ಚಿತ್ರದುರ್ಗ:
ವಿಶ್ವವಿದ್ಯಾನಿಲಯದಲ್ಲಿ ಪದವಿ ಪಡೆದವರಿಗೆ ಮಾತ್ರ ಗ್ರಾಜುವೇಷನ್ ಮಾಡುವುದನ್ನು ನೋಡಿದ್ದೇವೆ. ಆದರೆ ವಾಸವಿ ವಿದ್ಯಾಸಂಸ್ಥೆಯಲ್ಲಿ ಯು.ಕೆ.ಜಿ.ಮುಗಿಸಿ ಒಂದನೆ ತರಗತಿಗೆ ಹೋಗುವ ಮಕ್ಕಳಿಗೆ ಗ್ರಾಜುವೇಷನ್ ಡೇ ಆಚರಿಸುತ್ತಿರುವುದು ವಿಶಿಷ್ಟವಾದುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಮೆಚ್ಚುಗೆ ವ್ಯಕ್ತಪಡಿಸಿದರು.
ವಾಸವಿ ವಿದ್ಯಾಸಂಸ್ಥೆಯಲ್ಲಿ ಬುಧವಾರ ಯು.ಕೆ.ಜಿ.ಪೂರ್ಣಗೊಳಿಸಿ ಒಂದನೆ ತರಗತಿಗೆ ದಾಖಲಾಗುವ ಪುಟಾಣಿಗಳಿಗೆ ಏರ್ಪಡಿಸಲಾಗಿದ್ದ ಗ್ರಾಜುವೇಷನ್ ಡೇ ಉದ್ಘಾಟಿಸಿ ಮಾತನಾಡಿದರು.
ಒಂದನೆ ತರಗತಿಗೆ ಹೋಗುವ ಮಕ್ಕಳು ತುಂಟಾಟ, ಹುಡುಗಾಟಿಕೆಯಲ್ಲಿರುತ್ತಾರೆ. ಹಾಗಾಗಿ ಶಿಕ್ಷಕರುಗಳು ಮಕ್ಕಳನ್ನು ಸಿದ್ದಗೊಳಿಸಿ ಶೈಕ್ಷಣಿಕ ವಾತಾವರಣ ಕಲ್ಪಿಸಬೇಕು. ಮಕ್ಕಳಿಗೆ ಗ್ರಾಜುವೇಷನ್ ಡೇ ಆಚರಿಸುವ ಮೂಲಕ ಸರ್ಟಿಫಿಕೇಟ್ ಕೊಡುವುದರಿಂದ ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಹೇಳಿದರು.
ಬಾಲ್ಯ ಅತ್ಯಂತ ಮಹತ್ವದ ಘಟ್ಟ. ಇದು ದೇವರು ಕೊಟ್ಟ ವರ. ಆದ್ದರಿಂದ ಈ ವಯಸ್ಸಿನಲ್ಲಿ ಮಕ್ಕಳನ್ನು ಶಿಕ್ಷಣಕ್ಕೆ ಅಣಿಗೊಳಿಸಿ ಗಂಭೀರತೆಯನ್ನು ಕಲಿಸಬೇಕು. ಒಂದನೆ ತರಗತಿಗೆ ದಾಖಲು ಪಡೆಯುವ ಮಕ್ಕಳಿಗೆ ಇಂತಹ ಕಾರ್ಯಕ್ರಮಗಳ ಮೂಲಕ ಉತ್ತಮ ವೇದಿಕೆ ಒದಗಿಸಿಕೊಡಬೇಕು ಎಂದು ತಿಳಿಸಿದರು.
ವಿಶ್ವವಿದ್ಯಾನಿಲಯದಲ್ಲಿ ಪದವಿ ಪಡೆದವರಿಗೆ ಮಾತ್ರ ಗ್ರಾಜುವೇಷನ್ ಡೇ ಆಚರಿಸಿ ಸರ್ಟಿಫಿಕೇಟ್ ಕೊಡುವುದು ಪದ್ದತಿ. ಆದರೆ ಬಾಲ್ಯದಲ್ಲಿಯೇ ಮಕ್ಕಳಿಗೆ ಗ್ರಾಜುವೇಷನ್ ಡೇ ಆಚರಿಸುವುದು ವಿಶೇಷ. ಇದರಿಂದ ಶಾಲೆಯಲ್ಲಿ ಉತ್ತಮ ವಾತಾವರಣ ಮೂಡುತ್ತದೆ ಎಂದರು.
ವಾಸವಿ ವಿದ್ಯಾಸಂಸ್ಥೆಯ ಅಧ್ಯಕ್ಷ ಪಿ.ಎಲ್.ಸುರೇಶ್ರಾಜು ಮಾತನಾಡಿ ಹಿರಿಯರು ಏನನ್ನು ಬಯಸುತ್ತಾರೋ ಅದನ್ನು ಮಕ್ಕಳಲ್ಲಿ ಕಾಣಬಹುದು. ಮೀನು ನೀರಿನಲ್ಲಿ ಈಜುತ್ತದೆ. ಆದರೆ ಪಕ್ಷಿ ಈಜುವುದಿಲ್ಲ. ಒಂದೊಂದು ಜೀವಕ್ಕೆ ಒಂದೊಂದು ರೀತಿಯ ಪ್ರತಿಭೆಯಿರುತ್ತದೆ. ಅದೇ ರೀತಿ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಬೇಕಾದರೆ ಇಂತಹ ಕಾರ್ಯಕ್ರಮಗಳಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ವಾಸವಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ರಾಮಲಿಂಗಶೆಟ್ಟಿ, ಎಸ್.ನಾಗರಾಜ್, ಎಲ್.ಎನ್.ರಾಜ್ಕುಮಾರ್ ವೇದಿಕೆಯಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
