ತುಮಕೂರು:
ವಿದ್ಯಾರ್ಥಿಗಳ ಉಜ್ವಲ ಭವಿಷ್ಯವನ್ನು ರೂಪಿಸಲು ಶಿಕ್ಷಕರ ಪಾತ್ರ ಅತ್ಯುತ್ತಮವಾಗಿದೆ, ಒಬ್ಬ ಗುರು ಮನಸ್ಸು ಮಾಡಿದರೆ ಏನೆಲ್ಲ ಒಳ್ಳೆಯ ಕೆಲಸವನ್ನು ಮಾಡಬಹುದು. ವಿದ್ಯಾರ್ಥಿಗಳು ತಮ್ಮ ಗುರುಗಳ ಬಗ್ಗೆ ಸದಾ ಗೌರವವನ್ನು ಹೊಂದಿರಬೇಕು. ಹಾಗೂ ಗುರುಗಳು ಸದಾ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾಗಬೇಕೆಂದರು.
ಕ್ರೀಡಾ ಚಟುವಟಿಕೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಜೊತೆಗೆ ಹೆಚ್ಚು ಶ್ರದ್ಧೆ ವಹಿಸಬೇಕೆಂದು ತಿಳಿಸಿದರು. ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಉತ್ತಮ ಫಲಿತಾಂಶ ಬರಲಿ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀದೇವಿ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರಾದ ಎಂ.ಎಸ್. ಪಾಟೀಲ್ರವರು ತಿಳಿಸಿದರು.
ನಗರದ ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ಮಾಚ್ 29 ರಂದು ಸಂಜೆ 6 ಗಂಟೆಗೆ ಕಾಲೇಜ್ ಕ್ಯಾಂಪಸ್ನ ಓಪನ್ ಏರ್ ಥಿಯೇಟರ್ ವೇದಿಕೆಯಲ್ಲಿ ಕಾಲೇಜಿನ ವಾರ್ಷಿಕೋತ್ಸವ “ಶ್ರೀಉತ್ಸವ” 2 ದಿನದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವರ್ಷದ ವಾರ್ಷಿಕೋತ್ಸವಕ್ಕೆ “ಸೇವ್ ಗರ್ಲ್ ಚೈಲ್ಡ್” ಧ್ಯೇಯವಾಕ್ಯವಾಗಿದ್ದು ಕಾರ್ಯಕ್ರಮದ ಜೊತೆ ಜೊತೆಯಲ್ಲಿಯೇ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಮುಖ್ಯಅತಿಥಿಗಳಾಗಿ ಬೆಂಗಳೂರಿನ ಅಂತರ್ರಾಷ್ಟ್ರೀಯ ಅಥ್ಲೇಟಿಕ್ ಹಾಗೂ ಕರ್ನಾಟಕ ಅಥ್ಲೇಟಿಕ್ ಅಸೋಸಿಯೇಷನ್ನ ಉಪಾಧ್ಯಕ್ಷರಾದ ಕುಮಾರಿ. ಬಿ.ಎಲ್. ಭಾರತಿರವರು ಮಾತನಾಡುತ್ತಾ ಪದವೀಧರರಿಗೆ ಹೆಚ್ಚಿನ ವ್ಯಾಸಂಗ ಮಾಡಿ ಮುಂಬರುವ ಸ್ಪರ್ಧೆಯನ್ನು ಉಳಿಸಿಕೊಳ್ಳುವಲ್ಲಿ ಉನ್ನತ ಶಿಕ್ಷಣವನ್ನು ತೆಗೆದುಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಾವು ತಮಗೆ ಇಷ್ಟವಿರುವ ವಿದ್ಯಾಭ್ಯಾಸ ಮಾಡಿದ ಸಂಸ್ಥೆಯನ್ನು ಜೀವನದಲ್ಲಿ ಎಂದು ಮರೆಯಬಾರದು ಎಂದು ವಿದ್ಯಾರ್ಥಿ ಗಳಿಗೆ ತಿಳಿಸಿದರು. ಹಾಗೂ ಎಲ್ಲಾ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಹೇಳಿದರು. ಕ್ರೀಡಾರಂಗದಲ್ಲಿನ ತಮ್ಮ ಏಳು-ಬೀಳುಗಳನ್ನು ಸ್ವವಿವರವಾಗಿ ಮನಮುಟ್ಟುವಂತೆ ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕ ರೀತಿಯಲ್ಲಿ ವಿವರಿಸಿದರು.
ಶ್ರೀದೇವಿ ಛಾರಿಟಬಲ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಎಂ.ಆರ್.ಹುಲಿನಾಯ್ಕರ್ ಹಾಗೂ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕರಾದ ಡಾ.ರಮಣ್ ಆರ್ ಹುಲಿನಾಯ್ಕರ್ರವರು ಕಾರ್ಯಕ್ರಮದ ಯಶಸ್ಸಿಗಾಗಿ ಶುಭ ಹಾರೈಸಿದ್ದರು.
ಶ್ರೀದೇವಿ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲರಾದ ಡಾ.ಟಿ. ಹೇಮಾದ್ರಿನಾಯ್ಡುರವರು ಕಾಲೇಜಿನ ವಾರ್ಷಿಕೋತ್ಸವದ ವರದಿಯನ್ನು ಮಂಡಿಸುತ್ತಾ ನಮ್ಮ ಶ್ರೀದೇವಿ ವಿದ್ಯಾಸಂಸ್ಥೆ ಉತ್ತಮ ವಿದ್ಯಾಭ್ಯಾಸ ನೀಡುತ್ತಿದ್ದು, ವಿದ್ಯಾರ್ಥಿಗಳ ಪ್ರಗತಿಗಾಗಿ ಹಲವಾರು ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿಯೆಂದು ತಿಳಿಸಿದರು. ವಿದ್ಯಾರ್ಥಿಗಳ ಉತ್ತಮ ಶಿಕ್ಷಣಕ್ಕೆ ಪೂರಕವಾಗಿ ಬೇಕಾಗಿರುವ ಎಲ್ಲಾ ಸವಲತ್ತುಗಳನ್ನು ಕಲ್ಪಿಸಲಾಗಿಯೆಂದು ಹೇಳಿದರು.
ಹಾಗೂ ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯವು ನಗರದಲ್ಲಿಯೇ ಅತಿ ವೇಗವಾಗಿ ಬೆಳೆಯುತ್ತಿರುವ ಒಂದು ಅತ್ಯುತ್ತಮ ಉನ್ನತ ಶಿಕ್ಷಣ ಸಂಸ್ಥೆಯಾಗಿದೆ ಎಂದು ಅರ್ಥಪೂರ್ಣವಾಗಿ ವಿವರಿಸಿದರು.ಕಾರ್ಯಕ್ರಮದಲ್ಲಿ ಕಾಲೇಜಿನ ಅಲ್ಯುಮಿನಿ ಹಾಗೂ ಚಲನಚಿತ್ರ ರಂಗದ ಕೋರಿಯಾಗ್ರಾಫರ್ರಾದ ಕುಮಾರಿ. ದರ್ಶಿನಿಯವರು ಸಮಾರಂಭದ ಅತಿಥಿಗಳಾಗಿ ಮಾತನಾಡುತ್ತಾ ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಯಾವ ರೀತಿ ಪ್ರಾಮುಖ್ಯತೆ ನೀಡಬೇಕಾಗುತ್ತದೆ, ಅಲ್ಲದೇ ಮಾನವೀಯ ಮೌಲ್ಯಗಳು ಯಾವ ರೀತಿಯಲ್ಲಿ ಬೆಳೆಸಿಕೊಳ್ಳಬೇಕೆಂದು ತಿಳಿಸಿದರು. ವಿದ್ಯಾರ್ಥಿಯ ಜೀವನ ಚಿನ್ನದ ಜೀವನವೆಂದು ಅಭಿಪ್ರಾಯಪಟ್ಟರು. ಸಾಂಸ್ಕøತಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಹೆಚ್ಚು ಆಸಕ್ತಿ ಹೊಂದಬೇಕೆಂದು ವಿನಂತಿಸಿದರು.
ಇದೇ ಸಂದರ್ಭದಲ್ಲಿ ಗಣಿತ ಮತ್ತು ಕ್ಯಾಡ್ ವಿಷಯದಲ್ಲಿ 100 ಕ್ಕೆ 100 ಅಂಕ ಪಡೆದ ಮೊದಲನೇ ವರ್ಷದ ವಿದ್ಯಾರ್ಥಿ ಬಸವರಾಜುರವರಿಗೆ ನಗದು ಬಹುಮಾನವನ್ನು ವಿತರಿಸಲಾಯಿತು. ಶ್ರೀ ಉತ್ಸವ 2019 ಕಾರ್ಯಕ್ರಮದಲ್ಲಿ ನಾನಾ ಕ್ರೀಡೆಗಳಲ್ಲಿ ಜಯಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಕಾಲೇಜಿನ ಎಂ.ಬಿ.ಎ. ವಿಭಾಗದ ಮುಖ್ಯಸ್ಥರಾದ ಡಾ. ಕೆ.ಎಸ್. ರಾಮಕೃಷ್ಣ, ಶ್ರೀದೇವಿ ಕಾಲೇಜಿನ ಡೀನ್ ಎನ್.ಚಂದ್ರಶೇಖರ್, ಡಾ. ಸಿ.ಪಿ.ಚಂದ್ರಪ್ಪ, ಪ್ರೊ.ಸಿ.ಜೆ.ಸದಾಶಿವಯ್ಯ, ಡಾ.ಮಹೇಶ್, ಡಾ.ಚೇತನ್, ಪ್ರೊ. ಕುಮಾರ್, ಪ್ರೊ. ವಾಸುದೇವಮೂರ್ತಿ, ದೈಹಿಕ ಶಿಕ್ಷಕರಾದ ಶಶಿಕುಮಾರ್ ಮತ್ತು ರಾಘವೇಂದ್ರ, ಹಾಗೂ ಎಲ್ಲಾ ವಿಭಾಗದ ಮುಖ್ಯಸ್ಥರು ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ ಪ್ರಾರ್ಥನೆಯನ್ನು ಕು.ಲಹರಿ, ಸ್ವಾಗತವನ್ನು ಉಪಪ್ರಾಂಶುಪಾಲರಾದ ಹೆಚ್.ಬಿ.ಫಣಿರಾಜ್, ಹಾಗೂ ವಂದನಾರ್ಪಣೆಯನ್ನು ಕಾರ್ಯಕ್ರಮದ ಮುಖ್ಯ ಸಂಯೋಜಕರಾದ ಪ್ರೊ. ಇಜಾಜ್ ಅಹಮದ್ ಷರೀಫ್ ಸಲ್ಲಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಪ್ರೊ.ಸಿ.ನಾಗರಾಜುರವರು ನಡೆಸಿಕೊಟ್ಟರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
