ಮಧುಗಿರಿ :
ಪಟ್ಟಣದ ಗುರುಭವನದಲ್ಲಿ ನಿರ್ಮಿಸಿರುವ ಅಂಗಡಿ ಮಳಿಗೆಗಳಿಂದ ಬಂದಿರುವ ಮುಂಗಡ ಹಣ ಹಾಗೂ ಬಾಡಿಗೆಯ ಹಣದಲ್ಲಿ ಅವ್ಯಹಹಾರ ನಡೆದಿದೆ ಎಂದು ಕೆಲವರು ಕರಪತ್ರ ಹಂಚಿ ಶಿಕ್ಷಕರಲ್ಲಿ ಗೊಂದಲ ಸೃಷ್ಠಿಮಾಡುತ್ತಿರುವುದ್ದು, ನನ್ನ ಗಮನಕ್ಕೆ ಬಂದಿದ್ದು ಅಂತಹವರ ಮೇಲೆ ಶಿಸ್ತುಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಗುರುಭವನ ಸಮಿತಿ ಅಧ್ಯಕ್ಷ ಹಾಗೂ ಬಿಇಓ ನರಸಿಂಹಯ್ಯ ತಿಳಿಸಿದ್ದಾರೆ.
ಪಟ್ಟಣದ ಗುರುಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಗುರುಭವನ ಕಮಿಟಿಯ ವತಿಯಿಂದ ನಿರ್ಮಿಸಿರುವ ಅಂಗಡಿ ಮಳಿಗೆಗಳು ಹಂತ ಹಂತವಾಗಿ ಆರಂಭವಾಗುತ್ತಿದ್ದು, ಇನ್ನೂ ಕೆಲವು ಅಂಗಡಿಗಳು ಖಾಲಿಯಿವೆ. ಸಂಬಂದಪಟ್ಟ ಖಾತೆಗೆ ಹಣ ಜಮಾ ಮಾಡುತ್ತಿದ್ದು, ಯಾವುದೇ ಭ್ರಷ್ಟಾಚಾರ ನಡೆದಿಲ್ಲ. ಬ್ಯಾಂಕ್ ಖಾತೆಯ ಮೂಲಕ ಹಣಕಾಸಿನ ವ್ಯವಹಾರ ನಡೆಯುತ್ತಿದ್ದು, ವ್ಯವಹಾರ ಪಾರದರ್ಶಕವಾಗಿದೆ ಶಿಕ್ಷಕರು ಪ್ರತಿಭಟನೆಯ ಹಾದಿ ತುಳಿಯುವ ಬೆದರಿಕೆ ಹಾಕಿದ್ದು ಪ್ರತಿಭಟನೆ ನಡೆಸಲು ಇಲಾಖೆ ವತಿಯಿಂದ ಯಾವುದೇ ಅನುಮತಿ ಪಡೆದಿಲ್ಲ. ಶಿಕ್ಷಕರು ಪ್ರತಿಭಟನೆ ನಡೆಸಲು ಅವಕಾಶವಿಲ್ಲ ಎಂದರು.
ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ವೆಂಕಟರಂಗಾರೆಡ್ಡಿ ಮಾತನಾಡಿ ತಾಲೂಕಿನ ಶಿಕ್ಷಕರ ವಲಯದಲ್ಲಿ ಶಾಂತಿ ನೆಮ್ಮದಿಯಿಂದ ಬದುಕುತ್ತಿರುವ ವಾತಾವರಣವಿದ್ದು, ಗುರುಭವನ ಕಮಿಟಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಅನಾಮದೇಯ ವ್ಯಕ್ತಿಗಳ ಹೆಸರಿನಲ್ಲಿ ಕೆಲವರು ಕರಪತ್ರಗಳನ್ನು ಮುದ್ರಿಸಿ ಶಾಲೆಗಳಿಗೆ ತೆರಳಿ ಕರಪತ್ರಗಳನ್ನು ವಿತರಿಸುತ್ತಿದ್ದಾರೆ. ಅಧಿಕಾರದ ಆಸೆಯಿಂದ ಕೆಲವರು ಶಿಕ್ಷಕರನ್ನು ದಾರಿ ತಪ್ಪಿಸಲು, ಶಾಂತಿ ಕದಡಲು ಯತ್ನಿಸುತ್ತಿದ್ದಾರೆ. ಕಳೆದ 4 ವರ್ಷದಲ್ಲಿ ಶಿಕ್ಷಕರ ಕಷ್ಟಗಳಿಗೆ ಸ್ಪಂದಿಸಿದ್ದೇವೆ ಹೊರತು ಯಾವುದೇ ಶಿಕ್ಷಕರಿಗೂ ತೊಂದರೆ ಮಾಡಿಲ್ಲ. ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ಇದ್ದ ವಾತಾವರಣನ್ನು ತಾಲೂಕಿನ ಶಿಕ್ಷಕರು ಗಮನಿಸಿದ್ದು, ಡಿ. 1 ರಂದು ಹಮ್ಮಿಕೊಂಡಿರುವ ಪ್ರತಿಭಟನೆಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬೆಂಬಲವಿಲ್ಲ ಆದ್ದರಿಂದ ಯಾವುದೇ ಶಿಕ್ಷಕರು ಪ್ರತಿಭಟನೆಯಲ್ಲಿ ಭಾಗವಹಿಸಬಾರದು ಎಂದು ಮನವಿ ಮಾಡಿದರು.
ಗುರುಭವನ ಅಂಗಡಿ ಮಳಿಗೆ ನಿರ್ಮಿಸಲು 1.15 ಕೋಟಿ ಎಸ್ಟಿಮೇಟ್ ತಯಾರಿಸಿದ್ದು, 72 ಲಕ್ಷ ವೆಚ್ಚದಲ್ಲಿ 31 ಅಂಗಡಿ ಮಳಿಗೆ ನಿರ್ಮಿಸಲಾಗಿದೆ. ನಮಗೆ 59 ಲಕ್ಷ ಮಾತ್ರ ವಸೂಲಾಗಿದ್ದು, ಯಾವುದೇ ಬ್ಯಾಂಕಿನಲ್ಲಿ ಸಾಲ ಸೌಲಭ್ಯ ಲಭ್ಯವಾಗದ ಕಾರಣ ಕಮಿಟಿಯ ಸದಸ್ಯರು ಮತ್ತು ಪ್ರಾಥಮಿಕ ಶಾಲ ಶಿಕ್ಷಕರ ಸಂಘದ ನಿರ್ದೇಶಕರು ಉಳಿದ ಹಣವನ್ನು ಹಾಕಿ ಕಟ್ಟಿಸಲಾಗಿದೆ. 2015 ರವರೆಗೂ ಹಿಂದಿನ ಅಧ್ಯಕ್ಷರಾಗಿದ್ದವರು ಯಾವುದೇ ಲೆಕ್ಕ ನೀಡಿಲ್ಲ. ಆದರೆ ಇಂದು ಅವರೇ ಲೆಕ್ಕ ಕೇಳುತ್ತಿದ್ದಾರೆ. ಗರುಭವನದಲ್ಲಿ ಇನ್ನು ಬಹಳಷ್ಟು ಸ್ಥಳವಿದ್ದು, ಈ ಸ್ಥಳದಲ್ಲಿ ಉಳಿದ ಅಂಗಡಿ ಮಳಿಗೆಗಳನ್ನು ಕಟ್ಟಿ ತೋರಿಸಲಿ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಸಂಜಯ್ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸು, ಜಿಲ್ಲಾ ಸಹ ಕಾರ್ಯದರ್ಶಿ ಚೌಡಪ್ಪ, ತೋಟದಪ್ಪ, ಮೀನಾಕ್ಷಮ್ಮ ಮತ್ತು ಕಮಿಟಿಯ ಪದಾಧಿಕಾರಿಗಳು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
