ಶಿರಾ
ಸಾಲಬಾಧೆ ತಾಳಲಾರದೆ ರೈತನೊಬ್ಬ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿರಾ ತಾಲ್ಲೂಕಿನ ಬರಗೂರು ರಂಗಾಪುರ ಗ್ರಾಮದಲ್ಲಿ ಬುಧವಾರ ನಡೆದಿದೆ. ಗೋಪಾಲಕೃಷ್ಣ (48) ಮೃತ ರೈತ.
4 ಎಕರೆ ಜಮೀನು ಹೊಂದಿದ್ದ ರೈತ ಗೋಪಾಲಕೃಷ್ಣ ದಾಳಿಂಬೆ ಮತ್ತು ರೇಷ್ಮೆ ಬೆಳೆ ಇಟ್ಟಿದ್ದ ಎನ್ನಲಾಗಿದ್ದು, 2 ಕೊಳವೆ ಬಾವಿಯಲ್ಲಿ ನೀರು ಬಾರದೆ ವಿಫಲವಾಗಿದ್ದವು. ಸಾಲಸೋಲ ಮಾಡಿ ಮತ್ತೆರಡು ಬೋರ್ ಕೊರೆಸಿದರೂ ನೀರು ಸಿಗದ ಕಾರಣ ಮಾಡಿದ್ದ ಸಾಲ ತೀರಿಸುವುದು ಹೇಗೆ ಎಂದು ಜಿಗುಪ್ಸೆಗೊಂಡು ತನ್ನದೆ ಜಮೀನನಲ್ಲಿರುವ ಮರಕ್ಕೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.
ಪಿಎಲ್ಡಿ ಬ್ಯಾಂಕ್ನಲ್ಲಿ 2.20 ಲಕ್ಷ ರೂ., ಬರಗೂರು ಕೆನರಾ ಬ್ಯಾಂಕ್ನಲ್ಲಿ 40ಸಾವಿರ ರೂ., ವಿಎಸ್ಎಸ್ಎನ್ 25 ಸಾವಿರ ರೂ., ಶ್ರೀಧರ್ಮಸ್ಥಳಗ್ರಾಮಾಭಿವೃದ್ಧಿ ಯೋಜನೆ 80 ಸಾವಿರ ರೂ. ಸೇರಿದಂತೆ ಕೈಸಾಲ ಸೇರಿ ಒಟ್ಟು 5 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದರು. ರೈತ ಗೋಪಾಲಕೃಷ್ಣ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೈತ ಕುಟುಂಬಕ್ಕೆ ಸಾಂತ್ವನ : ಸುದ್ದಿ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಶಾಸಕ ಬಿ.ಸತ್ಯನಾರಾಯಣ ರೈತ ಗೋಪಾಲಕೃಷ್ಣ ಕುಟುಂಬಸ್ಥರನ್ನು ಭೇಟಿ ಮಾಡಿ ಕಂಬನಿ ಮಿಡಿದರು. ಸರ್ಕಾರ ನೀಡುವಂತಹ 5 ಲಕ್ಷ ರೂ. ಪರಿಹಾರ ಕೊಡಿಸುವ ಭರವಸೆ ನೀಡಿದರು. ಸಾಲ ಮಾಡಿದ ಮಾತ್ರಕ್ಕೆ ಆತ್ಮಹತ್ಯೆಯಂತಹ ದುಸ್ಸಾಹಸಕ್ಕೆ ರೈತರು ಮುಂದಾಗಬಾರದು. ಆತ್ಮವಿಶ್ವಾಸದಿಂದ ಬದುಕಿ ಸಾಧಿಸ ಬೇಕೆಂದರು. ರೈತ ಸಂಘದ ಅಧ್ಯಕ್ಷ ಲಕ್ಷ್ಮಣಗೌಡ, ಪ್ರಧಾನ ಕಾರ್ಯದರ್ಶಿ ನಾದೂರು ಕೆಂಚಪ್ಪ, ಕೃಷಿಕ ಸಮಾಜದ ಮುಕುಂದಪ್ಪ, ಶ್ರೀನಿವಾಸ್ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2018/12/IMG-20181226-WA0031.jpg)