ಸಿರಿಧಾನ್ಯಗಳಿಗೆ ಬೆಂಬಲ ಬೆಲೆ ಕೊಡಿ;ಚಂದ್ರಪ್ಪ

ಚಿತ್ರದುರ್ಗ

     ಸಿರಿಧಾನ್ಯಗಳನ್ನು ಬೆಳೆದರೆ ಕೊಳ್ಳುವವರು ಇರುವುದಿಲ್ಲ. ಹಾಗಾಗಿ ಆಳುವ ಸರ್ಕಾರಗಳು ರೈತರು ಬೆಳೆಯುವ ಸಿರಿಧಾನ್ಯದ ಬೆಳೆಗಳಿಗೆ ಬೆಂಬಲ ಬೆಲೆ ನೀಡಿ ಖರೀದಿಸಬೇಕು. ಆ ಮೂಲಕ ರೈತರ ನೆರವಿಗೆ ಬರಬೇಕೆಂದು ಸಂಸದ ಬಿ.ಎನ್.ಚಂದ್ರಪ್ಪ ಒತ್ತಾಯಿಸಿದರು.

      ಕೃಷಿ ಇಲಾಖೆ, ಜಿಲ್ಲಾ ಪಂಚಾಯಿತಿ ಹಾಗೂ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟ ಇವರ ಸಂಯುಕ್ತಾಶ್ರಯದಲ್ಲಿ ಮುರುಘಾಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಾವಯವ ಮತ್ತು ಸಿರಿಧಾನ್ಯ ಉತ್ಪನ್ನಳ ಪ್ರದರ್ಶನ ಮತ್ತು ಮಾರಾಟದ ಸಾವಯವ ಮತ್ತು ಸಿರಿಧಾನ್ಯ ಮೇಳ – 2018 ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ಕಾಲದಲ್ಲಿ ಸಂಭ್ರಮದಿಂದ ಸುಗ್ಗಿ ಮಾಡಿ ಎಲ್ಲರಿಗೂ ದಾನ ಮಾಡುತ್ತಿದ್ದ ರೈತರು ಇಂದು ಆತ್ಮಹತ್ಯೆಯತ್ತ ಮುಖ ಮಾಡಿದ್ದಾರೆ. ಹಾಗಾಗಿ ಆಳುವ ಸರ್ಕಾರಗಳು ಈ ಕುರಿತು ಗಂಭೀರ ಚಿಂತನೆ ನಡೆಸಬೇಕಿದೆ. ಒಂದು ಬಟ್ಟೆ ಪಿನ್ ತಯಾರಕರು ಅದಕ್ಕೆ ಒಂದು ಬೆಲೆ ಇಟ್ಟು ಮಾರಾಟ ಮಾಡುತ್ತಾರೆ. ಆದರೆ ರೈತರು ಬೆಳೆದ ಬೆಳೆಗಳಿಗೆ ಅವರು ಬೆಲೆ ನಿಗದಿ ಮಾಡುವ ಅವಕಾಶವಿಲ್ಲ. ಪ್ರಸ್ತುತ ದಿನಗಳಲ್ಲಿ ಸಾವಯವ ಕೃಷಿ, ಸಿರಿಧಾನ್ಯಗಳ ಉತ್ಪನ್ನಗಳ ಕುರಿತು ಹೆಚ್ಚು ಚರ್ಚೆ ಆಗುತ್ತಿದೆ ಎಂದರು

       ರೈತರು ಯಾವುದೇ ಮೋಸ, ಕಪಟ, ವಂಚನೆ ಇಲ್ಲದೆ ಬೆಳೆ ಬೆಳೆಯುತ್ತಾರೆ. ಒಳ್ಳೆಯದನ್ನು ಬೇರೆಯವರಿಗೆ ಮಾರಿ ತಾವು ಮಾತ್ರ ಕೆಟ್ಟದ್ದನ್ನು ತಿನ್ನುತ್ತಾರೆ. ಇಂತಹ ರೈತರಿಗೆ ಸೂಕ್ತ ಬೆಳೆ ಸಿಗದೆ ತೊಂದರೆ ಅನುಭವಿಸುತ್ತಿದ್ದಾರೆ. ಬೆಲೆ ಕುಸಿದಾಗ ಟೊಮೋಟೋ ಸೇರಿದಂತೆ ಅನೇಕ ಬೆಳೆಗಳನ್ನು ಬೀದಿಗೆ ಸುರಿದಿದ್ದಾರೆ. ಆದರೆ ಯಾವುದೇ ಕಂಪನಿಗಳು ತಮ್ಮ ಉತ್ಪನ್ನವನ್ನು ಬೀದಿಗೆ ಚೆಲ್ಲಿಲ್ಲ. ಹಾಗಾಗಿ ಸರ್ಕಾರಗಳು ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರಕಿಸುವ ಪ್ರಯತ್ನ ಮಾಡಬೇಕು.

       ರೈತರ ಸರ್ವಾಂಗೀನ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ರೈತರು ಬೆಳೆಯುವ ಬೆಳೆಗಳಿಗೆ ಸೂಕ್ತ ಬೆಳೆ ದೊರೆಯದೆ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ. ಸರ್ಕಾರದ ದ್ವಂದ್ವ ನೀತಿಗಳೇ ಕಾರಣ. ಒಂದು ಕಡೆ ಹೈಬ್ರಿಡ್ ತಳಿಗಳನ್ನು ಪರಿಚಯಿಸುತ್ತಿವೆ. ಮತ್ತೊಂದು ಕಡೆ ಸಿರಿಧಾನ್ಯಗಳನ್ನು ಬೆಳೆಯುವಂತೆ ಹೇಳುತ್ತವೆ. ಆದರೆ ರೈತ ಬೆಳೆದ ಸಿರಿಧಾನ್ಯಗಳನ್ನು ಕೇಳುವವರಿಲ್ಲದಂತಾಗಿದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಹೇಳಿದರು.

        ಇತ್ತೀಚಿನ ದಿನಗಳಲ್ಲಿ ಸರ್ಕಾರಗಳು ಚುನಾವಣೆ ಬಂದಾಗ ಮಾತ್ರ ರೈತರನ್ನು ನೆನಪು ಮಾಡಿಕೊಳ್ಳುತ್ತಿವೆ. ಚುನಾವಣೆ ಹಿನ್ನೆಲೆಯಲ್ಲಿ ಸಾಲ ಮನ್ನಾ ಮಾಡುವುದಾಗಿ ಹೇಳುತ್ತಾರೆ. ಗೆದ್ದು ಅಧಿಕಾರಕ್ಕೆ ಬಂದ ಮೇಲೆ ರೈತರನ್ನು ಮರೆಯುತ್ತಾರೆ. ಇದರ ಬದಲು ಆಳುವ ಸರ್ಕಾರಗಳು ನೀರು, ವಿದ್ಯುತ್, ಗೊಬ್ಬರ, ಬೀಜ ನೀಡಿ ರೈತರು ಬೆಳೆಯುವ ಬೆಳೆಗಳಿಗೆ ಉತ್ತಮ ಬೆಲೆ ನೀಡುವ ಕೆಲಸ ಮಾಡಬೇಕು. ಇದರಿಂದ ರೈತರ ಪರಿಸ್ಥಿತಿ ಸುಧಾರಿಸುತ್ತದೆ. ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ತಪ್ಪುತ್ತದೆ ಎಂದರು.

        ಯಾವುದೇ ಯೋಜನೆಗಳನ್ನು ಕೇವಲ ಘೋಷಣೆ ಮಾಡಿದರೆ ಸಾಲದು. ಅದನ್ನು ರೈತರಿಗೆ ತಲುಪಿಸುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಫಸಲ್ ಭಿಮಾ ಯೋಜನೆ ರೈತರಿಗೆ ಸಮರ್ಪಕವಾಗಿ ತಲುಪಿಲ್ಲ. ಯೋಜನೆಯನ್ನು ರೈತರಿಗೆ ತಲುಪಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಈ ಯೋಜನೆಯಲ್ಲಿ ಕೆಲವು ಲೋಪದೋಷಗಳಿದ್ದು, ಅವುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಮುಂದಿನ ದಿನಗಳಲ್ಲಿ ರೈತರಿಗೆ ಮತ್ತಷ್ಟು ಅನುಕೂಲವಾಗುತ್ತದೆ ಎಂದು ಹೇಳಿದರು.

       ಜಿ.ಪಂ. ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಮಾತನಾಡಿದರು. ಜಿ.ಪಂ. ಸಿಇಒ ಪಿ.ಎನ್.ರವೀಂದ್ರ, ತಾ.ಪಂ. ಅಧ್ಯಕ್ಷ ಲಿಂಗರಾಜ್, ಉಪಾಧ್ಯಕ್ಷೆ ಚಂದ್ರಕಲಾ, ರೈತ ಮುಖಂಡರಾದ ಸಿದ್ದವೀರಪ್ಪ, ಸಾವಯವ ಕೃಷಿಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಟಿ.ಕೃಪ, ಉಪಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ, ರೈತ ಮುಖಂಡ ಕೆ.ಪಿ.ಭೂತಯ್ಯ, ಪ್ರಗತಿಪರ ರೈತರಾದ ವೀರಭದ್ರಪ್ಪ, ನಿಟ್ಟೂರು ಸರೋಜಮ್ಮ, ನಿರ್ಮಲಾ, ಹನುಮಂತರೆಡ್ಡಿ, ಬಬ್ಬೂರು ತೋಟಗಾರಿಕೆ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ. ಡಾ.ಶಶಿಕಲಾಬಾಯಿ ಮತ್ತಿತರರು ಉಪಸ್ಥಿತರಿದ್ದರು.ಚಿತ್ರದುರ್ಗ ವಿಭಾಗದ ಉಪ ಕೃಷಿ ನಿರ್ದೇಶಕ ಎ.ಜಿ.ತಿಮ್ಮಯ್ಯ ಸ್ವಾಗತಿಸಿದರು. ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ್ ಪ್ರಾಸ್ತಾವಿಕವಾಗಿ ಮಾತನಾಡಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link