ದಾವಣಗೆರೆ :
ಮಕ್ಕಳು ಹೆಣ್ಣಾಗಲಿ, ಗಂಡಾಗಲಿ ಇದನ್ನು ಪೋಷಕರು ಸಮಾನವಾಗಿ ಸ್ವೀಕರಿಸಬೇಕು. ಭ್ರೂಣ ಹತ್ಯೆ ಪ್ರಕೃತಿಗೆ ವಿರುದ್ಧವಾಗಿದ್ದು, ಇದು ಪಾಪದ ಕೆಲಸ ಎಂದು ಕಾನೂನು ಹಾಗೂ ಎಲ್ಲಾ ಧರ್ಮಗಳು ತಿಳಿಸುತ್ತವೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಜಿ. ಕುಲಕರ್ಣಿ ಅಂಬಾದಾಸ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಪಿ.ಸಿ. & ಪಿ.ಎನ್.ಡಿ.ಟಿ ಕೋಶದ ವತಿಯಿಂದ ಮಾ.29 ರಂದು ಏರ್ಪಡಿಸಿದ್ದ ದಾವಣಗೆರೆ ಜಿಲ್ಲೆಯ ಪಿ.ಸಿ. & ಪಿ.ಎನ್.ಡಿ.ಟಿ ಅಡಿ ನೊಂದಾಯಿತ ಸಂಸ್ಥೆಯ ತಜ್ಞವೈದ್ಯರುಗಳಿಗೆ ಪಿ.ಸಿ. & ಪಿ.ಎನ್.ಡಿ.ಟಿ ಕಾಯ್ದೆಯ ಕುರಿತು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದಿನ ಕಾಲದಲ್ಲಿ ಗಂಡು ಮಗುವಿಲ್ಲದ ಕುಟುಂಬಕ್ಕೆ ಮೋಕ್ಷವಿಲ್ಲ ಎಂಬ ಕಾರಣಕ್ಕೆ ಹೆಣ್ಣು ಮಗುವಿನ ವ್ಯಾಮೋಹ ಕಡಿಮೆಯಾಗಿ ಹೆಣ್ಣು ಭ್ರೂಣಹತ್ಯೆ ನಡೆಯುತ್ತಿದ್ದವು. ಇಂದಿಗೂ ಇಂತಹ ಪ್ರಕರಣಗಳನ್ನು ಕಾಣುತ್ತೇವೆ ಎಂದರೆ ದುರಂತವೇ ಸರಿ. ಸಮಾಜದಲ್ಲಿ ವೈದ್ಯ ಮತ್ತು ವಕೀಲರ ಮೇಲೆ ಅಪಾರವಾದ ನಂಬಿಕೆಯಿದ್ದು, ನೀವುಗಳು ಇಂತಹ ಪ್ರಕರಣಗಳ ಕುರಿತು ಜನರಿಗೆ ಅರಿವು ಮೂಡಿಸಬೇಕು ಎಂದರು
ಸಮಾಜದಲ್ಲಿ ಇಂತಹ ಪ್ರಕರಣಗಳು ಸಂಭವಿಸದಂತೆ ನ್ಯಾಯಾಲಯ, ಕಾಯ್ದೆ-ಕಾನೂನುಗಳ ಮುಖಾಂತರ ಹದ್ದಿನ ಕಣ್ಣಿಟ್ಟು ಕಾಯಲಾಗುತ್ತಿದೆ.
ಭ್ರೂಣಹತ್ಯೆ ಒಂದು ಅಪರಾಧ. ಜಿಲ್ಲೆಯಲ್ಲಿ ಇಂತಹ ಪ್ರಕರಣ ಸಂಭವಿಸದಂತೆ ಕಾರ್ಯ ನಿರ್ವಹಿಸಬೇಕು. ಇದಕ್ಕೆ ಸಂಬಂಧಿಸಿದ ಪ್ರಕರಣಗಳು ಕಂಡುಬಂದಲ್ಲಿ ತಾವುಗಳೇ ನೇರವಾಗಿ ಜವಾಬ್ದಾರರಾಗಿರುತ್ತಿರ ಎಂದು ವೈದ್ಯರಿಗೆ ತಿಳಿಸಿದರು.ಜಿಲ್ಲಾ ಮಕ್ಕಳ ವಿಭಾಗದ ಮುಖ್ಯಸ್ಥ ಹಾಗೂ ಎಸ್.ಎಸ್.ಐ.ಎಂ.ಎಸ್ & ಆರ್.ಸಿ ಸಲಹಾ ಸಮಿತಿ ಅಧ್ಯಕ್ಷ ಡಾ. ಎನ್.ಕೆ ಕಾಳಪ್ಪನವರ್ ಮಾತನಾಡಿ, ದೇಶದಲ್ಲಿ ಕೇರಳ ರಾಜ್ಯ ಹೊರತು ಪಡಿಸಿದರೆ ಯಾವ ರಾಜ್ಯದಲ್ಲೂ ಹೆಣ್ಣು, ಗಂಡಿನ ಸಮಾಂತರ ಅಂಕಿ ಅಂಶಗಳಿಲ್ಲ.
ಜಿಲ್ಲೆಯ ಎಲ್ಲಾ ತಜ್ಞ ವೈದ್ಯರುಗಳು ಪಿ.ಸಿ. & ಪಿ.ಎನ್.ಡಿ.ಟಿ ಕಾಯ್ದೆಯನ್ನು ಕಡ್ಡಾಯವಾಗಿ ಅನುಸರಿಸಬೇಕು. ಎಲ್ಲಾ ವರ್ಗದ ಜನರಿಗೆ ಈ ಕಾಯ್ದೆಯ ಕುರಿತು ಜಾಗೃತಿ ಮೂಡಿಸಿ, ಪ್ರಕೃತಿಯಲ್ಲಿ ಹೆಣ್ಣು, ಗಂಡು ಸಮತೋಲದಲ್ಲಿರುವಂತೆ ನೋಡಿಕೊಳ್ಳಬೇಕು ಎಂದರು.
ಜಿಲ್ಲಾ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ವಿಭಾಗೀಯ ನಿರ್ದೇಶಕಿ ಕಲ್ಪನಾ ಮಾತನಾಡಿ, ಯಾವುದೇ ಕಾಯ್ದೆ, ಕಾನೂನಿನಲ್ಲಿ ಹೆಣ್ಣಿಗೆ ತಾರತಮ್ಯವಿಲ್ಲ. ಇಂದು ಹೆಣ್ಣು ಕಾರ್ಯನಿರ್ವಹಿಸದ ಕ್ಷೇತ್ರವಿಲ್ಲ. ಇಂತಹ ಬೆಳವಣಿಗೆ ಇದ್ದರೂ, ಕೆಲವರು ಹೆಣ್ಣಿಗೆ ಸ್ವತಂತ್ರವಿಲ್ಲ ಎಂಬ ಅಪನಂಬಿಕಯಲ್ಲಿದ್ದಾರೆ ಎಂದರು.
ಹೆಣ್ಣಿಗೆ ಹಿಂದಿನ ಕಾಲದಲ್ಲಿ ಆರ್ಥಿಕ ಸ್ವಾತಂತ್ರ್ಯವಿರಲಿಲ್ಲ ಎಂಬ ಕಾರಣಕ್ಕಾಗಿ ದೌರ್ಜನ್ಯಗಳಿಗೆ ಒಳಗಾಗಿದ್ದಳು. ಇಂದು ಕಾಯ್ದೆಗಳ ಮುಖಾಂತರ ಹೆಣ್ಣು ಆರ್ಥಿಕವಾಗಿ ಸಬಲರಾಗುವಂತೆ ಮಾಡಲಾಗಿದೆ. ಭ್ರೂಣ ಹತ್ಯೆಯ ಕಾಯ್ದೆಯನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಿ, ವಿವಿಧ ಕಾರ್ಯಾಗಾರಗಳ ಮುಖಾಂತರ ಹಳ್ಳಿ ಹಾಗೂ ನಗರದ ಜನರಿಗೆ ಅರಿವು ಮೂಡಿಸುವ ಕೆಲಸವಾಗಬೇಕು ಎಂದು ಹೇಳಿದರು.
1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆಂಗಬಾಲಯ್ಯ ಮಾತನಾಡಿ, ಹುಟ್ಟು ಮತ್ತು ಸಾವು ನ್ಯಾಣ್ಯದ ಎರಡು ಮುಖಗಳಿಂದ್ದಂತೆ.
ಇನ್ನೂ ಜನಿಸದ ಮಗುವನ್ನು ಸಾಯಿಸುತ್ತಿದ್ದೇವೆ ಎಂದರೆ ಇದೆಂತಹ ನ್ಯಾಯ ಎಂದು ಪ್ರಶ್ನಿಸಿದರು. ಭ್ರೂಣ ಹತ್ಯೆಯಲ್ಲಿ ಹೆಣ್ಣು ಹೆಚ್ಚು ಶೋಷಣೆಗೊಳಗಾಗುತ್ತಿರುವುದನ್ನು ಅಂಕಿ ಅಂಶಗಳು ತಿಳಿಸುತ್ತವೆ. ಹೆಣ್ಣು ಮಗುವನ್ನು ರಕ್ಷಿಸುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿದೆ. ನಿತ್ಯ ಹೆಣ್ಣಿನ ಮೇಲೆ ಎಲ್ಲಾ ಕ್ಷೇತ್ರಗಳಲ್ಲಿ ದೌರ್ಜನ್ಯಗಳು ಸಂಭವಿಸುತ್ತಿವೆ. ಕಾನೂನಿನ ಜೊತೆ ಜೊತೆಗೆ ಹೆಣ್ಣನ್ನು ಗೌರವಿಸಿ, ಕಾಪಾಡಿದರೆ ಮಾತ್ರ ಬದಾಲಾವಣೆ ಸಾಧ್ಯ ಎಂದು ಸಲಹೆ ನೀಡಿದರು.
ಕಾರ್ಯಕ್ರಮಕ್ಕೂ ಮುಂಚೆ ಪಿ.ಸಿ. & ಪಿ.ಎನ್.ಡಿ.ಟಿ ಕಾಯ್ದೆಯ ಕುರಿತು ವೈದ್ಯರು ಅನುಸರಿಸಬೇಕಾದ ಕಾರ್ಯಗಳು, ನೀತಿ-ನಿಯಮಗಳನ್ನು ಸವಿಸ್ತಾರವಾಗಿ ಡಾ. ಚಂದನ್.ಜಿ ತಿಳಿಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿಎಚ್ಒ ಡಾ.ತ್ರಿಪುಲಾಂಭ ವಹಿಸಿದ್ದರು. ಜಿಲ್ಲಾ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಸಂಘದ ಅಧ್ಯಕ್ಷ ಡಾ. ಕೆ.ಎಸ್. ಮಾವಿನತೋಪ್, ಆರ್ಸಿಎಚ್ಒ ಡಾ.ಈ.ಶಿವಕುಮಾರ್ ಪಿ.ಸಿ. & ಪಿ.ಎನ್.ಡಿ.ಟಿ ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಡಾ. ರೇಣುಕಾರಾಧ್ಯ ಸೇರಿದಂತೆ ಜಿಲ್ಲೆಯ ವಿವಿಧ ತಜ್ಞವೈದ್ಯರುಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
