ಬೆಂಗಳೂರು
ಕುಮಾರಸ್ವಾಮಿ ನೇತೃತ್ವದ ಸರ್ಕಾರ ವಿಶ್ವಾಸ ಮತಯಾಚನೆ ಮಾಡುವ ಸಂದರ್ಭದಲ್ಲಿ ಸದನಕ್ಕೆ ಗೈರು ಹಾಜರಾಗುವ ಮೂಲಕ ಸದಸ್ಯತ್ವದಿಂದಅನರ್ಹರಾದ ಶಾಸಕರ ಪ್ರಕರಣ ಅಗಸ್ಟ್ 16 ರ ಶುಕ್ರವಾರ ಸುಪ್ರೀಂಕೋರ್ಟ್ ಮುಂದೆ ವಿಚಾರಣೆಗೆ ಬರಲಿದೆ.ಹೆಚ್.ವಿಶ್ವನಾಥ್ , ಸೋಮಶೇಖರ್ , ಗೋಪಾಲಯ್ಯ , ಭೈರತಿ ಬಸವರಾಜು, ಎಂ.ಟಿ.ಬಿ . ನಾಗರಾಜ್ ಸೇರಿದಂತೆ ಒಟ್ಟು ಹದಿನೇಳು ಮಂದಿ ಶಾಸಕರು ವಿಶ್ವಾಸಮತಯಾಚನೆಯ ಸಂದರ್ಭದಲ್ಲಿ ಸದನಕ್ಕೆ ಗೈರು ಹಾಜರಾಗಿದ್ದರು.
ಈ ಹಿನ್ನೆಲೆಯಲ್ಲಿ ಒಟ್ಟು ಹದಿನೇಳು ಮಂದಿ ಶಾಸಕರನ್ನು ಸದಸ್ಯತ್ವದಿಂದ ಅನರ್ಹಗೊಳಿಸಿ ಸ್ಪೀಕರ್ ರಮೇಶ್ ಕುಮಾರ್ ಅವರು ನೀಡಿದ ಆದೇಶ ಇಡೀ ದೇಶದ ಗಮನ ಸೆಳೆದಿತ್ತಲ್ಲದೆ ವ್ಯಾಪಕ ಚರ್ಚೆಗೆ ಒಳಗಾಗಿತ್ತು.
ಇದರ ಬೆನ್ನಲ್ಲೇ ಸ್ಪೀಕರ್ ತೀರ್ಮಾನವನ್ನು ಪ್ರಶ್ನಿಸಿ ಶಾಸಕ ಸ್ಥಾನದಿಂದಅನರ್ಹಗೊಂಡವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರಾದರೂ ತಕ್ಷಣಕ್ಕೆ ಈ ಪ್ರಕರಣವನ್ನು ಸುಪ್ರೀಂಕೋರ್ಟ್ ವಿಚಾರಣೆಗೆ ಸ್ವೀಕಾರ ಮಾಡಿರಲಿಲ್ಲ.ಆದರೆ ಇದೀಗ ಸುಪ್ರೀಂಕೋರ್ಟ್ ಅಗಸ್ಟ್ 16 ರ ಶುಕ್ರವಾರದಂದು ಶಾಸಕ ಸ್ಥಾನದಿಂದ ಅನರ್ಹಗೊಂಡವರ ಪ್ರಕರಣವನ್ನು ವಿಚಾರಣೆಗೆ ಎತ್ತಿಕೊಳ್ಳಲು ತೀರ್ಮಾನಿಸಿದ್ದು ಆ ಮೂಲಕ ಎಲ್ಲರ ಗಮನ ಅತ್ತ ಹರಿಯುವಂತೆ ಆಗಿದೆ.
ಸ್ಪೀಕರ್ ರಮೇಶ್ ಕುಮಾರ್ ಅವರ ತೀರ್ಪನ್ನು ಮರು ಪರಿಶೀಲಿಸಲು ಕರ್ನಾಟಕದ ವಿಧಾನಸಭಾಧ್ಯಕ್ಷರಿಗೇ ಈ ಪ್ರಕರಣವನ್ನು ಹಿಂತಿರುಗಿಸಬೇಕು ಎಂದು ಹದಿನೇಳು ಮಂದಿ ಶಾಸಕರು ಸುಪ್ರೀಂಕೋರ್ಟ್ ಎದುರು ಅರ್ಜಿ ಸಲ್ಲಿಸಿದ್ದಾರೆ .ನಮ್ಮನ್ನು ಸದಸ್ಯತ್ವದಿಂದ ಅನರ್ಹಗೊಳಿಸುವ ಮುನ್ನ ಸಹಜ ನ್ಯಾಯವನ್ನು ಪಾಲಿಸಲಾಗಿಲ್ಲ. ರಾಜೀನಾಮೆ ನೀಡಿದ ಕುರಿತು ವಿವರ ಪಡೆಯಲು ನಮ್ಮನ್ನು ವಿಚಾರಣೆಗೂ ಕರೆದಿಲ್ಲ.
ಬದಲಿಗೆ ಏಕಪಕ್ಷೀಯವಾಗಿ ನಮ್ಮನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ತೀರ್ಪು ನೀಡಲಾಗಿದೆ.ಹೀಗಾಗಿ ಪ್ರಕರಣವನ್ನು ಮರಳಿ ವಿಧಾನಸಭಾಧ್ಯಕ್ಷರಿಗೆ ವಹಿಸಬೇಕು ಎಂದು ಈ ಶಾಸಕರು ಮನವಿ ಮಾಡಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
