ಬೆಂಗಳೂರು
ಹೇಮಾವತಿ ಜಲಾಶಯದಿಂದ ಹೇಮಾವತಿ ನಾಲೆಗಳಿಗೆ ಆಗಸ್ಟ್ 7 ರಿಂದ 14.53 ಟಿಎಂಸಿ ನೀರು ಬಿಡಲು ಸರ್ಕಾರ ಅನುಮತಿ ನೀಡಿದೆ.ಆಗಸ್ಟ್ 6 ರಂದು ಹೇಮಾವತಿ ಜಲಾಶಯದ ಒಳಹರಿವು 17,623 ಕ್ಯೂಸೆಕ್ ಆಗಿದ್ದು, ಹೊರ ಹರಿವು 5,000 ಕ್ಯೂಸೆಕ್ ನಷ್ಟಿದೆ. ಹೇಮಾವತಿ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಮುಂದಿನ ಕೆಲವು ದಿನಗಳಲ್ಲಿ ಅಣೆಕಟ್ಟೆಗೆ ಹೆಚ್ಚಿನ ಒಳ ಹರಿವು ನಿರೀಕ್ಷಿಸಲಾಗಿದೆ.
ಹೇಮಾವತಿ ಜಲಾಶಯದಲ್ಲಿ ಹೆಚ್ಚಿನ ನೀರಿನ ಸಂಗ್ರಹವಿಲ್ಲದಿದ್ದರಿಂದ ಕೆರೆಗಳು ಮತ್ತು ಕಾವೇರಿ ನದಿ ತೀರದ ಅಣೆಕಟ್ಟುಗಳಿಗೆ ನೀರು ತುಂಬಿಸುವ ಮೂಲಕ ಕುಡಿಯುವ ನೀರು ಪೂರೈಕೆಯ ಉದ್ದೇಶಕ್ಕೆ ಮಾತ್ರ ಲಭ್ಯ ನೀರನ್ನು ಬಳಸಲು ಹಾಗೂ ನೀರಾವರಿ ಉದ್ದೇಶಗಳಿಗೆ ನೀರು ಒದಗಿಸದೆ ಇರಲು ತೀರ್ಮಾನಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಮುಂದಿನ ಕೆಲವು ದಿನಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಹಿನ್ನೆಲೆಯಲ್ಲಿ ತಮಿಳುನಾಡಿಗೂ ಸ್ವಲ್ಪ ಮಟ್ಟಿಗೆ ನೀರು ಬಿಡುವ ಉದ್ದೇಶದಿಂದ ಮುಂದಿನ 25 ದಿನಗಳಲ್ಲಿ 14.53 ಟಿಎಂಸಿ ನೀರು ಹರಿಸಿ, ಯೋಜನೆಯ ವ್ಯಾಪ್ತಿಗೆ ಬರುವ ಹಾಸನ, ತುಮಕೂರು ಹಾಗೂ ಮಂಡ್ಯ ಜಿಲ್ಲೆಗಳ ಕೆರೆಗಳು, ಆಣೆಕಟ್ಟೆಗಳನ್ನು ತುಂಬಿಸಲು ಸರ್ಕಾರ ಅನುಮತಿ ನೀಡಿದೆ.
ಜತೆಗೆ ತುಂಗಭದ್ರಾ ಜಲಾಶಯದಲ್ಲಿ ಒಳ ಹರಿವು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ನಾಲಾ ಯೋಜನೆ ಮತ್ತು ವಿಜಯನಗರ ಕಾಲುವೆಗಳಿಗೆ ನೀರು ಬಿಡುವಂತೆ ಸೂಚಿಸಲಾಗಿದೆ. ತುಂಗಭದ್ರಾ ಜಲಾಶಯದ ಒಳಹರಿವು ಆಗಸ್ಟ್ 6 ರಂದು 23,052 ಕ್ಯುಸೆಕ್ಸ್ ಇತ್ತು. ಶಿವಮೊಗ್ಗದ ತುಂಗಾ ಜಲಾಶಯದ ಹೊರ ಹರಿವು 77,000 ಕ್ಯುಸೆಕ್ಸ್ ಇತ್ತು. ತುಂಗಾ ಜಲಾಶಯದ ಹೊರ ಹರಿವು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯಕ್ಕೆ 30 ರಿಂದ 40 ಟಿಎಂಸಿ ನೀರು ಸಂಗ್ರವಾಗುವ ನಿರೀಕ್ಷೆ ಸರ್ಕಾರದ್ದಾಗಿದೆ.
ಈ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯದ ಎಡದಂಡೆ, ಬಲದಂಡೆ ನಾಲೆಗಳು ಹಾಗೂ ವಿಜಯನಗರ ಕಾಲುವೆಗಳಿಗೆ 9800 ಕ್ಯೂಸೆಕ್ ನೀರು ಬಿಡಲು ಸರ್ಕಾರ ಅನುಮತಿ ನೀಡಿದೆ ಆಮೂಲಕ ಕೆರೆ ತುಂಬಿಸುವುದು,ಹಾಗು ರೈತರ ಬೆಳೆಗಳಿಗೆ ಅನುಕೂಲ ಕಲ್ಪಿಸುವುದು ಸರ್ಕಾರದ ಉದ್ದೇಶ ಎನ್ನಲಾಗಿದೆ.