ಕುಣಿಗಲ್
ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ಮಾಡುತ್ತಿರುವ ನೌಕರರುಗಳಿಗೆ ವೇತನ ಸೇರಿದಂತೆ ಸರ್ಕಾರದ ಸೌಲಭ್ಯಗಳು ಸಿಗದೆ ವಂಚಿತರಾಗಿದ್ದಾರೆ. ಕೆಲಸಗಾರರ ಜೀವನ ನಡೆಸುವುದೇ ದುಸ್ಥರವಾಗಿದ್ದು ತಕ್ಷಣ ವೇತನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ನೂರಾರು ನೌಕರರು ತಾಲ್ಲೂಕು ಪಂಚಾಯಿತಿ ಮುಂದೆ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಿಐಟಿಯು ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮುನಾಫ್ ಮಾತನಾಡಿ ಗ್ರಾಮ ಪಂಚಾಯಿತಿ ನೌಕರರಿಗೆ ಸರ್ಕಾರದ ಆದೇಶ ದಂತೆ ಕನಿಷ್ಠವೇತನ ಪಾವತಿಸಿಲ್ಲ. ಗಾಮ ಪಂಚಾಯಿತಿಯಲ್ಲಿ ದುಡಿಯುತ್ತಿರುವ ನೌಕರರ ವಿವರಗಳನ್ನು ಪಂಚತಂತ್ರದಲ್ಲಿ ಅಳವಡಿಸಿಲ್ಲವಾದ ಕಾರಣ ವೇತನ ಬಿಡುಗಡೆಯಾಗಿರುವುದಿಲ್ಲ. ವರ್ಗ ಒಂದರಲ್ಲಿ ವೇತನ ಪಾವತಿಸುವಂತೆ ಸರ್ಕಾರದ ಆದೇಶವಿದ್ದರೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ವೇತನ ಪಾವತಿಸುತ್ತಿಲ್ಲ, ಸರ್ಕಾರದ ಆದೇಶದನ್ವಯ ಬಿಲ್ ಕಲೆಕ್ಟರ್ಗಳ ಜೇಷ್ಠತಾ ಪಟ್ಟಿಯನ್ನು ಜಿಲ್ಲಾ ಪಂಚಾಯಿತಿಗೆ ವರ್ಗಾಯಿಸದೆ ಉದಾಸೀನತೆ ತೋರುತ್ತಾ ಗ್ರಾಮ ಪಂಚಾಯತ್ ನೌಕರರಿಗೆ ಅನ್ಯಾಯ ಮಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿಗಳಲ್ಲಿ ದುಡಿಯುವ ಎಲ್ಲಾ ನೌಕರರಿಗೆ ವೇತನ ಪಾವತಿಸಬೇಕು, ನಿವೃತ್ತಿ ಉಪಧನ ಹಾಗೂ ಮರಣೋತ್ತರ ಉಪಧನಗಳನ್ನು ನೀಡಲು ಕ್ರಮವಹಿಸಬೇಕು, ಬಿಲ್ಕಲೆಕ್ಟರ್ ಹಾಗೂ ಡಾಟಾ ಎಂಟ್ರಿ ಆಪರೇಟರ್ಗಳ ಜೇಷ್ಠತಾ ಪಟ್ಟಿಯನ್ನು ಜಿ.ಪಂ.ಗೆ ಕೂಡಲೇ ಕಳುಹಿಸಬೇಕು, ನೌಕರರಿಗೆ ಬಾಕಿ ಇರುವ ವೇತನ ಗ್ರಾಮ ಪಂಚಾಯಿತಿಯಿಂದ ಕೊಡಿಸಿಕೊಡಲು ಪಿಡಿಒ ರವರಿಗೆ ಆದೇಶ ನೀಡಬೇಕು, ಖಾಲಿ ಇರುವ ಬಿಲ್ ಕಲೆಕ್ಟರ್ ಹುದ್ದೆಗೆ ಎಸ್ಎಸ್ಎಲ್ಸಿ ತೇರ್ಗಡೆಯಾದ ನೌಕರರನ್ನು ತುಂಬಬೇಕು, ತಪ್ಪಿದ್ದಲ್ಲಿ ಮುಂದಿನದಿನಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಆಗ್ರಹಿಸಿದರು. ಇ.ಓ ಕಛೇರಿಯಲ್ಲಿಲ್ಲದ ಕಾರಣ ಕಚೇರಿ ಸಿಬ್ಬಂದಿಗೆ ಮನವಿ ಪತ್ರ ನೀಡಲಾಯಿತು.
ಇದಕ್ಕೂ ಮುನ್ನಾ ಪ್ರತಿಭಟನಾಕಾರರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ನಾಗೇಶ್, ಗ್ರಾಮ ಪಂಚಾಯಿತಿ ನೌಕರರ ಸಂಘದ ಅಧ್ಯಕ್ಷ ಶೆಟ್ಟಿಗೆರೆ ಶಿವಕುಮಾರ್, ಕಾರ್ಯದರ್ಶಿ ಗೋವಿಂದ ಸ್ವಾಮಿ, ಖಜಾಂಚಿ ಲಿಂಗರಾಜು, ಶ್ರೀನಿವಾಸ್, ಶಂಕರ್, ರಾಜ್ ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
