ದಾವಣಗೆರೆ

ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೀಡಲಾಗುವ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ನಡೆದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಉಭಯ ಸರ್ಕಾರಗಳ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವುದರ ಜೊತೆಗೆ ಇಲಾಖೆಗಳಿಗೆ ನೀಡಲಾದ ನಿಗದಿತ ಗುರಿ ತಲುಪಲು ಶ್ರಮಿಸಬೇಕೆಂದು ಸೂಚನೆ ನೀಡಿದರು.
ಇಂದಿನ ಆರ್ಡಿಪಿಆರ್ ಪ್ರಗತಿ ವರದಿ ಪ್ರಕಾರ ಜಿಲ್ಲೆಯು ಪ್ರಗತಿ ಸಾಧನೆಯಲ್ಲಿ ಕೊಂಚ ಹಿಂದಿದೆ. ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ, ಜಿ.ಪಂ ಸಿಇಓ ಇವರ ಜೊತೆ ಚರ್ಚಿಸಿ, ಗುರಿ ಸಾಧನೆಯೆಡೆ ಕಾರ್ಯೋನ್ಮುಖವಾಗಬೇಕು. ಅಕ್ಟೋಬರ್ 11 ರಂದು ನಡೆಯುವ ಕೆಡಿಪಿ ಸಭೆಯ ವೇಳೆಗೆ ನಿಗದಿತ ಗುರಿ ತಲುಪಲು ಇಂದಿನಿಂದಲೇ ಪ್ರಯತ್ನಿಸಬೇಕೆಂದು ಸಲಹೆ ನೀಡಿದರು.
ಹಿಂದೆ ನಾನು ನೀರಾವರಿ ಸಚಿವನಾಗಿದ್ದಾಗ ಸಿರಿಗೆರೆ ಶ್ರೀಗಳು, ಈ ಭಾಗದ ಕೆರೆಗಳನ್ನು ತುಂಬಿಸಲು ಆದೇಶಿಸಿದ್ದರು. ಈ ಬಗ್ಗೆ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು ಕಾರ್ಯ ನಿರ್ವಹಿಸಲಾಗುವುದು ಎಂದ ಅವರು, ಸ್ನೇಹಕ್ಕೆ ಮತ್ತೊಂದು ಹೆಸರು ದಾವಣಗೆರೆಯಾಗಿದ್ದು, ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳು, ಶರಣರ, ಮಠಮಾನ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕಾರ್ಯಗಳನ್ನು ಜಿಲ್ಲೆಯಲ್ಲಿ ಕೈಗೊಳ್ಳುತ್ತೇನೆ ಎಂದರು.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ಜಗಳೂರಿನಲ್ಲಿ ಮಳೆಯೇ ಆಗದ ಕಾರಣ ಬರದ ಸ್ಥಿತಿ ಇದ್ದು, ಇಲ್ಲಿನ ರಾಸುಗಳಿಗೆ ಮೇವಿನ ಕೊರತೆ ಎದುರಾಗಿದೆ. ಮಳೆಗಾಲಕ್ಕೂ ಮುನ್ನ ಜಗಳೂರು ತಾಲ್ಲೂಕಿನ ಮೂರು ಸ್ಥಳಗಳಲ್ಲಿ ಗೋಶಾಲೆ ಸ್ಥಾಪಿಸಿ ಮೇವು ಒದಗಿಸಲಾಗುತ್ತಿತ್ತು. ಸದ್ಯಕ್ಕೆ ಹಿರೇಮಲ್ಲನಹೊಳೆ ಗ್ರಾಮದಲ್ಲಿ ಮಾತ್ರ ಒಂದು ಗೋಶಾಲೆ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಇದಕ್ಕೆ ಪ್ರತಿಕ್ರಯಿಸಿದ ಜಗಳೂರು ಶಾಸಕ ಎಸ್.ವಿ.ರಾಮಚಂದ್ರ, ತಾಲ್ಲೂಕಿನಲ್ಲಿ ಮಳೆಯೇ ಆಗದೆ ಬರ ಸ್ಥಿತಿ ಉಂಟಾಗಿದೆ. ಆದ್ದರಿಂದ ಕೊಡದಗುಡ್ಡ, ಹಿರೇಮಲ್ಲನಹೊಳೆ ಸೇರಿದಂತೆ ಮೂರು ಕಡೆಯೂ ಗೋಶಾಲೆ ಮುಂದುವರೆಸಬೇಕು ಹಾಗೂ ಅವಶ್ಯವಿರುವೆಡೆ ಮೇವು ಬ್ಯಾಂಕ್ ಕೂಡ ಸ್ಥಾಪಿಸಬೇಕು ಎಂದು ಮನವಿ ಮಾಡಿದರು.ಈ ವೇಳೆ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ, ಶಾಸಕರು ಹೇಳಿದಂತೆ ಗೋಶಾಲೆಗಳನ್ನು ಮುಂದುವರೆಸಬೇಕೆಂದು ಡಿಸಿಗೆ ಸೂಚನೆ ನೀಡಿದರು.
ಜಿ.ಪಂ. ಐಆರ್ಇಬಿ ಅಭಿಯಂತರ ವ್ಯವಸ್ಥಾಪಕ ಬಸವರಾಜ್ ಮಾತನಾಡಿ, ಸ್ವಚ್ಚಭಾರತ್ ಯೋಜನೆಯಡಿ 2017 ರಲ್ಲಿ ಬಯಲುಶೌಚ ಮುಕ್ತ ಜಿಲ್ಲೆಯನ್ನಾಗಿ ಘೋಷಿಸಿದ ನಂತರ ಎಲ್ಓಬಿ ಅಡಿಯಲ್ಲಿ 8634 ಶೌಚಾಲಯ ನಿರ್ಮಿಸುವ ಗುರಿಯಲ್ಲಿ 8605 ಕ್ಕೆ ಕಾರ್ಯಾದೇಶ ನೀಡಲಾಗಿದೆ. 4816 ಧನಾದೇಶ ಆಗಿದ್ದು, 3789 ಬಾಕಿ ಇದೆ ಎಂದು ಮಾಹಿತಿ ನೀಡಿದರು.
ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಇದೇ ಪ್ರಥಮ ಬಾರಿಗೆ ನಗರ ಪ್ರದೇಶಗಳಲ್ಲಿ ಶಾಲೆ ಮತ್ತು ಅಂಗನವಾಡಿಗಳಲ್ಲಿ ಶೌಚಾಲಯ ನಿರ್ಮಿಸಲು ಶಾಸಕರಿಗೆ ಅನುದಾನ ನೀಡಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಆರ್ಡಿಪಿಆರ್ ವತಿಯಿಂದ ಸ್ವಚ್ಚಭಾರತ್ ಮಿಷನ್ ಅಡಿಯಲ್ಲಿ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ 2 ಲಕ್ಷ ರೂ, ಅಂಗನವಾಡಿಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ 40 ಸಾವಿರ ಹಾಗೂ ರಿಪೇರಿಗೆ ಅನುದಾನ ನೀಡಲಾಗುವುದು. ಜಿಲ್ಲೆಯಲ್ಲಿ ಎಷ್ಟು ಶಾಲೆ, ಅಂಗನವಾಡಿಗಳಿಗೆ ಶೌಚಾಲಯ ಹಾಗೂ ಹೆಚ್ಚುವರಿ ಶೌಚಾಲಯ ಬೇಕೆಂದು ಪಟ್ಟಿ ಮಾಡಿ ಕೂಡಲೇ ನೀಡಬೇಕೆಂದು ಸೂಚಿಸಿದರು.
ನರೇಗಾ ಇಲಾಖೆಯ ಆಯುಕ್ತರಾದ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾತನಾಡಿ, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಖಾತರಿ ಯೋಜನೆಯಡಿ ಜಿಲ್ಲೆಯಲ್ಲಿ 2018-19 ನೇ ಸಾಲಿನಲ್ಲಿ 33.87 ಲಕ್ಷ ಮಾನವ ದಿನಗಳ ಗುರಿ ಇದ್ದು, 39.33 ಮಾನವ ದಿನಗಳನ್ನು ಸೃಷ್ಠಿಸಿ ಶೇ.116.18 ಸಾಧನೆ ಮಾಡಲಾಗಿದೆ. 2019-20 ನೇ ಸಾಲಿನಲ್ಲಿ 11,23,500 ಮಾನವ ದಿನಗಳ ಗುರಿಯಲ್ಲಿ ಇಲ್ಲಿಯವರೆಗೆ 3,02,909 ಮಾನವ ದಿನಗಳನ್ನು ಸೃಷ್ಟಿಸಿ ಶೇ.27 ಪ್ರಗತಿ ಸಾಧಿಸಲಾಗಿದೆ. ಅರಣ್ಯ ಇಲಾಖೆ, ರೇಷ್ಮೆ ಮತ್ತು ತೋಟಗಾರಿಕೆ ಇಲಾಖೆಯ ಪ್ರಗತಿ ಕುಂಠಿತವಾಗಿದ್ದು, ಈ ಇಲಾಖೆಗಳ ಮುಖ್ಯಸ್ಥರು ನಿಗದಿತ ಗುರಿ ತಲುಪಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರ ರಾಜು ಮಾತನಾಡಿ, ಎನ್ಆರ್ಡಿಡಬ್ಲ್ಯುಪಿ ಅಡಿಯಲ್ಲಿ 406 ಮುಂದುವರೆದ ಕಾಮಗಾರಿಗಳ ಪೈಕಿ 347 ಕಾಮಗಾರಿಗಳನ್ನು ಪೂರ್ಣಗೊಳಿಸಿ 59 ಬಾಕಿ ಇದೆ. ಎಸ್ಡಿಪಿ ಅಡಿಯಲ್ಲಿ 56 ಮುಂದುವರೆದ ಕಾಮಗಾರಿಗಳ ಪೈಕಿ 49 ಪೂರ್ಣಗೊಂಡು 7 ಬಾಕಿ ಇದೆ. ಇದರ 66 ಕಾಮಗಾರಿಗಳಲ್ಲಿ 28 ಕಾಮಗಾರಿಗಳು ಬಹುಗ್ರಾಮ ಯೋಜನೆ ಹಾಗೂ ಬಹುಗ್ರಾಮ ವಾರ್ಷಿಕ ಯೋಜನೆಯಲ್ಲಿರುತ್ತವೆ. ಜಿಲ್ಲೆಯಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ 1,134 ಗ್ರಾಮಗಳನ್ನು ತಲುಪುವ 36 ಯೋಜನೆಗಳು ಅನುಮೋದನೆಗೊಂಡಿದ್ದು, 24 ಯೋಜನೆ ಪೂರ್ಣಗೊಂಡಿದೆ. 6 ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.
ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ಸಂತೇಮುದ್ದಾಪುರ ಮತ್ತು 109 ಹಳ್ಳಿಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ಈ ಬಗ್ಗೆ ಇಂಜಿನಿಯರು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.ಶಾಸಕ ಎಸ್.ಎ ರವೀಂದ್ರನಾಥ್ ಮಾತನಾಡಿ, ರಾಜೀವ್ಗಾಂಧಿ ಸಬ್ಮಿಷನ್ ಕುಡಿಯುವ ನೀರು ಯೋಜನೆ ಸರಿಯಾಗಿ ಅನುಷ್ಟಾನಗೊಂಡಿಲ್ಲ. ದಾವಣಗೆರೆ ತಾಲ್ಲೂಕಿನ ಮಾಯಕೊಂಡ, ಹುಚ್ಚವ್ವನಹಳ್ಳಿ, ಬಸಾಪುರ ಸೇರಿದಂತೆ ಅನೇಕ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಈ ಯೋಜನೆಯನ್ನು ಚುರುಕುಗೊಳಿಸಿ ಇಲ್ಲಿಗೆ ನೀರು ಪೂರೈಸಬೇಕೆಂದು ಆಗ್ರಹಿಸಿದರು.
ಸಭೆಯಲ್ಲಿ ಜಿ.ಪಂ.ನ ಉಪಾಧ್ಯಕ್ಷ ಸುರೇಂದ್ರ ನಾಯ್ಕ, ಜಿ.ಪಂ.ನ ಸ್ಥಾಯಿ ಸಮಿತಿಗಳ ಅಧ್ಯಕ್ಷರುಗಳು, ಸದಸ್ಯರು, ಗ್ರಾಮೀಣಾಭಿವೃದ್ಧಿ ಸಚಿವರ ವಿಶೇಷಾಧಿಕಾರಿ ಜಯಕುಮಾರ್, ಗ್ರಾಮೀಣಾಭಿವೃದ್ದಿ ಮತ್ತು ಪಂ.ರಾ ಇಲಾಖೆಯ ನಿರ್ದೇಶಕ ಭುವನಹಳ್ಳಿ ನಾಗರಾಜು, ಜಿ.ಪಂ.ಸಿಇಓ ಪದ್ಮಾ ಬಸವಂತಪ್ಪ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ, ಜಿ.ಪಂ ಉಪ ಕಾರ್ಯದರ್ಶಿ ಜಗದೀಶ್ ಸೇರಿದಂತೆ ಇತರೆ ಅಧಿಕಾರಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
