ತುರುವೇಕೆರೆ
ಈಗಾಗಲೇ ಹೇಮಾವತಿ ನೀರಿನಿಂದ ಭರ್ತಿಯಾಗಿರುವ ಸಾರಿಗೆಹಳ್ಳಿ ಕೆರೆ, ಸಂಪಿಗೆ ಕೆರೆ ಹಾಗೂ ವೀರಸಾಗರ ಕೆರೆಗಳು ಭರ್ತಿಯಾಗಿ ಕೋಡಿಬಿದ್ದಿರುವ ಹಿನ್ನೆಲೆಯಲ್ಲಿ ನವೆಂಬರ್ 1 ರಂದು ಬೆಳಿಗ್ಗೆ 12:30 ರಿಂದ ಸರದಿಯಂತೆ ಗಂಗಾಪೂಜೆ ನೆರವೇರಿಸಲಾಗುವುದು ಎಂದು ತಾಲ್ಲೂಕು ಭಾಜಪ ಘಟಕದ ಅಧ್ಯಕ್ಷ ದುಂಡರೇಣುಕಯ್ಯ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕ್ಷೇತ್ರವ್ಯಾಪ್ತಿಯ ಕೆರೆಕಟ್ಟೆಗಳಿಗೆ ನೀರು ಹರಿಸುವ ನಿಟ್ಟಿನಲ್ಲಿ ಶಾಸಕ ಮಸಾಲಜಯರಾಮ್ರ ಶ್ರಮ ಅಪಾರವಾದುದು. ಡಿ-11 ನಾಲೆಯ ಮೇಲೆ ಉಪವಾಸ ಸತ್ಯಾಗ್ರಹ ಕೈಗೊಳ್ಳುವ ಮೂಲಕ ಶಾಸಕ ಮಸಾಲಜಯರಾಮ್ ಕ್ಷೇತ್ರದ ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಸಲುವಾಗಿ ಹೋರಾಟ ಆರಂಭಿಸಿದ್ದರು.
ಅವರ ಹೋರಾಟದ ಫಲವಾಗಿ ತಾಲ್ಲೂಕಿನ ಕೆರೆಕಟ್ಟೆಗಳು ಹೇಮೆಯ ನೀರಿನಿಂದ ಭರ್ತಿಯಾಗಿರುವುದು ಅತ್ಯಂತ ಸಂತಸದ ವಿಚಾರವಾಗಿದೆ. ಈ ಹಿನ್ನೆಲೆಯಲ್ಲಿ ದಂಡಿನಶಿವರ ಹೋಬಳಿಯ ಸಾರಿಗೆಹಳ್ಳಿ, ಸಂಪಿಗೆ ಹಾಗೂ ವೀರಸಾಗರ ಕೆರೆಗಳಿಗೆ ಶಾಸಕ ಮಸಾಲಜಯರಾಮ್ ಬಾಗಿನ ಸಮರ್ಪಿಸಲಿದ್ದಾರೆ. ಈ ಸಂದರ್ಭದಲ್ಲಿ ಹಲವು ಮಠಾಧೀಶರುಗಳು, ರೈತಾಪಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದರು.
ತಾಲ್ಲೂಕಿನ ಕೆರೆಕಟ್ಟೆಗಳಿಗೆ ನೀರು ಹರಿಸುವಲ್ಲಿ ಶ್ರಮವಹಿಸಿದ ಶಾಸಕ ಮಸಾಲಜಯರಾಮ್ರವರನ್ನು ಬಾಗಿನ ಸಮರ್ಪಣೆ ಸಂದರ್ಭದಲ್ಲೇ ಗ್ರಾಮಸ್ಥರಿಂದ ಗೌರವಿಸಲಾಗುವುದು ಹಾಗೂ ಅನ್ನದಾಸೋಹ ಸಹಾ ಏರ್ಪಡಿಸಲಾಗಿದೆ ಎಂದು ತಾಲ್ಲೂಕು ಭಾಜಪ ಘಟಕದ ಅಧ್ಯಕ್ಷ ದುಂಡರೇಣುಕಯ್ಯ ಹೇಳಿದರು.
ಗೋಷ್ಠಿಯಲ್ಲಿ ಭಾಜಪ ರಾಜ್ಯ ಪದಾಧಿಕಾರಿ ಡಿ.ಆರ್.ಬಸವರಾಜು, ಕೋಶಾಧ್ಯಕ್ಷ ಎಂ.ರಾಮಯ್ಯ, ಗ್ರಾ.ಪಂ.ಸದಸ್ಯೆ ಶೋಭಾ, ಜಿಲ್ಲಾ ಘಟಕದ ಅನಿತಾನಂಜುಂಡಯ್ಯ, ತಾ.ಪಂ.ಮಾಜಿ ಅಧ್ಯಕ್ಷೆ ಪದ್ಮಾವೆಂಕಟೇಶ್, ತಾಲ್ಲೂಕು ಮಹಿಳಾಘಟಕದ ಅಧ್ಯಕ್ಷೆ ಜಯಶೀಲ, ರೈತಮೋರ್ಚಾ ಉಪಾಧ್ಯಕ್ಷರಾದ ಚೂಡಾಮಣಿ, ಯುವಘಟಕದ ಸ್ವಾಮಿ, ಶೇಖರ್, ಬಸವೇಶ್, ಮೂರ್ತಿ ಸೇರಿದಂತೆ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
