ಪಾವಗಡ
ಮುಂದಿನ ಜನವರಿ ತಿಂಗಳಲ್ಲಿ ನಡೆಯುವ ಪುರಸಭಾ ಚುನಾವಣೆಗೆ ಜೆ.ಡಿ.ಎಸ್. ಕಾರ್ಯಕರ್ತರು ಸನ್ನದ್ಧರಾಗಬೇಕೆಂದು ಮಾಜಿ ಶಾಸಕ ತಿಮ್ಮರಾಯಪ್ಪ ಕಾರ್ಯಕರ್ತರಿಗೆ ಕರೆ ನೀಡಿದರು.
ಶುಕ್ರವಾರ ಪಾವಗಡ ಪಟ್ಟಣದ ದೇವಲಕೆರೆ ಕ್ರಾಸ್ ಬಳಿ ಜೆ.ಡಿ.ಎಸ್. ನಗರ ಘಟಕದ ಅಧ್ಯಕ್ಷ ಶಾಂತ್ಕುಮಾರ್ರವರ ತೋಟದ ಮನೆಯಲ್ಲಿ ಕರೆದಿದ್ದ ಜೆ.ಡಿ.ಎಸ್. ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಹಾಲಿ ಪುರಸಭೆ ಜೆ.ಡಿ.ಎಸ್ ತೆಕ್ಕೆಯಲ್ಲಿದ್ದು, ಮುಂಬರುವ ಚುನಾವಣೆಯಲ್ಲಿಯೂ ಜೆ.ಡಿ.ಎಸ್. ಕೈವಶವಾಗಲು ಕಾರ್ಯಕರ್ತರು ಶ್ರಮಿಸಬೇಕು. ರಾಜ್ಯದ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಕುಮಾರಸ್ವಾಮಿಯ ಸಾಲಮನ್ನಾ ಮತ್ತು ಬೀದಿಬದಿ ವ್ಯಾಪಾರಿಗಳಿಗೆ ಜಾರಿಗೆ ತಂದಿರುವ ಯೋಜನೆಗಳನ್ನು ಮತದಾರರಿಗೆ ತಲುಪಿಸಬೇಕು ಎಂದರು.
ಕೊಳಚೆ ನಿರ್ಮೂಲನಾ ಮಂಡಳಿಯಿಂದ ಪಾವಗಡ ಕೊಳಚೆ ಪ್ರದೇಶಗಳಿಗೆ ಮಂಜೂರಾಗಿರುವ 300 ಮನೆಗಳ ಸೌಲಭ್ಯದಲ್ಲಿ ಕಾಂಗ್ರೆಸ್ ಪುರಸಭಾ ಸದಸ್ಯರ ವಾರ್ಡುಗಳಿಗೆ ಕಲ್ಪಿಸಿಕೊಡುತ್ತಿದ್ದು, ಜೆ.ಡಿ.ಎಸ್.ಸದಸ್ಯರ ಗಮನಕ್ಕೆ ಪಟ್ಟಿ ನೀಡದೆ ಗುತ್ತಿಗೆದಾರರು ಅವ್ಯವಹಾರ ಎಸಗುತ್ತಿದ್ದಾರೆ ಎಂದು ಮುಖಂಡ ಗುಟ್ಟಹಳ್ಳಿ ಮಣಿ ಸಭೆಯ ಗಮನಕ್ಕೆ ತಂದರು. ಇದೇ ರೀತಿ ಮುಂದುವರೆದರೆ ಜೆ.ಡಿ.ಎಸ್. ಪಕ್ಷದಿಂದ ಸಚಿವರ ನಡೆ ವಿರುದ್ದ ಉಗ್ರ ಹೋರಾಟ ಹಮ್ಮಿಕೊಳ್ಳಲು ಸಿದ್ದರಾಗಬೇಕೆಂದರು.
ಜೆ.ಡಿ.ಎಸ್. ಪಕ್ಷದಲ್ಲಿದ್ದುಕೊಂಡು ಪಕ್ಷದ್ರೋಹ ಬಗೆಯುವವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಹಾಲು ಉತ್ಪಾದಕರ ಸಂಘದ ಪರಾಜಿತ ಅಭ್ಯರ್ಥಿ ಸುರೇಶ್ ತಿಳಿಸಿದರು.
ಜಿಲ್ಲಾ ಕಾರ್ಯಾಧ್ಯಕ್ಷ ಆರ್.ಸಿ. ಅಂಜಿನಪ್ಪ ಮಾತನಾಡಿ, ಪಕ್ಷದಲ್ಲಿ ಯಾರೇ ಅಭ್ಯರ್ಥಿಗಳಾಗಲಿ ಪಕ್ಷಕ್ಕೆ ದ್ರೋಹ ಬಗೆಯದೆ , ಜೆ.ಡಿ.ಎಸ್.ಪಕ್ಷದ ಶಕ್ತಿಯನ್ನು ಪುರಸಭೆ ಚುನಾವಣೆಯಲ್ಲಿ ತೋರಿಸಬೇಕು ಎಂದರು.ರಾಜ್ಯ ಜೆ.ಡಿ.ಎಸ್. ಉಪಾಧ್ಯಕ್ಷ ಎನ್.ತಿಮ್ಮಾರೆಡ್ಡಿ, ಪಟ್ಟಣದ ವಾರ್ಡುವಾರು ಸಭೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು, ಕಾಂಗ್ರೆಸ್ ನವರು ಮತದಾರರ ಪಟ್ಟಿಯಲ್ಲಿ ಅವ್ಯವಹಾರ ಎಸಗಿದ್ದು, ಈ ಬಗ್ಗೆ ನ್ಯಾಯಾಲಯದಲ್ಲಿ ದಾವೆಹೂಡಿ ಕಾಂಗ್ರೆಸ್ ನಡೆಯನ್ನು ಖಂಡಿಸಬೇಕು ಎಂದರು.
ಪುರಸಭಾ ಮಾಜಿ ಅಧ್ಯಕ್ಷ ಮಾನಂವೆಂಕಟಸ್ವಾಮಿ, ಮಾತನಾಡಿ ಅಕಾಂಕ್ಷಿಗಳೆಲ್ಲರೂ ಮಾತುಕತೆ ನಡೆಸಿ ಅಂತಿಮವಾಗಿ ಒಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂದು ಸಲಹೆ ನೀಡಿದರು.
ಪುರಸಭಾ ಸದಸ್ಯರಾದ ಜಿ.ಎ. ವೆಂಕಟೇಶ್, ಜೆ.ಡಿ.ಎಸ್. ತಾ. ಅಧ್ಯಕ್ಷ ಬಲರಾಮರೆಡ್ಡಿ, ಪ್ರಧಾನ ಕಾರ್ಯದರ್ಶಿ ಗೋವಿಂದಬಾಬು, ಜೆ.ಡಿ.ಎಸ್. ತಾ. ಉಪಾಧ್ಯಕ್ಷ ಈರಣ್ಣ, ಕೆಂಚಗಾನಹಳ್ಳಿಗೋವಿಂದಪ್ಪ, ಆರ್ಯವೈಶ್ಯ ಮುಖಂಡ ಕಮಲ್ಬಾಬು, ಮಾತನಾಡಿದರು.
ಪುರಸಭಾ ಸದಸ್ಯರಾದ ಗೋಪಾಲಕೃಷ್ಣ, ವಸಂತ್ಕುಮಾರ್, ತಾ.ಪಂ. ಮಾಜಿ ಅಧ್ಯಕ್ಷ ರಾಮಾಂಜಿನರೆಡ್ಡಿ, ಮುಖಂಡರಾದ ಗುಟ್ಟಹಳ್ಳಿ ಅಂಜಪ್ಪ, ರಾಮಕೃಷ್ಣಪ್ಪ, ರಾಜಶೇಖರ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
