ತಿಪ್ಪೇರುದ್ರಸ್ವಾಮಿ ಜಾತ್ರೆ : ಭಕ್ತರಿಗೆ ನೀರು, ನೈರ್ಮಲ್ಯೀಕರಣ ವ್ಯವಸ್ಥೆಗೆ ಸೂಚನೆ

ಚಿತ್ರದುರ್ಗ

         ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ನಾಯಕನಹಟ್ಟಿಯ ಗುರು ತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವ ಮಾ. 22 ರಂದು ವಿಜೃಂಭಣೆಯಿಂದ ನೆರವೇರಲಿದೆ. ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆ ಇದ್ದು, ಕುಡಿಯುವ ನೀರು ಮತ್ತು ನೈರ್ಮಲೀಕರಣ ವ್ಯವಸ್ಥೆ ಸಮಪರ್ಕಕವಾಗಿರಲು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಶಾಸಕ ಬಿ. ಶ್ರೀರಾಮುಲು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

        ಗುರು ತಿಪ್ಪೇರುದ್ರಸ್ವಾಮಿ ಜಾತ್ರೆಗೆ ಸಿದ್ಧತೆಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ನಾಯಕನಹಟ್ಟಿಯ ದೇವಸ್ಥಾನದ ಒಳಮಠದ ಸಮುದಾಯ ಭವನದಲ್ಲಿ ಮಂಗಳವಾರ ಏರ್ಪಡಿಸಲಾದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

        ಪ್ರತಿ ವರ್ಷದಂತೆ ಈ ವರ್ಷವೂ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆಯನ್ನು ವಿಜೃಂಭಣೆಯಿಂದ ನಡೆಸಲು ಅಗತ್ಯ ಎಲ್ಲ ವ್ಯವಸ್ಥೆಗಳನ್ನು ಕೈಗೊಳ್ಳಬೇಕು. ಜಾತ್ರೆಗೆ ಅಕ್ಕ-ಪಕ್ಕದ ಜಿಲ್ಲೆಗಳಷ್ಟೇ ಅಲ್ಲದೆ, ನೆರೆಹೊರೆಯ ರಾಜ್ಯಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಜಾತ್ರೆಗೆ ಆಗಮಿಸುವ ನಿರೀಕ್ಷೆ ಇದೆ. ಸದ್ಯ ಬರ ಪರಿಸ್ಥಿತಿ ಇರುವುದರಿಂದ, ಕುಡಿಯುವ ನೀರಿನ ಮೂಲಗಳ ಕೊರತೆ ಕಾಡುವುದು ಸಹಜ.

          ಆದರೆ ಯಾವುದೇ ಕಾರಣಕ್ಕೂ ಭಕ್ತಾದಿಗಳಿಗೆ ಕುಡಿಯುವ ನೀರಿನ ತೊಂದರೆ ಎದುರಾಗಬಾರದು. ನೀರಿಗಾಗಿ ಖಾಸಗಿ ಬೋರ್‍ವೆಲ್‍ಗಳಿಂದ ನೀರಿನ ಪೂರೈಕೆ, ಹೊಸ ಬೋರ್‍ವೆಲ್‍ಗಳನ್ನು ಕೊರೆಯಿಸುವುದು. ಟ್ಯಾಂಕರ್‍ಗಳ ವ್ಯವಸ್ಥೆಗೆ ಈಗಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

           ಇದಕ್ಕೆ ಪ್ರತಿಕ್ರಿಯಿಸಿದ ನಾಯಕನಹಟ್ಟಿ ಪ.ಪಂ ಮುಖ್ಯಾಧಿಕಾರಿ, ಸದ್ಯ ಪ್ರಕೃತಿ ವಿಕೋಪ ಪರಿಹಾರದಡಿ 5 ಲಕ್ಷ ರೂ. ಅನುದಾನ ಬಂದಿದ್ದು, ಇದರಡಿ, ನೀರಿನ ಪೂರೈಕೆಗೆ ಟೆಂಡರ್ ಅನುಮೋದನೆಯಾಗಿದೆ. ಇನ್ನೂ 14 ಲಕ್ಷ ರೂ. ಅನುದಾನ ಬಿಡುಗಡೆಯಾಗಲಿದ್ದು, ವಿವಿಧ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ರೂಪಿಸಿ, ಅನುಮೋದನೆಗೆ ಸಲ್ಲಿಸಿದೆ. ಹೊಸ ಬೋರ್‍ವೆಲ್‍ಗಳಿಗೂ ನೀರಿನ ಬಿಂದು ಮಾಡಿಸಲಾಗಿದೆ.

          ಈಗಾಗಲೆ ವಾಣಿವಿಲಾಸ ಸಾಗರದಿಂದ ನಾಯಕನಹಟ್ಟಿಗೆ ನೀರು ಪೂರೈಸುವ ಕಾಮಗಾರಿ ಪೂರ್ಣಗೊಂಡಿದ್ದು, ಜಾತ್ರಾ ಸಂದರ್ಭದಲ್ಲಿ ಹೆಚ್ಚಿನ ನೀರು ಒದಗಿಸಿದಲ್ಲಿ, ಕುಡಿಯುವ ನೀರು ಹೊರತುಪಡಿಸಿ, ಇತರೆ ಕೆಲಸ ಕಾರ್ಯಗಳಿಗೆ ನೀರು ಬಳಸಿಕೊಳ್ಳಲಾಗುವುದು.

          ಅಲ್ಲದೆ ಇಲ್ಲಿನ ರೈತರು, ದಾನಿಗಳು ಸ್ವಯಂ ಪ್ರೇರಿತವಾಗಿ ಟ್ಯಾಂಕರ್‍ಗಳಿಗೆ ನೀರು ಪೂರೈಸಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಟ್ಯಾಂಕರ್‍ಗಳು ಬೇಕಾಗುತ್ತದೆ ಎಂದರು. ಅಪರ ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿ, ಜಿಲ್ಲೆಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಗಳಲ್ಲಿ ಲಭ್ಯವಿರುವ ನೀರಿನ ಟ್ಯಾಂಕರ್‍ಗಳೂ ಸೇರಿದಂತೆ ಒಟ್ಟು 60 ಟ್ಯಾಂಕರ್‍ಗಳನ್ನು ಜಾತ್ರಾ ಸಂದರ್ಭದಲ್ಲಿ ಒದಗಿಸಲಾಗುವುದು ಎಂದರು.

          ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ತಾ.ಪಂ. ಇಒ, ಚಳ್ಳಕೆರೆ ಪುರಸಭೆ ಮುಖ್ಯಾಧಿಕಾರಿಗಳನ್ನು ಒಳಗೊಂಡ ತಂಡಕ್ಕೆ ಜಾತ್ರಾ ಸಂದರ್ಭದಲ್ಲಿನ ಕುಡಿಯುವ ನೀರಿನ ಸಂಪೂರ್ಣ ಜವಾಬ್ದಾರಿಯನ್ನು ವಹಿಸಲಾಗಿದ್ದು, ಅಧಿಕಾರಿಗಳು ಸಭೆ ನಡೆಸಿ, 8 ದಿನಗಳ ಒಳಗಾಗಿ ಸಮಗ್ರ ವ್ಯವಸ್ಥೆಯ ಚಿತ್ರಣ ಒದಗಿಸಬೇಕು ಎಂದು ಶಾಸಕ ಬಿ. ಶ್ರೀರಾಮುಲು ಸೂಚನೆ ನೀಡಿದರು.

ಆರೋಗ್ಯ ಕಾಳಜಿಗೆ ಒತ್ತು

        ಜಾತ್ರಾ ಸಂದರ್ಭದಲ್ಲಿ ಹೆಚ್ಚುವರಿಯಾಗಿ ನಾಲ್ಕು ಆರೋಗ್ಯ ಚಿಕಿತ್ಸಾ ಘಟಕಗಳನ್ನು ಸ್ಥಾಪಿಸಿ, ತಜ್ಞ ವೈದ್ಯರು, ಶುಶ್ರೂಷಕರು ಸೇರಿದಂತೆ ಒಟ್ಟು 140 ಆರೋಗ್ಯ ಇಲಾಖೆ ಸಿಬ್ಬಂದಿಗಳನ್ನು ನಿಯೋಜಿಸಿ, ಅಗತ್ಯ ಜೀವರಕ್ಷಕ ಔಷಧಗಳ ಸಂಗ್ರಹಣೆ, ಆ್ಯಂಬುಲೆನ್ಸ್‍ಗಳ ವ್ಯವಸ್ಥೆ ಸೇರಿದಂತೆ ಎಲ್ಲ ಬಗೆಯ ಕಟ್ಟೆಚ್ಚರ ವಹಿಸಲಾಗುವುದು. ಯಾವುದೇ ಪರಿಸ್ಥಿತಿ ಎದುರಿಸಲು ಆರೋಗ್ಯ ಇಲಾಖೆ ಸನ್ನದ್ಧವಾಗಿರಲಿದೆ. ಜೊತೆಗೆ ಪಟ್ಟಣಕ್ಕೆ ಪೂರೈಕೆಯಾಗುವ ನೀರಿನ ಸಂಗ್ರಹಣಾ ತೊಟ್ಟಿಗಳನ್ನು ಸ್ವಚ್ಛಗೊಳಿಸಲು ಅಗತ್ಯ ಕ್ಲೋರಿನೇಷನ್, ಬ್ಲೀಚಿಂಗ್ ಮಾಡಿಸುವುದು, ಕ್ಲೋರಿನ್ ಮಾತ್ರೆಗಳ ಪೂರೈಕೆ ಮಾಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಬಿ.ವಿ. ನೀರಜ್ ಸಭೆಗೆ ವಿವರಿಸಿದರು.

        ಶಾಸಕ ಬಿ.ಶ್ರೀರಾಮುಲು ಮಾತನಾಡಿ, ಇತ್ತೀಚೆಗೆ ಪ್ರಸಾದ ಸೇವನೆಯಲ್ಲಿ ವ್ಯತ್ಯಯ ಉಂಟಾದ ಅಹಿತಕರ ಘಟನೆಗಳು ಜರುಗುತ್ತಿದ್ದು, ಇಲ್ಲಿ ಯಾವುದೇ ಕಾರಣಕ್ಕೂ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ದೇವಸ್ಥಾನದಿಂದ ಯಾವುದೇ ಪ್ರಸಾದದ ವಿತರಣೆ ಇಲ್ಲದಿದ್ದರೂ, ದಾನಿಗಳು, ಪ್ರಸಾದದ ವ್ಯವಸ್ಥೆ ಮಾಡಿಕೊಂಡಿರುತ್ತಾರೆ. ಇಂತಹ ಕಡೆಗಳಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ. ಯಾವುದೇ ಕಾರಣಕ್ಕೂ ಯಾವುದೇ ಬಗೆಯ ಸಾಂಕ್ರಾಮಿಕ ರೋಗ ಹರಡದಂತೆ ಅಗತ್ಯ ಎಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ರಸ್ತೆ ಸುಧಾರಣೆ ಹಾಗೂ ಹೆಚ್ಚುವರಿ ಬಸ್ :

         ನಾಯಕನಹಟ್ಟಿ ಪಟ್ಟಣಕ್ಕೆ ವಿವಿಧೆಡೆಗಳಿಂದ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳನ್ನು ಸುಧಾರಣೆ ಮಾಡಬೇಕು. ರಸ್ತೆ ದುರಸ್ತಿ ಇದ್ದಲ್ಲಿ, ಕೂಡಲೆ ಕೈಗೊಳ್ಳಬೇಕು. ರಸ್ತೆಯ ಇಕ್ಕೆಲಗಳಲ್ಲಿ ಜಂಗಲ್ ಕಟಿಂಗ್ ಮಾಡಿ, ರಸ್ತೆ ಸಂಚಾರ ಸುಗಮವಾಗಿರುವಂತೆ ನೋಡಿಕೊಳ್ಳಬೇಕು. ರಥೋತ್ಸವಕ್ಕೆ ಬಳಸುವ ರಥವು ಬಹಳಷ್ಟು ಹಳೆಯದಾಗಿದ್ದು, ಇದರ ಗುಣಮಟ್ಟ ಪರಿಶೀಲಿಸಿ, ರಥದ ಸಾಮಥ್ರ್ಯ ಪ್ರಮಾಣಪತ್ರವನ್ನು ಒದಗಿಸಬೇಕು. ಇದರ ಸಂಪೂರ್ಣ ಮೇಲ್ವಿಚಾರಣೆಯನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಡೆಸಬೇಕು ಎಂದು ಶ್ರೀರಾಮುಲು ಸೂಚಿಸಿದರು

         ಕೆಎಸ್‍ಆರ್‍ಟಿಸಿ ಸಾರಿಗೆ ಸಂಸ್ಥೆಯವರು, ಜಾತ್ರಾ ಅಂಗವಾಗಿ, ಚಿತ್ರದುರ್ಗ ಜಿಲ್ಲಾ ಕೇಂದ್ರವೂ ಸೇರಿದಂತೆ ವಿವಿಧೆಡೆಗಳಿಂದ ಮಾ. 21 ರಿಂದ 23 ರವರೆಗೆ ಮೂರು ದಿನಗಳ ಕಾಲ ಹೆಚ್ಚುವರಿಯಾಗಿ ವಿಶೇಷ ಬಸ್ ಸಂಚಾರ ವ್ಯವಸ್ಥೆ ಮಾಡಬೇಕು. ಯಾವುದೇ ಕಾರಣಕ್ಕೂ ಹೆಚ್ಚುವರಿ ಶುಲ್ಕವನ್ನು ವಸೂಲಿ ಮಾಡಬಾರದು ಎಂದು ಅಧಿಕಾರಿಗಳಿಗೆ ಶಾಸಕ ಶ್ರೀರಾಮುಲು ತಾಕಿತು ಮಾಡಿದರು.

ಸಂಚಾರ ನಿಯಂತ್ರಣ ಮತ್ತು ಬಂದೋಬಸ್ತ್

         ಜಾತ್ರಾ ಸಂದರ್ಭದಲ್ಲಿ ಪ್ರಾಣಿಬಲಿ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು. ಇದಕ್ಕಾಗಿ ನಾಯಕನಹಟ್ಟಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳಲ್ಲಿ ಚೆಕ್‍ಪೋಸ್ಟ್ ಸ್ಥಾಪಿಸಿ, ದಿನದ 24ಗಂಟೆಯೂ ಪೊಲೀಸ್ ನಿಗಾ ವಹಿಸಲಾಗುವುದು. ಸಂಚಾರ ದಟ್ಟಣೆ ನಿವಾರಿಸುವ ಸಲುವಾಗಿ ಅಗತ್ಯ ಬ್ಯಾರಿಕೇಡಿಂಗ್ ವ್ಯವಸ್ಥೆಗೊಳಿಸಲಾಗುವುದು. ಬಸ್‍ಗಳು, ಲಾರಿ, ಲಘು ವಾಹನ, ದ್ವಿಚಕ್ರವಾಹನಗಳು ಹೀಗೆ ಎಲ್ಲ ಬಗೆಯ ವಾಹನಗಳ ಪಾರ್ಕಿಂಗ್‍ಗೆ ಈಗಾಗಲೆ ಸ್ಥಳ ಗುರುತಿಸುವ ಕಾರ್ಯ ಕೈಗೊಂಡಿದ್ದು, ಪಾರ್ಕಿಂಗ್ ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮತ್ತು ವಿದ್ಯುತ್ ದೀಪದ ವ್ಯವಸ್ಥೆ ಕೈಗೊಳ್ಳಬೇಕಾಗುತ್ತದೆ ಎಂದು ಡಿವೈಎಸ್‍ಪಿ ರೋಷನ್ ಜಮೀರ್ ತಿಳಿಸಿದರು.

         ಜಿಲ್ಲಾ ರಕ್ಷಣಾಧಿಕಾರಿ ಡಾ. ಅರುಣ್ ಮಾತನಾಡಿ, ಜಾತ್ರಾ ಸಂದರ್ಭದಲ್ಲಿ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು, ಪ್ರಮುಖ ಸ್ಥಳಗಳಲ್ಲಿ ಸಿ.ಸಿ. ಟಿ.ವಿ. ಕ್ಯಾಮೆರಾ ಅಳವಡಿಸಲಾಗುವುದು. ಜಾತ್ರೆಗೆ ಆಗಮಿಸುವ ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುವುದು ಎಂದರು.

          ಸಭೆಯಲ್ಲಿ ವಿಧಾನಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎನ್. ರವೀಂದ್ರ, ಅಪರ ಜಿಲ್ಲಾಧಿಕಾರಿ ಸಂಗಪ್ಪ, ಉಪವಿಭಾಗಾಧಿಕಾರಿ ವಿಜಯಕುಮಾರ್, ತಹಸಿಲ್ದಾರ್ ಮಲ್ಲಿಕಾರ್ಜುನ, ಜಿ.ಪಂ. ಸದಸ್ಯೆ ಹೆಚ್.ಪಿ. ಶಶಿರೇಖಾ, ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷ ಜೆ.ಪಿ. ರವಿಶಂಕರ್, ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಎಸ್.ಪಿ.ಬಿ. ಮಹೇಶ್, ಹೆಚ್ಚುವರಿ ಪೊಲೀಸ್ ರಕ್ಷಣಾಧಿಕಾರಿ ಪ್ರಭಾಕರ ಬಾರ್ಕಿ, ದೇವಸ್ಥಾನದ ಸಮಿತಿಯ ಸದಸ್ಯರುಗಳಾದ ಹಂಸವೇಣಿ, ಲಲಿತಮ್ಮ, ಮುನಿಯಪ್ಪ, ಗೋವಿಂದರಾಜು, ಕೆ. ನಾಗಪ್ಪ, ರುದ್ರಮುನಿ, ಎಸ್.ವಿ. ತಿಪ್ಪೇಸ್ವಾಮಿ ರೆಡ್ಡಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link