ಹುಳಿಯಾರು:
ಎರಡನೇ ಅವಧಿಗೆ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಮಾರಂಭವನ್ನು ಹುಳಿಯಾರಿನ ಬಿಜೆಪಿ ಕಾರ್ಯಕರ್ತರು ದೊಡ್ಡ ಪರದೆಯಲ್ಲಿ ವೀಕ್ಷಿಸಿ ಸಂಭ್ರಮಿಸಿದರು.
ಹುಳಿಯಾರಿನ ಶ್ರೀದೇವಿ ಭವನ್ ಹೋಟೆಲ್ ಮುಂಭಾಗದಲ್ಲಿ ದೊಡ್ಡ ಪರದೆಯಲ್ಲಿ ಸಂಜೆ 7 ಗಂಟೆಗೆ ಗೋಧೂಳಿ ಲಗ್ನದಲ್ಲಿ ಮೋದಿ ಪ್ರಮಾಣ ವಚನ ಸ್ವೀಕರಿಸಿದ ದೃಶ್ಯ ಪ್ರಸಾರವಾಗುತ್ತಿದ್ದಂತೆ ಕಾರ್ಯಕರ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಕರ್ನಾಟಕದ ಸಂಸದರಾದ ಸದಾನಂದಗೌಡ, ಪ್ರಹ್ಲಾದ ಜೋಷಿ, ಸುರೇಶ್ ಅಂಗಡಿ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಚಪ್ಪಾಳೆ ತಟ್ಟಿ ಸಂತಸ ಪಟ್ಟರು.
ನರೇಂದ್ರ ಮೋದಿ ಹಾಗೂ ಅಮಿತ್ ಷಾ ಹಾಗೂ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಪರವಾಗಿ ಜಯಘೋಷಗಳು ಮೊಳಗಿದವು. ಬಳಿಕ ಕಾರ್ಯಕರ್ತರು ಪಟಾಕಿ ಸಿಡಿಸಿ, ಲಘು ಉಪಹಾರ ಹಾಗೂ ಎಲ್ಲರಿಗೂ ಸಿಹಿ ವಿತರಿಸಲಾಯಿತು. ನಾಗರಿಕರು ಸಹ ಸಂಭ್ರಮದ ಕ್ಷಣದಲ್ಲಿ ಭಾಗಿಯಾದರು.
ಈ ಸಂದರ್ಭದಲ್ಲಿ ಟೀಂ ಮೋದಿ ಗ್ರೂಪ್ನ ಗುತ್ತಿಗೆದಾರ ಗಂಗಾಧರ್, ಎಪಿಎಂಸಿ ವರ್ತಕ ಎಲ್.ಆರ್.ಬಾಲಾಜಿ, ಉಪನ್ಯಾಸಕ ನರೇಂದ್ರಬಾಬು, ಸಿ.ವಿಶ್ವನಾಥ್, ಕಂಪ್ಯೂಟರ್ ಪ್ರಭು, ಬಾಲಾಜಿ ಸಿಂಗ್, ಮೋಹನ್ ಕುಮಾರ್ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/05/31HULIYAR2A.gif)