ಬೆಂಗಳೂರು
ದೇಶದಲ್ಲಿನ ಅಸಂಖ್ಯಾತ ಕಾರ್ಮಿಕರ ಸ್ಥಿತಿ-ಗತಿ ಅರಿತು ಅವರ ಅಭಿವೃದ್ಧಿಗೆ ಪರಿಣಾಮಕಾರಿ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ ಎಂದು ಪ್ರದೇಶ ಕಾಂಗ್ರೆಸ್(ಕೆಪಿಸಿಸಿ) ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದರು
ನಗರದ ದೇವರಾಜ ಅರಸು ಭವನದಲ್ಲಿ ಕೆಪಿಸಿಸಿ ಕಾರ್ಮಿಕ ವಿಭಾಗದ ಆಯೋಜಿಸಿದ್ದ ಕಾರ್ಮಿಕ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು ಎಲ್ಲಾ ವರ್ಗದ ಕಾರ್ಮಿಕರ ಅಭಿವೃದ್ಧಿಗೆ ಸರ್ಕಾರ ದುಡಿಯಬೇಕು ಎಂದು ತಿಳಿಸಿದರು.ಅಸಂಘಟಿತ ಕಾರ್ಮಿಕರ ದಿನಾಚರಣೆ ಆಯೋಜಿಸಿರುವುದು ಮಹತ್ವದಾಗಿದೆ. ಈ ದಿನವನ್ನು ಕಾರ್ಮಿಕರ ಸ್ಥಿತಿ-ಗತಿ ಏನಿದೆ ಎಂದು ಚಿಂತನೆ ನಡೆಸಬೇಕು. ಜೊತೆ,
ಕಾರ್ಮಿಕರು ಈ ಸಮಾಜದ ಬೆನ್ನೆಲುಬು ಆಗಿದ್ದಾರೆ. ಇಂದು ನಾವು ಸಾಮಾಜಿಕ, ಆರ್ಥಿಕ ವಾಗಿ ಬೆಳೆದಿದ್ದರೆ, ಇದಕ್ಕೆ ಕಾರ್ಮಿಕರೇ ನೇರ ಕಾರಣ. ಅಷ್ಟೇ ಅಲ್ಲದೆ, ದೇವಾಲಯ, ರಸ್ತೆ, ಕಟ್ಟಡಗಳು ಅಭಿವೃದ್ಧಿಯ ಹಿಂದೆ ಕಾರ್ಮಿಕರ ಶ್ರಮ ಇದೆ ಎಂದರು.
ಬಸವಣ್ಣ ಅವರು ಕಾಯಕವೇ ಕೈಲಾಸ ಎಂದು ಸಂದೇಶ ಹೇಳಿದ್ದಾರೆ ಎಂದ ಅವರು, ಸ್ವಾಭಿಮಾನಿ ಬದುಕು ಕಟ್ಟಿಕೊಂಡಿರುವ ಕಾರ್ಮಿಕರ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷ ಮತ್ತಷ್ಟು ಕಾರ್ಯಕ್ರಮಗಳನ್ನು ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೆಪಿಸಿಸಿ ಕಾರ್ಮಿಕ ವಿಭಾಗದ ಅಧ್ಯಕ್ಷ ಎಸ್.ಎಸ್.ಪ್ರಕಾಶಂ ಮಾತನಾಡಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಕೆಪಿಸಿಸಿ ಕಾರ್ಮಿಕರ ಘಟಕ ನಿರಂತರವಾಗಿ ಶ್ರಮಿಸುತ್ತಿದೆ.
ಕಾರ್ಮಿಕ ಘಟಕ ಕಳೆದ 25 ವರ್ಷಗಳಿಂದ ಉತ್ತಮವಾಗಿ ಸೇವೆ ಸಲ್ಲಿಸುತ್ತಿದೆ. ರಾಜ್ಯದಲ್ಲಿ 14ಲಕ್ಷ ಜನ ಕಾರ್ಮಿಕ ವಿಭಾಗದ ಸದಸ್ಯರಾಗಿದ್ದಾರೆ. ನಾನಾ ಕಾರ್ಮಿಕ ವಿಭಾಗಗಳಿಂದ ಹಾಗೂ ಅಸಂಘಟಿತ ಕಾರ್ಮಿಕರು ಸೇರಿದಂತೆ ರಾಜ್ಯದ 30 ಜಿಲ್ಲೆಗಳು, 176 ತಾಲೂಕುಗಳಲ್ಲಿ ಹಾಗೂ 198 ಬಿಬಿಎಂಪಿ ವಾರ್ಡ್ಗಳಲ್ಲಿ ಕಾರ್ಮಿಕರ ಘಟಕ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.
ಸಮಾವೇಶದಲ್ಲಿ ಪರಿಷತ್ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಮಾಜಿ ಮುಖ್ಯ ಸಚೇತಕ ಆರ್.ವಿ.ವೆಂಕಟೇಶ್, ಓಬಿಸಿ ವಿಭಾಗದ ಅಧ್ಯಕ್ಷ ಲಕ್ಷ್ಮೀ ನಾರಾಯಣ್ ಸೇರಿದಂತೆ ಪ್ರಮುಖರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








