಬಿಟ್ಟಿದ್ದು, ಆತನ ಪತ್ನಿ ಗೌರಿಯಿಂದಲೇ ಎಂದು ಆಕ್ರೋಶಗೊಂಡಿದ್ದ ಲಕ್ಷ್ಮಿ, ಲೋಕೇಶ್ ಪತ್ನಿ ಗೌರಿಯನ್ನು ಮುಗಿಸಿಬಿಟ್ಟರೆ ತನ್ನ ಹಾದಿ ಸುಗಮವಾಗುತ್ತದೆ ಎಂದು ಪ್ರಸಾದದಲ್ಲಿ ವಿಷ ಹಾಕಿ ಗೌರಿಗೆ ನೀಡಿದ್ದಳು.
ಈ ವಿಷ ದುರಂತದಲ್ಲಿ ಸಾವನ್ನಪ್ಪಿದ ಗೌರಿ ಮೇಲೆ ಹತ್ಯೆ ಪ್ರಯತ್ನ ನಡೆಯುತ್ತಿರುವುದು 2ನೇ ಬಾರಿ ಎಂಬ ಮಾಹಿತಿಗಳು ಪೊಲೀಸರಿಗೆ ಲಭ್ಯವಾಗಿವೆ. ಈ ಎಲ್ಲ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು,
ಲಕ್ಷ್ಮಿ ಪತಿ ಮಂಜುನಾಥ್, ಲೋಕೇಶ್ ಸಂಬಂಧಿ ಚೊಕ್ಕಹಳ್ಳಿ ರವಿಯನ್ನ ವಶಕ್ಕೆ ಪಡೆದಿದ್ದು,ನಾಪತ್ತೆಯಾಗಿರುವ ಲೋಕೇಶ್ಗಾಗಿ ಶೋಧ ನಡೆಸಿದ್ದಾರೆ. ಈ ನಡುವೆ ಗೌರಿ ತಂದೆ ಶಿವಪ್ಪ, ಪ್ರಸಾದದಲ್ಲಿ ವಿಷ ಬೆರೆಸಿ ಇಬ್ಬರ ಸಾವಿಗೆ ಕಾರಣಳಾದ ಲಕ್ಷ್ಮಿಗೆ ತಕ್ಕ ಶಾಸ್ತಿ ಆಗಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








