ಹುಳಿಯಾರು
ಹುಳಿಯಾರು ಹೋಬಳಿಯ ಕುರಿಹಟ್ಟಿ ಪ್ರದೇಶದಲ್ಲಿ ರಾಗಿಗೆ ಪೈರು ತಿನ್ನುವ ಹುಳುಗಳ ಕಾಟ ಆರಂಭವಾಗಿದ್ದು ಉತ್ತಮ ಇಳುವರಿ ಪಡೆಯುವ ನಿರೀಕ್ಷೆಯಲ್ಲಿದ್ದ ರೈತರನ್ನು ಆತಂಕಕ್ಕೀಡು ಮಾಡಿದೆ.ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಹೆಸರು ಕಾಳು ಬಿತ್ತಲಾಗದೆ ನಿರಾಸೆಗೊಳಗಾಗಿದ್ದ ರೈತನಿಗೆ ರಾಗಿ ಬಿತ್ತನೆಗೆ ಒಳ್ಳೆಯ ಮಳೆಯಾಗಿತ್ತು. ಪರಿಣಾಮ ಹುಳಿಯಾರು ಮತ್ತು ಹಂದನಕೆರೆ ಹೋಬಳಿಯ ಬಹುತೇಕ ರೈತರು ರಾಗಿ ಬಿತ್ತಿದ್ದರು. ನಂತರದ ದಿನಗಳಲ್ಲೂ ಆಗಾಗ ಮಳೆ ಬಿದ್ದ ಪರಿಣಾಮ ಈ ಬಾರಿ ರಾಗಿ ರೈತನ ಕೈ ಹಿಡಿಯುವ ಭರವಸೆ ಮೂಡಿಸಿತ್ತು.
ಪರಿಣಾಮ ರೈತ ಸಾಲಸೂಲ ಮಾಡಿ ಸರತಿ ಸಾಲಲಿ ನಿಂತು ಕಿತ್ತಾಡಿ ಗೊಬ್ಬರ ತಂದಾಕಿ ಉತ್ತಮ ಇಳುವರಿ ಎದುರು ನೋಡುತ್ತಿದ್ದ. ರಾಗಿಯೂ ಕೂಡ ಉತ್ತಮ ಫಸಲು ಬಂದೇ ಬರುವ ಲಕ್ಷಣದಂತೆ ಎತ್ತ ನೋಡಿದರೂ ಹುಲುಸಾಗಿ ಬೆಳೆದಿತ್ತು. ಈ ಬಾರಿ ನೂರಕ್ಕೆ ನೂರು ರಾಗಿ ರೈತನ ಕೈಹಿಡಿಯುತ್ತದೆ ಎನ್ನುವಷ್ಟರಲ್ಲಿ ಹುಳುಗಳ ಕಾಟ ಆರಂಭವಾಗಿ ರೈತನಿಗೆ ಗಾಯದ ಮೇಲೆ ಬರೆಹಾಕಿದಂತಾಗಿದೆ.
ಹುಳಿಯಾರು ಹೋಬಳಿಯ ಗಾಣಧಾಳು ಗ್ರಾಪಂ ವ್ಯಾಪ್ತಿಯ ಕುರಿಹಟ್ಟಿ ಭಾಗದ ರಾಗಿ ಬೆಳೆಗೆ ಹಸಿರು ಹುಳು ಕಾಟ ಹೆಚ್ಚಾಗಿ ಕಂಡು ಬಂದಿದೆ. ರಾಗಿ ಬೆಳೆಯಲ್ಲಿ ಕಾಣಿಸಿಕೊಂಡಿದ್ದ ಈ ಹುಳು ಕಾಂಡದಿಂದ ಗರಿಗಳನ್ನು ತಿನ್ನುತ್ತಾ ಬರುತ್ತಿದೆ. ಪರಿಣಾಮ ಗರಿಗಳು ತುಂಡಾಗಿ ಬಿದ್ದು, ರಾಗಿ ಪೈರಿನಲ್ಲಿ ಶಕ್ತಿ ಕುಂಠಿತವಾಗುತ್ತಿದೆ. ಹೀಗೆ ಹುಲ್ಲಿನ ಪ್ರಮಾಣ ಕಡಿಮೆಯಾಗಿ ತೆನೆ ನಿರೀಕ್ಷಿತ ಪ್ರಮಾಣದಲ್ಲಿ ಕಾಳು ಕಟ್ಟದೆ ಇಳುವರಿ ಕಡಿಮೆಯಾಗುವ ಸಾಧ್ಯತೆ ಇದೆ ಎನ್ನುವುದು ರೈತರ ಆತಂಕಕ್ಕೆ ಕಾರಣವಾಗಿದೆ.
ಇಷ್ಟಯಲ್ಲದೆ ಹೊಲದಿಂದ ಹೊಲಕ್ಕೆ ಇವುಗಳ ಹಾವಳಿ ಹೆಚ್ಚಾಗುತ್ತಿದೆ. ಈ ಭಾಗದಲ್ಲಿ ಬಿತ್ತಿರುವ ನೂರಾರು ಹೆಕ್ಟೆರ್ ಪ್ರದೇಶಕ್ಕೆ ಹರಡುವ ಆತಂಕ ಕೂಡ ರೈತರಲ್ಲಿದೆ. ಈ ಹುಳುಗಳು ರಾತ್ರಿ ಸಮಯದಲ್ಲಿ ಮಾತ್ರ ರಾಗಿ ಗರಿ ತಿನ್ನುತ್ತಿದ್ದು ಹಗಲಿನಲ್ಲಿ ಹುಳುಗಳೆ ಕಾಣದಂತ್ತಾಗುತ್ತದೆ. ಹಾಗಾಗಿ ಇವುಗಳ ಹತೋಟಿ ಕ್ರಮ ತಿಳಿಯದೆ ರೈತ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾನೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
