ಹೊಸಪೇಟೆ :
ಪ್ರಧಾನಿ ನರೇಂದ್ರ ಮೋದಿಯವರು ನುಡಿದಂತೆ ನಡೆಯಲಿಲ್ಲ. ಜನಕ್ಕೆ ಕೊಟ್ಟ ವಾಗ್ದಾನಗಳು ಈಡೇರಲಿಲ್ಲ. ಬದಲಿಗೆ ದೇಶದ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿ ಅವರ ಬದುಕನ್ನು ನರಕವನ್ನಾಗಿಸಿದ್ದಾರೆ. ಹೀಗಾಗಿ ಅವರ ಆಡಳಿತ ವೈಫಲ್ಯಗಳೇ ಕಾಂಗ್ರೆಸ್ ಗೆಲುವಿಗೆ ಶ್ರೀರಕ್ಷೆಯಾಗಲಿವೆ ಎಂದು ಬಳ್ಳಾರಿ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ತಿಳಿಸಿದರು.
ನಗರದ ಸಣ್ಣಕ್ಕಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಳಿಕ ಮಾತನಾಡಿದ ಅವರು, ಮೋದಿಯವರ ದುರಾಡಳಿತದಿಂದ ದೇಶದ ಜನ ಬೇಸತ್ತಿದ್ದಾರೆ. ನೋಟ್ ಬ್ಯಾನ್, ಜಿಎಸ್ಟಿ, ನಿರುದ್ಯೋಗ ಸಮಸ್ಯೆ, ಸರ್ಕಾರಿ ಸ್ವಾಮ್ಯದ ಎಚ್ಎಎಲ್, ಬಿಎಸ್ಎನ್ಎಲ್ ಸಂಸ್ಥೆಗಳನ್ನು ಖಾಸಗಿಕರಣ, ಕಳೆದ 5 ವರ್ಷಗಳಲ್ಲಿ ಉದ್ಯೋಗಗಳನ್ನೇ ಸೃಷ್ಟಿಸದೇ, ಅನೇಕ ಸುಳ್ಳು ಭರವಸೆಗಳನ್ನು ನೀಡಿ ಜನರನ್ನು ವಂಚಿಸಿದ್ದಾರೆ. ಜನಸಾಮಾನ್ಯರಿಗೆ ಭದ್ರತೆ ಇಲ್ಲದಂತಾಗಿದೆ. ಜನಕ್ಕೆ ಇವರ ಸುಳ್ಳಿನ ಬಂಡವಾಳ ಗೊತ್ತಾಗಿದೆ. ಹೀಗಾಗಿ ಬಿಜೆಪಿಗೆ ಈ ಬಾರಿ ತಕ್ಕ ಪಾಠ ಕಲಿಸಲು ಜನ ತೀರ್ಮಾನಿಸಿದ್ದಾರೆ ಎಂದರು.
ಕಾಂಗ್ರೆಸ್ ಸರ್ಕಾರ ಮಾಡಿದ ಅಭಿವೃದ್ದಿ ಕಾರ್ಯಗಳು ಜನರನ್ನು ಕೈ ಹಿಡಿದಿವೆ. ದೇಶದ ಅಭಿವೃದ್ದಿಗೆ ಹಾಗು ಬಲಿಷ್ಠ ಭಾರತಕ್ಕಾಗಿ ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಹೇಳಿದರು.ಮುಖಂಡರಾದ ಕಲ್ಲುಕಂಬ ಪಂಪಾಪತಿ, ವೆಂಕಟೇಶ್ವರರೆಡ್ಡಿ, ಗುಜ್ಜಲ ನಾಗರಾಜ, ನಿಂಬಗಲ್ ರಾಮಕೃಷ್ಣ, ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
