ಬಳ್ಳಾರಿ
ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ಅನುಮೋದನೆಯಾಗಿರುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅನುಷ್ಠಾನ ಏಜೆನ್ಸಿಗಳು ತಮಗೆ ವಹಿಸಲಾದ ಕೆಲಸಗಳಿಗೆ ಸಂಬಂಧಿಸಿದಂತೆ ಕೂಡಲೇ ಸ್ಥಳಕ್ಕೆ ತೆರಳಿ ಪರಿಶೀಲಿಸಬೇಕು. ನಿವೇಶನ ಇದೆಯೋ ಅಥವಾ ಸಮಸ್ಯೆ ಇದೆಯೋ, ಕಾಮಗಾರಿ ಮಾಡುವುದಕ್ಕೆ ಆಗುತ್ತದೆಯೋ ಆಗುವುದಿಲ್ಲವೋ ಎಂಬುದು ಸೇರಿದಂತೆ ಇನ್ನೀತರ ಅಂಶಗಳು ಒಳಗೊಂಡ ಮಾಹಿತಿಗಳನ್ನು ಇದೇ ಜು.31ರೊಳಗೆ ವರದಿ ಸಲ್ಲಿಸಬೇಕು ಎಂದು ಹೈಕ ಪ್ರದೇಶಾಭಿವೃದ್ಧಿ ಮಂಡಳಿ ಕಾರ್ಯದರ್ಶಿಗಳು ಆಗಿರುವ ಪ್ರಾದೇಶಿಕ ಆಯುಕ್ತ ಸುಬೋಧ್ ಯಾದವ್ ಅವರು ಖಡಕ್ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಹೈಕ ಪ್ರದೇಶಾಭಿವೃದ್ಧಿ ಮಂಡಳಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ವಿಷಯವಾರು ಹಂಚಿಕೆ ಮಾಡಲಾಗಿರುವ ಕಾಮಗಾರಿಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನಿವೇಶನ ಸಮಸ್ಯೆ ಇದ್ದಲ್ಲಿ ಕಾಮಗಾರಿ ಬದಲಾವಣೆ ಕೋರಿ ಪತ್ರ ಬರೆದು ತಿಳಿಸಬಹುದಾಗಿದೆ. ಕಾಮಗಾರಿಗಳ ಹಂಚಿಕೆ ಮತ್ತು ಏಜೆನ್ಸಿಗಳ ಬದಲಾವಣೆ ಇದ್ದಲ್ಲಿ ಪತ್ರಮುಖೇನ ಜು.31ರೊಳಗೆ ತಿಳಿಸಬಹುದಾಗಿದೆ ಎಂದು ಹೇಳಿದ ಪ್ರಾದೇಶಿಕ ಅಯುಕ್ತ ಸುಬೋಧ ಯಾದವ್ ಅವರು ಯಾವುದೇ ರೀತಿಯ ಸಮಸ್ಯೆಗಳು ಇರದಿದ್ದಲ್ಲಿ ಅಂದಾಜುಪಟ್ಟಿ ತಯಾರಿಸಿ, ಟೆಂಡರ್ ಆಹ್ವಾನ ಸೇರಿದಂತೆ ಇನ್ನೀತರ ಕ್ರಮಗಳನ್ನು ತುರ್ತಾಗಿ ಜರುಗಿಸಿ; ಯಾವುದೇ ಕಾರಣಕ್ಕೂ ತಡಮಾಡಬೇಡಿ ಎಂದು ಅವರು ಅನುಷ್ಠಾನ ಏಜೆನ್ಸಿಗಳಿಗೆ ಸೂಚನೆ ನೀಡಿದರು.
2018-19ಕ್ಕೆ ಸಂಬಂಧಿಸಿದಂತೆ ಎಲ್ಲ ಕೆಲಸಗಳು ಕೂಡಲೇ ಪ್ರಾರಂಭವಾಗಬೇಕು ಎಂದು ಸೂಚಿಸಿದ ಸುಬೋಧ ಯಾದವ್ ಅವರು ಜಿಲ್ಲೆಯಲ್ಲಿ 77 ಕೆಲಸಗಳು ಇನ್ನೂ ಪ್ರಾರಂಭವಾಗದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಅನುಷ್ಠಾನ ಏಜೆನ್ಸಿಗಳಾದ ಪಿಡಬ್ಲ್ಯೂಡಿ, ಪಿಆರ್ಇಡಿ ಮತ್ತು ಕೆಆರ್ಐಡಿಎಲ್ಗಳ ಮೇಲೆ ಅತೃಪ್ತಿ ವ್ಯಕ್ತಪಡಿಸಿದರು.
ಸೈಟ್ಗೆ ಸಂಬಂಧಿಸಿದಂತೆ ಸಮಸ್ಯೆಗಳಿದ್ದಲ್ಲಿ ಡಿಸಿ,ಜಿಪಂ ಸಿಇಒ ಅವರ ಗಮನಕ್ಕೆ ತರಬೇಕು. ಆ ರೀತಿ ತರದೇ ಅದ್ಹೇಗೆ ಕಾಮಗಾರಿ ಡ್ರಾಪ್ ಮಾಡಿ ಅಂತ ವರದಿ ನೀಡುತ್ತೀರಿ ಎಂದು ಹಗರಿಬೊಮ್ಮನಳ್ಳಿ ಲೋಕೋಪಯೋಗಿ ಎಇಇ ಮೂರು ಕಾಮಗಾರಿಗಳು ಡ್ರಾಪ್ ಮಾಡಿ ಅಂತ ಹೇಳಿದ್ದಕ್ಕೆ ಗರಂ ಆಗಿ ನುಡಿದರು. ಕಳೆದ ನವೆಂಬರ್ನಿಂದ ಈ ವಿಷಯಗಳಿಗೆ ಸಂಬಂಧಿಸಿದಂತೆ ಹೇಳುತ್ತಾ ಬಂದರೂ ತಾವು ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ ಎಂದರು.
ಸಕಾಲದಲ್ಲಿ ಬಳಸದ ಕಾರಣ ಜನರಿಗೆ ಸಮಸ್ಯೆ: ಹೈಕ ಅಭಿವೃದ್ಧಿ ಮಂಡಳಿಯಿಂದ ವಿವಿಧ ಕಾಮಗಾರಿಗಳ ಅನುಷ್ಠಾನಕ್ಕೆ ಅಪಾರ ಪ್ರಮಾಣದ ಹಣ ಬಿಡುಗಡೆಯಾದ್ರೂ ಸಹ ಸಕಾಲದಲ್ಲಿ ಬಳಸಿಕೊಳ್ಳದೇ ಇರುವುದರಿಂದ ಜನರಿಗೆ ಸಮಸ್ಯೆ ಉಂಟಾಗುತ್ತಿದೆ ಎಂದು ಅವರು ಪ್ರಾದೇಶಿಕ ಆಯುಕ್ತ ಸುಬೋಧ ಯಾದವ್ ಹೇಳಿದರು.
ಮುಂದಿನ ಪೀಳಿಗೆಗೆ ಅನುಕೂಲವಾಗುವಂತ ಕೆಲಸಗಳನ್ನು ಮಾಡಿ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದ ಅವರು ಕಾಮಗಾರಿಗಳು ಅನುಷ್ಠಾನವಾಗುವಾಗ ಫಿಲ್ಡ್ನಲ್ಲಿ ಕೆಲ ಸಮಸ್ಯೆಗಳಿರುವುದು ಸಹಜ. ಸುಮ್ಮನೆ ಕುಳಿತುಕೊಳ್ಳದೇ ಪರಿಶೀಲಿಸುವ ಗಮನಕ್ಕೆ ತರುವ ಕೆಲಸಗಳನ್ನು ಮಾಡಿ ಎಂದರು.
ಈ ಮಾಹಿತಿ ಎಂಜನಿಯರ್ಗಳಿಗೆ ತಿಳಿಸಿ: ಕಾಮಗಾರಿಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಸಭೆಯಲ್ಲಿ 30 ಲಕ್ಷ ರೂ.ಒಳಗಿನ ಕಾಮಗಾರಿಗಳು 3 ತಿಂಗಳೊಳಗೆ ಸ್ಟಾರ್ಟ್ ಆಗಬೇಕು. 30 ಲಕ್ಷ ರೂ.ಗಳಿಂದ 1 ಕೋಟಿ ರೂ.ವರೆಗಿನ ಕಾಮಗಾರಿಗಳು 5 ತಿಂಗಳಲ್ಲಿ ಮತ್ತು 1 ಕೋಟಿ ರೂ. ಮೇಲ್ಪಟ್ಟ ಕಾಮಗಾರಿಗಳು 6 ತಿಂಗಳಲ್ಲಿ ಆರಂಭವಾಗಬೇಕು ಎಂದು ತೀರ್ಮಾನಿಸಲಾಗಿದೆ.
ಈ ಮಂಡಳಿಯ ಸಭೆಯಲ್ಲಿ ಕೈಗೊಳ್ಳಲಾದ ತೀರ್ಮಾನಗಳನ್ನು ಎಂಜನಿಯರ್ಗಳು ತಿಳಿದುಕೊಳ್ಳಬೇಕು. ಆ ಗೈಡ್ಲೈನ್ಸ್ ಅನುಸಾರವೇ ಕಾರ್ಯನಿರ್ವಹಿಸಬೇಕು ಎಂದು ಸುಬೋಧ್ ಯಾದವ್ ಸೂಚಿಸಿದರು. ಕಲಬುರಗಿ ಜಿಲ್ಲೆಯಲ್ಲಿ ಹೈಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಕೈಗೆತ್ತಿಕೊಳ್ಳಲಾದ 675 ಕಾಮಗಾರಿಗಳನ್ನು ಭೌತಿಕವಾಗಿ ನಾನೇ ಖುದ್ದಾಗಿ ಪರಿಶೀಲಿಸಿದೆ. ಅದರಲ್ಲಿ 370 ಕಾಮಗಾರಿಗಳು ಇನ್ನೂ ಆರಂಭವಾಗಿಯೇ ಇಲ್ಲ. ಅದರಲ್ಲಿ ಕೆಆರ್ಐಡಿಎಲ್ ಏಜೆನ್ಸಿಯವುಗಳದ್ದೇ 240 ಕಾಮಗಾರಿಗಳು ಎಂದು ಹೇಳಿದ ಸುಬೋಧ ಯಾದವ್ ಅವರು ಇಲ್ಲಿಯೂ ಅದೇ ರೀತಿ ಇರಬಹುದು. ಅಲ್ಪಸ್ವಲ್ಪ ಅಂಕಿ-ಸಂಖ್ಯೆ ವ್ಯತ್ಯಾಸವಾಗಿರಬಹುದಷ್ಟೇ ಎಂದರು.
ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮಾತನಾಡಿ, ಜಿಲ್ಲಾಮಟ್ಟದ ಸಭೆ ಇದೇ ತಿಂಗಳ 29 ಮತ್ತು 30ರಂದು ಕರೆದು ಕಾಮಗಾರಿ, ಏಜೆನ್ಸಿ, ಸೈಟ್ ಹಾಗೂ ಇನ್ನೀತರ ವಿಷಯಗಳ ಕುರಿತು ಚರ್ಚಿಸಲಾಗುವುದು ಎಂದರು.ಈ ಸಂದರ್ಭದಲ್ಲಿ ಜಿಪಂ ಸಿಇಒ ಕೆ.ನಿತೀಶ್, ಪ್ರೊಬೆಷನರಿ ಐಎಎಸ್ ಈಶ್ವರ್ ಸೇರಿದಂತೆ ಅನುಷ್ಠಾನ ಏಜೆನ್ಸಿಗಳ ಅಧಿಕಾರಿಗಳು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








