ಹಣ,ಸಂಪತ್ತಿನ ವ್ಯಾಮೋಹ ಬಿಡಿ; ಶಿಮೂಶ

ಚಿತ್ರದುರ್ಗ :

     ಹಣ, ಆಸ್ತಿ, ಬಂಗಾರ ಎಂದು ಅತಿಯಾದ ವ್ಯಾಮೋಹ ದುರಾಸೆಗಳ ಹಿಂದೆ ಹೋಗದೆ ಆದರ್ಶಗಳ ಹಿಂದೆ ಹೋಗಿ ಜೀವನ ಸಾರ್ಥಕ ಮಾಡಿಕೊಳ್ಳಿ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.

       ಬಸವಕೇಂದ್ರ, ಶ್ರೀಮುರುಘಾಮಠ ಹಾಗು ಎಸ್.ಜೆ.ಎಂ. ಶಾಂತಿ ಮತ್ತು ಪ್ರಗತಿ ಫೌಂಡೇಶನ್ ಚಿತ್ರದುರ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ 29ನೇ ವರ್ಷದ 5ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವ ಮತ್ತು ಟೆಕ್ನೋಪಾರ್ಕ್ ಪ್ರದರ್ಶನ ಕೇಂದ್ರ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶರಣರು, ಭಾಗವಹಿಸಿದ್ದ 74 ಜೋಡಿಗಳಿಗೆ ತಾಳಿ ಮತ್ತು ವಸ್ತ್ರ ವಿತರಣೆ ಮಾಡಿ ಮಾತನಾಡಿದರು.

       ಬಸವಣ್ಣ, ಅಲ್ಲಮ, ಸಿದ್ಧರಾಮೇಶ್ವರರು 900 ವರ್ಷಗಳ ಹಿಂದೆ ಇಂತಹ ವಿವಾಹಗಳನ್ನು ಮಾಡಿಸಿದ್ದರು. ಹಾಗೆಯೇ ಮುರುಘಾಮಠ ಕಳೆದ 29 ವರ್ಷಗಳಿಂದ ಒಟ್ಟು 16 ಸಾವಿರಕ್ಕು ಹೆಚ್ಚು ಮದುವೆಗಳನ್ನು ಮಾಡಿಸಿದೆ. ಇದೊಂದು ವಿಶ್ವದಾಖಲೆ ಎಂದು ಶರಣರು ನುಡಿದರು.

        ಮುಖ್ಯಅತಿಥಿಗಳಾಗಿ ಆಗಮಿಸಿದ್ದ ಚಿತ್ರದುರ್ಗ ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸಿ. ಸತ್ಯಭಾಮ ಅವರು, ಇಂತಹ ಭಾಗ್ಯ ಹೆಚ್ಚು ಜನರಿಗೆ ಸಿಗುವುದಿಲ್ಲ. ನವ ವಧು-ವರರಿಗೆ ಈ ಭಾಗ್ಯ ಸಿಕ್ಕಿದೆ. ನೀವು ಪುಣ್ಯಶಾಲಿಗಳು. ಶ್ರೀಗಳಿಗೆ ಜನರ ಬಗ್ಗೆ ಇರುವ ಕಾಳಜಿ ದೊಡ್ಡದು. ನಾವು ಅತ್ಯಂತ ಸರಳವಾಗಿಯೇ ವಿವಾಹ ಮಾಡುವುದಾದರೆ ಕನಿಷ್ಠ 2-3 ಲಕ್ಷ ರೂ. ಬೇಕೇಬೇಕು. ಇಂತಹ ಕಾರ್ಯಕ್ರಮ ರೋಮಾಂಚನವುಂಟು ಮಾಡುತ್ತದೆ. ಅವರ ಸಮಾಜಮುಖಿ ಕಾರ್ಯಗಳು ಎಲ್ಲರಿಗೂ ಮಾದರಿ ಎಂದರು.

        ಬಳಿಕ ಕಾಲೇಜು ಶಿಕ್ಷಣ ಇಲಾಖೆಯ ಶಿವಮೊಗ್ಗದ ಜಂಟಿ ನಿರ್ದೇಶಕರಾದ ಪ್ರೊ. ಕೆ. ಪ್ರಸಾದ್ ಮಾತನಾಡಿ, ಬಹಳಷ್ಟು ಜನ ಇಂದು ಸ್ವಾರ್ಥಿಗಳಾಗಿದ್ದಾರೆ. ಆದರೆ ನಿಸ್ವಾರ್ಥಿಗಳಾಗಿರುವ ಶರಣರು 29 ವರ್ಷಗಳಿಂದ ಈ ಸಾಮಾಜಿಕ ಕಾರ್ಯ ಮಾಡುತ್ತಿದ್ದಾರೆ ಎಂದರು.

       ದಿವ್ಯಸಮ್ಮುಖ ವಹಿಸಿದ್ದ ಪೂಜ್ಯಶ್ರೀ ಗುರುಬಸವದೇವರು, ಅರಿವಿನ ಮನೆ, ದೇವದುರ್ಗ ಇವರು ಪಂಚಾಂಗವಿಲ್ಲದೆ ಜ್ಯೋತಿಷ್ಯವಿಲ್ಲದೆ ಇಲ್ಲಿ ಕಲ್ಯಾಣ ಮಹೋತ್ಸವ ನಡೆಯುತ್ತಿದೆ. ಎಲ್ಲಾ ಜಾತಿ ಜನಾಂಗದ ಮಧ್ಯೆ ಸ್ವಾಮೀಜಿಗಳ ಮಧ್ಯೆ ನಡೆಯುವ ಈ ಉತ್ಸವ ನಿಮ್ಮ ಭಾಗ್ಯವೇ ಸರಿ. ನೀವೆಲ್ಲ ಭಾಗ್ಯಶಾಲಿಗಳು. ಗುಡಿ ಗುಂಡಾರಗಳಲ್ಲಿ ದೇವರು ಕಾಣುವುದಿಲ್ಲ, ದೇವರು ನಿಮ್ಮಲ್ಲಿಯೇ ಇದ್ದಾನೆ ಎಂದರು.

        35 ಸಾವಿರಕ್ಕು ಹೆಚ್ಚು ಜನರು ಸಮಾರಂಭದಲ್ಲಿ ಭಾಗವಹಿಸಿದ್ದರು. ಕೇತೇಶ್ವರ ಸ್ವಾಮಿಗಳು ಮತ್ತು ಪ್ರಜ್ಞಾನಂದ ಸ್ವಾಮಿಗಳು ಉಪಸ್ಥಿತರಿದ್ದರು. ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಕಾರ್ಯನಿರ್ವಹಣಾ ನಿರ್ದೇಶಕರಾದ ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ. ದೊರೆಸ್ವಾಮಿ, ಕೆಇಬಿ ಷಣ್ಮುಖಪ್ಪ, ಮಲ್ಲಿಕಾರ್ಜುನ್, ಪೆಲ್ವಾನ್ ತಿಪ್ಪೇಸ್ವಾಮಿ,  ಪ್ರೊ.ಜಯನಾಯ್ಕ, ಎನ್. ತಿಪ್ಪಣ್ಣ, ಪ್ರೊ. ಮಹಂತೇಶ್ ಇದ್ದರು.ಜಮುರಾ ಕಲಾವಿದರು ಪ್ರಾರ್ಥಿಸಿದರು. ಪಿಆರ್‍ಓ ಪ್ರದೀಪ್‍ಕುಮಾರ್ ಜಿ.ಟಿ. ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಸಾಲಿಮಠ ಸ್ವಾಗತಿಸಿದರು. ಜ್ಞಾನಮೂರ್ತಿ ವಂದಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link