ಹೂವಿನಹಡಗಲಿ :
ತಾಲೂಕಿನ ನವಲಿ ಗ್ರಾಮದಲ್ಲಿ ಸರ್ಕಾರದ ಅಧೀನದಲ್ಲಿರುವ ಗೋಮಾಳ ಭೂಮಿಯನ್ನು ವೀರಭದ್ರಗೌಡ ಮತ್ತು ಆರ್.ಬಸವಲಿಂಗನಗೌಡ ಎನ್ನುವವರು ಒತ್ತುವರಿ ಮಾಡಿಕೊಂಡು ಗೋಡೌನ್ ಹಾಗೂ ಮನೆಗಳನ್ನು ನಿರ್ಮಿಸಿ ಮತ್ತು ಸಾಗುವಳಿ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಶಂಕರ್, ಈ ಇಬ್ಬರು ಕೂಡಾ ದೊಡ್ಡ ರೈತರಾಗಿದ್ದು, ನೂರಾರು ಎಕರೆ ಜಮೀನನ್ನು ಹೊಂದಿದ್ದಾರೆ. ಸಣ್ಣಪುಟ್ಟ ರೈತರು ಒತ್ತುವರಿ ಮಾಡಿದ್ದರ ಬಗ್ಗೆ ನಮಗೆ ತಕರಾರು ಇಲ್ಲ, ಗ್ರಾಮದ ಪಕ್ಕದಲ್ಲಿರುವ ಅಂದಾಜು 25 ಎಕರೆಯಷ್ಟು ಭೂಮಿಯನ್ನು ಅಕ್ರಮ ಮಾಡಿಕೊಂಡಿರುವುದರಿಂದ ದನಕರುಗಳಿಗೆ ಮೇಯಲು ತುಂಬಾ ಸಮಸ್ಯೆಯಾಗಿದೆ ಎಂದು ಹೇಳಿದರು.
ಈ ಕುರಿತು ಈಗಾಗಲೇ ಸಂಬಂಧಪಟ್ಟಂತಹ ತಹಶೀಲ್ದಾರರು, ಮತ್ತು ಜಿಲ್ಲಾಧಿಕಾರಿಗಳಿಗೆ ಅಕ್ರಮ ಭೂಮಿಯನ್ನು ತೆರವುಗೊಳಿಸುವಂತೆ ಮನವಿ ನೀಡಿದ್ದರು ಕೂಡಾ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಹೇಳಿದರು.
ನವಲಿ ಗ್ರಾಮ ಒಂದು ನದಿ ತೀರದ ಗ್ರಾಮವಾಗಿರುವುದರಿಂದ ಇಲ್ಲಿರುವ ರೈತಾಪಿವರ್ಗದ ಎಲ್ಲಾ ಕುಟುಂಬಗಳಲ್ಲಿಯೂ ಕೂಡಾ ದನ, ಕುರಿ, ಹಸುಗಳನ್ನು ಸಾಕಿಕೊಂಡಿದ್ದು, ಅವುಗಳಿಗೆ ಮೇವಿನ ತೊಂದರೆ ಇದ್ದು, ರೈತರು ಯಾರೂ ಕೂಡಾ ತಮ್ಮ ಹೊಲಗಳಲ್ಲಿ ಜಾನುವಾರುಗಳನ್ನು ಮೇಯಿಸಲು ಬಿಡದೇ ಇರುವುದರಿಂದ ಸಾಕಷ್ಟು ಸಮಸ್ಯೆ ಉದ್ಬವವಾಗಿದೆ ಎಂದು ಶಂಕರ ಹೇಳಿದರು.
ಅಲ್ಲದೇ, ನಿರಂತರವಾಗಿ ಬರಗಾಲ ಆವರಿಸಿರುವುದರಿಂದ ಮಳೆಯಾದಾರೀತ ಬೇಸಾಯವು ಇಲ್ಲದೇ ಇರುವುದು ಜೀವನೋಪಾಯಕ್ಕಾಗಿ ಹಸು, ಕುರಿಗಳನ್ನು ಸಾಕಾಣಿಕೆ ಮಾಡುವುದು ಅನಿವಾರ್ಯವಾಗಿದ್ದು, ಸಂಬಂಧಪಟ್ಟಂತಹ ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನ ಹರಿಸಿ, ಸಮಸ್ಯೆಗೆ ಪರಿಹಾರವನ್ನು ಸೂಚಿಸಬೇಕೆಂದು ಹೇಳಿದರು.
ಒಂದು ವಾರದೊಳಗಾಗಿ ತಹಶೀಲ್ದಾರರು ಗೋಮಾಳ ಒತ್ತುವರಿಮಾಡಿಕೊಂಡವರ ವಿರುದ್ಧ ಕ್ರಮ ಕೈಗೊಳ್ಳದೇ ಹೋದರೆ, ತಹಶೀಲ್ದಾರ ಕಛೇರಿ ಮುಂದೆ ನವಲಿ ಗ್ರಾಮಸ್ಥರು ಧರಣಿ ಸತ್ಯಾಗ್ರಹವನ್ನು ಆರಂಭಿಸುವುದಾಗಿ ಎಚ್ಚರಿಸಿದ್ದಾರೆ. ಹಂತ ಹಂತವಾಗಿ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದರ ಮೂಲಕ ಗೋಮಾಳಭೂಮಿ ಅಕ್ರಮ ಕೋರರ ವಿರುದ್ದ ಉಗ್ರ ಹೋರಾಟವನ್ನು ಕೈಗೊಳ್ಳುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.
ಸಂದರ್ಭದಲ್ಲಿ ಮ್ಯಾಗೇರಿ ಗುಡದಪ್ಪ, ಎಂ.ಪಕ್ಕೀರಪ್ಪ, ಹಳ್ಳಿ ವೀರೇಶ, ನಿಂಗಪ್ಪ, ಹಳ್ಳಿಕೇರಿ ಬಸವರಾಜ, ಎಸ್.ಶಿವಪ್ಪ, ಹೆಚ್.ಕೋಟೆಪ್ಪ, ಹನುಮಂತಪ್ಪ ಸೇರಿದಂತೆ ಹಲವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
