ಹಾನಗಲ್ಲದಲ್ಲಿ ಆರ್ಭಟಿಸಿದ ವರುಣ

ಹಾನಗಲ್ಲ :

      ಹಾನಗಲ್ಲ ತಾಲೂಕಿನಲ್ಲಿ ಬುಧವಾರ ಮಧ್ಯಾಹ್ನ ಸುರಿದ ಗುಡುಗು-ಸಿಡಿಲಿನ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಕಲ್ಲಾಪುರ ಹಾಗೂ ಕೋಣನಕೊಪ್ಪ ಗ್ರಾಮಗಳಲ್ಲಿ ಎರಡು ಎತ್ತುಗಳು ಬಲಿಯಾದ ಘಟನೆ ವರದಿಯಾಗಿವೆ.

        ಕೋಣನಕೊಪ್ಪ ಗ್ರಾಮದ ಈಶ್ವರಪ್ಪ ಕೊರಲಕಟ್ಟಿ ಎಂಬ ರೈತನ ಎತ್ತು ಹೊಲದಲ್ಲಿ ಮೇಯುತ್ತಿದ್ದ ವೇಳೆಯಲ್ಲಿ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದೆ. ಅಕ್ಕಿಆಲೂರು ಸಮೀಪದ ಕಲ್ಲಾಪುರ ಗ್ರಾಮದ ಶಬ್ಬøಅಹ್ಮದ್ ಅಬ್ದುಲ್‍ಮುನಾಫ್ ಮೂಡಿ ಎಂಬ ರೈತನ ಎತ್ತು ಸಿಡಿಲು ಬಡಿದು ಸಾವನ್ನಪ್ಪಿದೆ. ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಗಿರೀಶ ರೆಡ್ಡೇರ, ಡಾ.ಸಂತೋಷ ಮಲಗುಂದ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮರಣೋತ್ತರ ಪರೀಕ್ಷೆ ಕೈಗೊಂಡಿದ್ದಾರೆ.

  ರೈತರಲ್ಲಿ ಸಂತಸ :

      ಈ ವರ್ಷದ ಮುಂಗಾರಿನ ಆರಂಭದಲ್ಲಿ ಸತತವಾಗಿ ಸುರಿದ ಮಳೆಯಿಂದ ಗೋವಿನಜೋಳ ಬಿತ್ತಿದ್ದ ರೈತರು ಅದನ್ನೆಲ್ಲ ತೆಗೆದುಹಾಕಿ ಭತ್ತದ ನಾಟಿ ಮಾಡಿದ್ದರು. ಆದರೆ ಮುಂದೆ ಸುಮಾರು ಒಂದು ತಿಂಗಳಿಂದ ಮಳೆ ನಿಂತು ಹೋಗಿದ್ದರಿಂದ ಭತ್ತದ ಪೈರು ಒಣಗುತ್ತಿತ್ತು. ಇದರಿಂದ ರೈತರು ಕಂಗಾಲಾಗಿದ್ದರು.

      ಇಂದು ಒಂದು ಘಂಟೆಗಳ ಕಾಲ ಸುರಿದ ಭಾರಿ ಮಳೆಯಿಂದ ರೈತ ಸಮುದಾಯದಲ್ಲಿ ಸಂತಸ ವ್ಯಕ್ತವಾಗಿದೆ. ಭತ್ತ ಬೆಳೆದ ರೈತನಿಗೆ ಬುಧವಾರದ ಮಳೆ ಹಣದ ಮಳೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೂ ಮುಂದಿನ ದಿನಗಳಲ್ಲಿ ಇನ್ನೂ ಒಂದೆರಡು ಮಳೆಗಳು ಬಿದ್ದರೆ ಭತ್ತದ ಫಸಲು ರೈತನ ಕೈ ಸೇರಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

        ಜನಜೀವನ ಅಸ್ತವ್ಯಸ್ತ : ತಾಲೂಕಿನಾದ್ಯಂತ ಬುಧವಾರ ಗುಡುಗು ಹಾಗೂ ಸಿಡಿಲು ಮಿಶ್ರಿತ ಮಳೆ ಸುರಿದಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಧ್ಯಾಹ್ನದ ಹೊತ್ತಿಗೆ ಭಾರೀ ಮೋಡಗಳು ಕಂಡುಬಂದು ಒಮ್ಮಿಂದೊಮ್ಮೆಗೆ ಮಳೆ ಸುರಿಯಿತು. ಇದರಿಂದಾಗಿ ತಗ್ಗು ಪ್ರದೇಶದ ಅಂಗಡಿಗಳಿಗೆ ನೀರು ನುಗ್ಗಿತ್ತು. ಕೃಷಿ ಕಾರ್ಯಕ್ಕೆ ತೆರಳಿದ ರೈತರು, ಶಾಲೆಗಳಿಗೆ ತೆರಳಿದ ವಿದ್ಯಾರ್ಥಿಗಳು ಮನೆ ಸೇರಿಕೊಳ್ಳಲು ಹರಸಾಹಸ ಪಡುವಂತಾಯಿತು. ಹಾನಗಲ್ಲಿನ ಹೊಸಬಸ್ ನಿಲ್ದಾಣದ ಮಹಾತ್ಮಾಗಾಂಧಿ ವೃತ್ತದಿಂದ ಕಲ್ಲಭಾವಿವರೆಗೂ ರಸ್ತೆಯ ಮೇಲೆ ನೀರು ಹರಿಯುತ್ತಿತ್ತು. ಅಕ್ಕಿಆಲೂರಿನ ಹಳೆಬಸ್ ನಿಲ್ದಾಣದ ಸಮೀಪ ರಸ್ತೆಯಲ್ಲಿ ದೊಡ್ಡ ಪ್ರಮಾಣದ ನೀರು ನಿಂತು ವಾಹನ, ಜನ-ಜಾನುವಾರು ಸಂಚಾರದಲ್ಲಿ ಕೆಲ ಹೊತ್ತು ಸಮಸ್ಯೆ ಸೃಷ್ಟಿಸಿತ್ತು.

            ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link