ಬಳ್ಳಾರಿ
ಮಕ್ಕಳ ಶೋಷಣೆಗಳು ದೈಹಿಕವಾಗಿ ಮಾತ್ರವಲ್ಲದೇ ಮಾನಸಿಕವಾಗಿಯೂ ನಡೆಯುತ್ತವೆ. ಮಕ್ಕಳ ಮೇಲೆ ಪೋಷಕರು ಮಾನಸಿಕ ಒತ್ತಡ ಹೇರುವುದು ಕೂಡ ಒಂದು ರೀತಿಯ ಶೋಷಣೆಯೇ ಎಂದು ಹಿರಿಯ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ನ್ಯಾ. ಅರ್ಜುನ್ ಎಸ್ ಮಲ್ಲೂರ್ ಅಭಿಪ್ರಾಯಪಟ್ಟರು.
ನಗರದಲ್ಲಿ ಶುಕ್ರವಾರ ಶಿಶು ಅಭಿವೃದ್ಧಿ ಯೋಜನಾಧಿಕರಿಗಳ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಸಾರ್ವಜನಿಕ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಬಾಲಕಾರ್ಮಿಕ ಇಲಾಖೆ ಹಾಗೂ ನಗರ, ಗ್ರಾಮೀಣ ಶಿಶು ಅಭಿಯೋಜನೆ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಸಪ್ತಾಹದ ಸಮಾರೋಪ ಹಾಗೂ ಹೆಣ್ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ರಕ್ಷಣೆಯ ಸಲುವಾಗಿ ಫೋಕ್ಸೋ ಕಾಯ್ದೆ ಜಾರಿಯಾದರೂ ಸಹ ಶೋಷಣೆಗಳು ಹೆಚ್ಚಾಗುತ್ತಿವೆ. ಅದರಲ್ಲೂ ಲಿಂಗತ್ವ ದೌರ್ಜನ್ಯಗಳು ಗಣನೀಯವಾಗಿವೆ. ಅದಕ್ಕಾಗಿ ಮಕ್ಕಳು ಸಮಾಜಲ್ಲಿ ಪ್ರಬುದ್ಧರಾಗಿ ಹೊರಹೊಮ್ಮಿ ಸಮಾಜದ ಉಳಿವನ್ನು ಎತ್ತಿಹಿಡಿಯುವ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು. ಮಕ್ಕಳನ್ನು ಸ್ವತಂತ್ರವಾಗಿ ಬದುಕಲು ಬಿಟ್ಟಾಗ ಆಟಪಾಠಗಳಲ್ಲಿ ಚುರುಕಾಗುತ್ತಾರೆ ಎಂದು ಹೇಳಿದ ನ್ಯಾ.ಮಲ್ಲೂರು ಅವರು ಅದೇ ರೀತಿಯಾಗಿ ಅನಿಷ್ಠ ಪದ್ಧತಿಗೆ ಮಕ್ಕಳನ್ನು ದೂಡುವುದು ಕೂಡ ಶೋಷಣೆಯಾಗಿದೆ. ಇದಕ್ಕಾಗಿ ಅರಿವು ಮೂಡಿಸುವುದರ ಜೊತೆಗೆ ನ್ಯಾಯಾಂಗ ವ್ಯವಸ್ಥೆಯ ಶಿಕ್ಷೆಗಳಿಂದ ಅಪರಾಧಗಳನ್ನು ತಡೆಗಟ್ಟಬಹುದೆಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ನಾಗರಾಜ್ ಮಾತನಾಡಿ ದಿನಾಚರಣೆಗಳು ಪರಿಣಾಮಕಾರಿಯಾಗಿ ಆಚರಿಸಲ್ಪಡಬೇಕು. ದಿನಾಚರಣೆಗಳ ಪ್ರಭಾವ ಆಯಾ ವರ್ಗಗಳಿಗೆ ತಲುಪಬೇಕು. ಸಾಮಾಜಿಕ ಪಿಡುಗುಗಳು ಆಧುನಿಕ ರೂಪವನ್ನು ಪಡೆದು ಪ್ರಸ್ತುತ ದಿನಗಳಲ್ಲಿ ಮುನ್ನುಗ್ಗುತ್ತಿದ್ದು,ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಪ್ರಧಾನ ಮಂತ್ರಿಗಳ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯನ್ನು ವ್ಯಾಪಕಗೊಳಿಸುವ ಸಲುವಾಗಿ 2015ರಿಂದ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ಯೋಜನೆಯ ಬೃಹತ್ ಆಂದೋಲನವನ್ನು ಬಳ್ಳಾರಿಯಲ್ಲಿಯೂ ಹಮ್ಮಿಕೊಳ್ಳಲಾಗಿದೆ. ಇದರ ಕುರಿತಾದ ಉಪನ್ಯಾಸಗಳನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದರು.
ಮಕ್ಕಳ ಕಲ್ಯಾಣ ಸಮಿತಿಯ ವಿಜಯಲಕ್ಷ್ಮಿ ಮಾತನಾಡಿ ಪೋಷಕರ ತಿಳಿವಳಿಕೆ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಂಡು ಮನೆಬಿಡುವ ಯೋಚನೆ ಮಾಡಬಾರದು. ಹೆಣ್ಮಕ್ಕಳು ದೇಶದ ಸಂಪತ್ತು ಹಗಲುರಾತ್ರಿ ಕಾಪಾಡುವ ಹಾಗೂ ಸೌಲಭ್ಯ ಒದಗಿಸುವ ಜವಾಬ್ದಾರಿ ಹಾಗೂ ತೊಂದರೆಗೆ ಒಳಗಾದ ಮಕ್ಕಳ ಕೌನ್ಸ್ಸೆಲಿಂಗ್ ನಡೆಸುವುದು ಮಕ್ಕಳ ಕಲ್ಯಾಣ ಸಮಿತಿಯದ್ದಾಗಿದೆ. 18 ವರ್ಷದ ನಂತರ ಮದುವೆಗೆ ಒಪ್ಪಿಕೊಳ್ಳಬೇಕು ಹಾಗೂ ಮದುವೆಯ ನಂತರ ವಿದ್ಯಾಭ್ಯಾಸ ಮುಂದುವರಿಸುವ ಇಚ್ಛೆ ಇದ್ದರೆ ದಯವಿಟ್ಟು ಮುಂದುವರೆಸಿಕೊಳ್ಳಿ ಪರಸ್ಪರ ಸಹಕಾರ ವ್ಯಕ್ತಿತ್ವದ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ರೂಢಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ನಿರೂಪಣಾಧಿಕಾರಿ ನವೀನ್ ಕುಮಾರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿಜಯಲಕ್ಷ್ಮ್ಮೀ, ಬಾಲಕಾರ್ಮಿಕ ನಿರ್ಮೂಲನ ಯೋಜನೆಯ ನಿರ್ದೇಶಕ ಮೌನೇಶ್, ಮಹಿಳಾ ಪೆÇಲೀಸ್ ರಕ್ಷಣಾ ಘಟಕದ ಲಲಿತಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಚಾಂದ್ ಪಾಷ, ಗ್ರಾಮೀಣ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉμÁ, ಮಹಿಳಾ ಅಭಿವೃದ್ಧಿ ನಿಗಮದ ನಾಗವೇಣಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಶಾಲಾ ಮಕ್ಕಳು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ