ಹಾವೇರಿ

ಅತಿವೃಷ್ಠಿ ಹಾಗೂ ನೆರೆ ಹಾವಳಿಯಿಂದ ಹಾನಿಯಾಗಿರುವ ವಿವಿಧ ಬೆಳೆಹಾನಿ, ಮನೆ ಹಾನಿ, ರಸ್ತೆ, ಸೇತುವೆ ಒಳಗೊಂಡಂತೆ ಮೂಲ ಸೌಕರ್ಯಗಳ ಹಾನಿ ಕುರಿತಂತೆ ನಿಖರವರದಿ ಸಂಗ್ರಹಿಸಿ ಬೇಕಾದ ಅನುದಾನದ ವಿವರನ್ನು ಸಲ್ಲಿಸುವಂತೆ ವಿವಿಧ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಸೂಚಿಸಿದರು.
ಭಾನುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅತಿವೃಷ್ಠಿ ಹಾಗೂ ಪ್ರವಾಹದ ಹಾನಿ ಕುರಿತಂತೆ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಅವರು, ಹಾನಿಯಾದ ವಿವರನ್ನು ಸರಿಯಾಗಿ ದಾಖಲೀಕರಣ ಮಾಡಬೇಕು. ಛಾಯಾಚಿತ್ರದ ಮೂಲಕ ಹಾನಿಯ ವಿವರ, ದುರಸ್ತಿಗಾಗಿ ಬೇಕಾಗಿರುವ ಹಣ ಹಾಗೂ ಪ್ರತಿ ವಿವರವನ್ನು ಸಂಗ್ರಹಿಸಬೇಕು. ಕುಡಿಯುವ ನೀರಿನ ಸಂಪರ್ಕ, ವಿದ್ಯುತ್ ಸಂಪರ್ಕ, ರಸ್ತೆ ಸಂಪರ್ಕಗಳನ್ನು ತ್ವರಿತ್ವವಾಗಿ ಪುನರ್ಸ್ಥಾಪಿಸುವ ವ್ಯವಸ್ಥೆ ಮಾಡುವಂತೆ ಸೂಚಿಸಿದರು.
ಲೋಕೋಪಯೋಗಿ ಇಲಾಖೆಯ ಸಹಕಾರ ಪಡೆದು ನೆರೆಪೀಡಿತ ಗ್ರಾಮಗಳ ಪ್ರತಿ ಶಾಲೆಗಳನ್ನೂ ಪರಿಶೀಲನೆ ಮಾಡಬೇಕು. ಶಿಥಿಲವಾದ ಕೊಠಡಿ ಹಾಗೂ ಗೋಡೆ ಕುಸಿತವಾದ ಶಾಲಾ-ಕಾಲೇಜು ಹಾಗೂ ಅಂಗನವಾಡಿ ಕಟ್ಟಡಗಳಲ್ಲ್ಲಿ ಯಾವುದೇ ಕಾರಣಕ್ಕೂ ಮಕ್ಕಳಿಗೆ ತರಗತಿ ನಡೆಸಬಾರದು. ಪ್ರತಿ ಶಾಲೆಗಳಲ್ಲಿ ತರಗತಿ ನಡೆಸಲು ಯೋಗ್ಯ ಎಂಬ ಕುರಿತಂತೆ ಪ್ರಮಾಣಪತ್ರ ಪಡೆದು ಶಾಲೆಗಳನ್ನು ನಡೆಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕುಡಿಯುವ ನೀರಿನ ಪೈಪ್ಲೈನ್ನಲ್ಲಿ ಕಲುಷಿತವಾದ ನೀರು ಮಿಶ್ರಣವಾಗದಂತೆ ಎಚ್ಚರ ವಹಿಸಬೇಕು. ತಕ್ಷಣ ಪೈಪ್ಗಳನ್ನು ಬದಲಾಯಿಸಬೇಕು. ಸಾಂಕ್ರಾಮಿಕ ರೋಗಗಳು ಹರಡದಂತೆ ಅಗತ್ಯ ಔಷಧಿಗಳನ್ನು ದಾಸ್ತಾನುಮಾಡಿಕೊಂಡು ವೈದ್ಯಕೀಯ ಚಿಕಿತ್ಸೆ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ ಇತರರು ಉಪಸ್ಥಿತರಿದ್ದರು.
ಹಾನಿ ವಿವರ:
ಜಿಲ್ಲೆಯಲ್ಲಿ 2667 ಮನೆಗಳಿಗೆ ಹಾನಿಯಾಗಿದ್ದು. ಈ ಪೈಕಿ 2479 ಮನೆಗಳು ಭಾಗಶಃ ಹಾಳಾಗಿವೆ ಹಾಗೂ 188 ಮನೆಗಳು ಪೂರ್ಣಪ್ರಮಾಣದಲ್ಲಿ ಹಾಳಾಗಿದ್ದು, ರೂ.802.73 ಲಕ್ಷ ರೂ. ನಷ್ಟದ ಅಂದಾಜು ಮಾಡಲಾಗಿದೆ. ಪ್ರಾಥಮಿಕ ವರದಿಯಲ್ಲಿ 42665.18 ಹೆಕ್ಟೇರ್ ಕೃಷಿ ಹಾಗೂ ತೋಟಗಾರಿಕೆ ಬೆಳೆ ಹಾನಿಯಾಗಿದ್ದು 4856.96 ಲಕ್ಷ ರೂ. ನಷ್ಟದ ಅಂದಾಜು ಮಾಡಲಾಗಿದೆ.
ಗೋಶಾಲೆ ಆರಂಭ:
ಜಿಲ್ಲೆಯ ಹಿರೇಕೆರೂರು ತಾಲೂಕಿನ ಮಾಸೂರ, ಶಿಗ್ಗಾಂವ ತಾಲೂಕು ಚಟಾಪುರ ಹಾಗೂ ಹಾವೇರಿ ತಾಲೂಕಿನ ವರದಾಹಳ್ಳಿ ತಲಾ ಒಂದರಂತೆ ಮೂರು ಗೋಶಾಲೆಗಳನ್ನು ಸ್ಥಾಪಿಸಲಾಗಿದೆ ಹಾಗೂ 72 ಜಾನುವಾರಿಗಳಿಗೆ ಆಶ್ರಯ ನೀಡಲಾಗಿದೆ. 20 ಕುರಿಗಳು, ಎರಡು ಎಮ್ಮೆ, ಮೂರು ಹಸುಗಳು ಸಾವನ್ನಪ್ಪಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
