ದಾವಣಗೆರೆ:
ಗೃಹ ಉಪಯೋಗಿ ವಸ್ತುಗಳನ್ನು ಖರೀದಿಸಲು, ಬಜಾಜ್ ಫೈನಾನ್ಸ್ನಲ್ಲಿ ಸಾಲ ಪಡೆದಿದ್ದ ಗ್ರಾಹಕರ ಹೆಸರಿನಲ್ಲಿಯೇ ಮತ್ತೊಮ್ಮೆ ಫೇಕ್ ಲೋನ್ ಮಾಡಿಸಿ ಅಮಾಯಕರನ್ನು ಫೈನಾನ್ಸ್ನ ಸಿಬ್ಬಂದಿಗಳು ವಂಚಿಸಿದ್ದಾರೆಂದು ವಕೀಲ ಬಿ.ಎಂ.ಸಿದ್ದಲಿಂಗಸ್ವಾಮಿ ಆರೋಪಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಜಾಜ್ ಫೈನಾನ್ಸ್ನ ಹರಿಹರ ಶಾಖೆಯ ಸಿಬ್ಬಂದಿಗಳು ಗ್ರಾಹಕರಿಗೆ ಶೂನ್ಯ ಬಡ್ಡಿದರದಲ್ಲಿ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಸಾಲ ಸೌಲಭ್ಯ ನೀಡುವುದಾಗಿ ಪುಸಲಾಯಿಸಿ, ಒಮ್ಮೆ ಸಾಲ ಪಡೆದ ಗ್ರಾಹಕರ ಹೆಸರಿನಲ್ಲಿಯೇ ಮತ್ತೆ ಕೆಲವು ವಸ್ತುಗಳನ್ನು ಖರೀದಿಸಿ, ನೂರಾರು ಜನರನ್ನು ವಂಚಿಸಿದ್ದು, ಈಗ ಫೈನಾನ್ಸ್ನ ರಿಕವರಿ ವಿಭಾಗದವರು ಸಾಲ ಪಡೆಯದೇ ಇರುವ ಗ್ರಾಹಕರಿಗೆ ಸಾಲ ಮರು ಪಾವತಿಸುವಂತೆ ನೋಟೀಸ್ ನೀಡುತ್ತಿರುವುದಲ್ಲದೇ, ಅವಾಚ್ಯವಾಗಿ ನಿಂದಿಸುವ ಮೂಲಕ ಅಮಾಯಕರಿಗೆ ಕಿರುಕುಳ ನೀಡುತ್ತಿದ್ದಾರೆಂದು ದೂರಿದರು.
2016ರಿಂದ 2018ರ ಅವಧಿಯಲ್ಲಿ ಬಜಾಜ್ ಫೈನಾನ್ಸ್ನ ಹರಿಹರ ಶಾಖೆಯಲ್ಲಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿ ಸುತ್ತಿದ್ದ ಕುಮಾರಸ್ವಾಮಿ ಹಾಗೂ ರಿಕವರಿ ಹೆಡ್ ಆಗಿದ್ದ ಮಂಜು ಭಾರ್ಗವ ಈ ಹಣಕಾಸು ಸಂಸ್ಥೆಯಿಂದ ಸಾಲ ಪಡೆಯಲು ಬರುವ ಗ್ರಾಹಕರಿಂದ ಎರಡೆರಡು ಇಸಿಎಸ್ಗೆ ಸಹಿ ಮಾಡಿಸಿಕೊಳ್ಳುವುದರ ಜೊತೆಗೆ ಎರಡು ಸೆಟ್ ದಾಖಲಾತಿಗಳನ್ನು ಪಡೆದು ಒಮ್ಮೆ ಸಾಲ ಪಡೆದಿದ್ದ ಗ್ರಾಹಕರ ಹೆಸರಿನಲ್ಲಿ ಮತ್ತೊಂದು ಬಾರಿ ದಾಖಲೆಗಳನ್ನು ಸಲ್ಲಿಸಿ ಫೇಕ್ ಲೋನ್ ಪಡೆದು ನೂರಾರು ಜನರನ್ನು ವಂಚಿಸಿದ್ದಾರೆ. ಅಲ್ಲದೇ, ಸಾಲ ಪಡೆಯಲು ಹೋಗಿ, ವಾಪಾಸ್ ಅದವರ ಹೆಸರಿನಲ್ಲೂ ಲೋನ್ ಮಾಡಿಸಿಕೊಂಡಿದ್ದಾರೆ ಹಾಗೂ ಸಾಲ ಕೇಳಲು ಹೋಗದವರ ದಾಖಲಾತಿಗಳನ್ನು ಬ್ಯಾಂಕ್ಗಳಿಂದ ಪಡೆದು, ಅವರಿಗೆ ಗೊತ್ತಾಗದಂತೆಯೇ ಲೋನ್ ಪಡೆದಿದ್ದಾರೆ ಎಂದು ಆಪಾದಿಸಿದರು.
ಹರಿಹರದ ನಿವಾಸಿ ಮೀನಾಕ್ಷಿ ಎಂಬುವರು 2017ರಲ್ಲಿ ಹರಿಹರದ ಆಸ್ರಾ ಟಿವಿ ಏಜೇನ್ಸಿ ಅವರಿಂದ ಬಜಾಜ್ ಫೈನಾನ್ಸ್ ಮೂಲಕ ಸಾಲ ಪಡೆದು ಯುಪಿಎಸ್ ಖರೀದಿಸಿದ್ದೆ. ಇದಕ್ಕಾಗಿ ನನ್ನ ಕೆನರಾ ಬ್ಯಾಂಕ್ ಖಾತೆಯಿಂದ ಹಣ ಕಟಾವಣೆ ಆಗುತ್ತಿತ್ತು. ಈ ಮಧ್ಯಯೇ ತಮಗೆ ಸಂಬಂಧ ಇಲ್ಲದ ಮತ್ತೊಂದು ಸಾಲಕ್ಕೂ ಹಣ ಕಡಿತವಾಗುತಿತ್ತು. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಮತ್ತು ಫೈನಾನ್ಸ್ ಅವರನ್ನು ವಿಚಾರಿಸಿದಾಗ ಇವರ ಹೆಸರಿನಲ್ಲಿ 73 ಸಾವಿರ ರೂ. ಮೌಲ್ಯದ ಫರ್ನಿಚರ್ಗೆ ಫೇಕ್ ಲೋನ್ ಮಾಡಿಸಿ ತಮ್ಮನ್ನು ವಂಚಿಸಿರುವುದು ಬೆಳಕಿಗೆ ಬಂದ ಹಿನ್ನೆಯಲ್ಲಿ, ಇವರು ಯಾವುದೇ ಫರ್ನಿಚರ್ಗಳನ್ನು ಖರೀದಿಸಿರಲಿಲ್ಲ. ಆದ್ದರಿಂದ ಅವರ ಕೆನರಾ ಬ್ಯಾಂಕ್ನ ಖಾತೆಯನ್ನೇ ರದ್ದು ಮಾಡಿಸಿದ ಪರಿಣಾಮ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ ಮತ್ತು ಜೀವನ ಜ್ಯೋತಿ ಯೋಜನೆಗಳು ಸಹ ನಿಷ್ಕ್ರಿಯಗೊಂಡಿದೆ. ಅಲ್ಲದೇ, ಅಡುಗೆ ಅನಿಲದ ಸಬ್ಸಿಡಿ ಸಹ ಸಿಗದಂತಾಗಿದೆ ಎಂದು ಮಾಹಿತಿ ನೀಡಿದರು.
ವಂಚನೆಗೆ ಒಳಗಾಗಿರುವ ನಟರಾಜ್ ಮಾತನಾಡಿ, ನಾನು ಹರಿಹರದಲ್ಲಿ ಟಿವಿ ಖರೀದಿಸಲು ಮುಂದಾಗಿದ್ದಾಗ ಬಜಾಜ್ ಫೈನಾನ್ಸ್ನಿಂದ ಸಾಲ ಪಡೆಯಲು ದಾಖಲೆಗಳನ್ನು ಸಲ್ಲಿಸಿದ್ದೆ. ಆದರೆ, ಅದೇ ಮಾಡಲ್ನ ಟಿವಿ ದಾವಣಗೆರೆಯಲ್ಲಿ ಕಡಿಮೆ ದರಕ್ಕೆ ಸಿಕ್ಕ ಕಾರಣ ತಾವು ಇಲ್ಲಿ ಟಿವಿ ಖರೀದಿಸಿದೆ, ಎಲ್ಲ ಸಾಲ ತೀರಿಸಿದ್ದೆ. ಆದರೆ, 2017ರ ಡಿಸೆಂಬರ್ನಲ್ಲಿ ತಮಗೆ 17,751 ರೂ. ಸಾಲದ ಬಾಬ್ತು ನೋಟೀಸ್ ಬಂದಾಗ ವಿಳಾಸ ಅಸ್ಪಷ್ಟವಾಗಿದ್ದರಿಂದ ಅಷ್ಟು ತಲೆ ಕೆಡಿಸಿಕೊಂಡಿರಲಿಲ್ಲ.
ಆದರೆ, 2018ರ ನವೆಂಬರ್ 9ರಂದು ನನ್ನ ಎಸ್ಬಿಐ ಖಾತೆಯಿಂದ 5417 ರೂ. ಕಡಿತವಾದಾಗ, ಬ್ಯಾಂಕ್ಗೆ ಹೋಗಿ ವಿಚಾರಿಸಿದಾಗ ಬಜಾಜ್ ಫೈನಾನ್ಸ್ನಲ್ಲಿ 65 ಸಾವಿರ ರೂ. ಸಾಲ ಪಡೆದಿರುವ ಕಾರಣಕ್ಕೆ ಹಣ ಕಟಾವಣೆ ಆಗುತ್ತಿರುವುದು ಗಮನಕ್ಕೆ ಬಂತು. ಆಗಲೇ ನಾನು ಒಮ್ಮೆ ಸಾಲ ಪಡೆಯಲು ನೀಡಿದ್ದ ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡು ತಮ್ಮ ಹೆಸರಿನಲ್ಲಿ ನಕಲಿ ಲೋನ್ ಮಾಡಿಸಿರುವುದು ಬೆಳಕಿಗೆ ಬಂದಿದೆ ಎಂದು ಅಳಲು ತೋಡಿಕೊಂಡರು.
ಇನ್ನೂ ವಂಚನೆಗೆ ಒಳಗಾಗಿರುವ ಶಿಕ್ಷಕಿ ವಿಜಯಾ ಮಾತನಾಡಿ, ಬಜಾಜ್ ಫೈನಾನ್ಸ್ನಲ್ಲಿ ತಮ್ಮ ಮಗನಿಗೆ 32 ಸಾವಿರ ಮೌಲ್ಯದ ಲ್ಯಾಪ್ಟಾಪ್ ಕೊಡಿಸಿದ್ದರೆ. ಇದಕ್ಕಾಗಿ ತಾವು 12 ಕಂತುಗಳನ್ನು ಪಾವತಿಸಿ ಸಂಪೂರ್ಣ ಸಾಲ ತೀರಿಸಿದ ನಂತರವೂ ನನ್ನ ಖಾತೆಯಿಂದ ಹಣ ಕಟ್ ಆಗುತ್ತಿತ್ತು. ಈ ಬಗ್ಗೆ ಪರಿಶೀಲಿಸಿದಾಗ 65,510 ರೂ. ಮೊತ್ತದ ಫೇಕ್ ಲೋನ್ ಮಾಡಿಸಿರುವುದು ಗಮನಕ್ಕೆ ಬಂತು. ಆಗ ಬಜಾಜ್ ಫೈನಾನ್ಸ್ ಅಧಿಕಾರಿಗಳು ಇನ್ನೂ ಮುಂದೆ ಆ ಖಾತೆಯಲ್ಲಿ ಹಣ ಇರದಂತೆ ನೋಡಿಕೊಳ್ಳಿ ಎಂದ ಸಲಹೆ ಮೇರೆಗೆ ಈಗ ಬೇರೆ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಆದರೆ, ಸಾಲ ವಸೂಲಾತಿ ವಿಭಾಗದವರು ಮತ್ತೆ ಕರೆ ಮಾಡಿ ಹಣ ಪಾವತಿಸುವಂತೆ ಪೀಡಿಸಿ, ಒಟ್ಟು 30 ಸಾವಿರ ರೂ. ಹೆಚ್ಚುವರಿಯಾಗಿ ವಸೂಲಿ ಮಾಡಿಕೊಂಡಿದ್ದು, ಈಗ ಮತ್ತೆ 50 ಸಾವಿರ ರೂ. ಸಾಲ ಬಾಕಿ ಇದೆ ಬಂದು ಕಟ್ಟುವಂತೆ ಪೀಡಿಸುತ್ತಿದ್ದಾರೆ. ಅವಾಚ್ಯವಾಗಿ ನಿಂದಿಸುತ್ತಿದ್ದಾರೆಂದು ಆರೋಪಿಸಿದರು.
ವಕೀಲ ಇನಾಯತ್ ಉಲ್ಲಾ ಮಾತನಾಡಿ, ಹೀಗೆ ಬಜಾಜ್ ಫೈನಾನ್ಸ್ನವರು ನೂರಾರು ಜನರ ಹೆಸರಿನಲ್ಲಿ ಫೇಕ್ ಲೋನ್ ಮಾಡಿಸಿರುವುದನ್ನು ಬಜಾಜ್ ಫೈನಾನ್ಸ್ನ ವ್ಯವಸ್ಥಾಪಕ ನಿರ್ದೇಶಕ ಸಂಜೀವ್ ಬಜಾಜ್ ಅವರ ಗಮನಕ್ಕೂ ತಂದರೂ, ತಪ್ಪಿತಸ್ಥ ಸಿಬ್ಬಂದಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಈ ಹಿನ್ನೆಲೆಯಲ್ಲಿ ದೂರು ನೀಡಲು ಹೋದಾಗ ಸ್ಥಳೀಯ ಪೊಲೀಸರು ದೂರು ದಾಖಲಿಸಿಕೊಳ್ಳದ ಹಿನ್ನೆಲೆಯಲ್ಲಿ ನೇರವಾಗಿ ನ್ಯಾಯಾಲಯದಲ್ಲಿಯೇ ದೂರು ದಾಖಲಿಸಲಾಗಿದೆ. ನ್ಯಾಯಾಲಯವು ತನಿಖೆ ಮಾಡುವಂತೆ ಪೊಲೀಸರಿಗೆ ಆದೇಶ ನೀಡಿ, ಎರಡು ವರ್ಷಗಳಾದರೂ ಪೊಲೀಸರು ತನಿಖೆ ಆರಂಭಿಸಿಲ್ಲ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ವಕೀಲೆ ಜಿ.ಎಚ್.ಭಾಗೀರಥಿ, ವಂಚನೆಗೊಳಗಾದ ಮೀನಾಕ್ಷಮ್ಮ, ವಿಜಯಾ ಅವರ ಪುತ್ರ ಶ್ರೀಕಾಂತ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
