ಹುಳಿಯಾರು:
ಹುಳಿಯಾರು ಹೋಬಳಿಯಲ್ಲಿ ಪೂರ್ವ ಮುಂಗಾರಿನಲ್ಲಿ ಉತ್ತಮ ಮಳೆಯಾಗದಿದ್ದರೂ ಬಿದ್ದ ಅಲ್ಪ ಮಳೆಯಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ಹೆಸರು ಬಿತ್ತಿದ್ದು ನಂತರದ ದಿನದಲ್ಲೂ ಹೇಳಿ ಕೊಳ್ಳುವಷ್ಟು ಮಳೆಯಾಗಿರದಿದ್ದರೂ ಬೇರು ತೊಯಿಸುವಷ್ಟು ಮಳೆಯಾಗಿರುವುದರಿಂದ ಬಾಡುವ ಹಂತದಲ್ಲಿದ್ದ ಹೆಸರು ಬೆಳೆಗೆ ಜೀವಕಳೆ ಬಂದಿದೆ.
ಮೂರು ತಿಂಗಳ ಅವಧಿಯಲ್ಲಿ ಕೊಯ್ಲಿಗೆ ಬರುವ ಈ ಬೆಳೆ ಕೈತುಂಬ ಕಾಸು ದೊರಕಿಸುವುದರ ಜತೆಗೆ ಮುಂದಿನ ಎರಡನೇ ಬೆಳೆಗೂ ಅವಕಾಶ ದೊರಕಿಸಿಕೊಡುತ್ತದೆ ಎಂಬ ಕಾರಣದಿಂದ ಹಾಗೂ ಹೆಸರು ಬಿತ್ತಿದ ಜಮೀನು ಉದುರೆಲೆ ಗಳಿಂದ ಫಲವತ್ತಾಗುವುದರಿಂದ ಸಾಮಾನ್ಯವಾಗಿ ರೈತರು ಹೆಸರು ಬಿತ್ತನೆಗೆ ಮುಂದಾಗುತ್ತಾರೆ.
ಆದರೆ ಹಿಂದಿನ ವರ್ಷ ಇದೇ ರೀತಿ ಉತ್ತಮ ಆಸೆ ತೋರಿಸಿದ್ದ ಮಳೆ, ಹೆಸರು ಹೂವು ಬಿಡುವ ಈ ಹಂತದಲ್ಲಿ ಕೈಕೊಟ್ಟಿದ್ದರಿಂದ ಬೆಳೆ ಬಾಡಿ ಹಳದಿ ರೋಗಕ್ಕೆ ಬಲಿಯಾಯಿತು. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಬಿತ್ತನೆ ಸಮಯದಲ್ಲಿ ಮಳೆಯ ಅಭಾವದಿಂದ ಈ ಬಾರಿ ಹೆಸರು ಬಿತ್ತನೆ ಹೆಚ್ಚಿನ ಪ್ರಮಾಣದಲ್ಲಿ ನಡೆದಿಲ್ಲ. ಆದರೂ ಬಿದ್ದ ಅಲ್ಪ ಮಳೆಗೆ ಅಲ್ಲಲ್ಲಿ ಹೆಸರು ಬಿತ್ತಿದ್ದ ರೈತರು ನಂತರ ಮಳೆಯಿಲ್ಲದೆ ಕಂಗಾಲಾಗಿದ್ದರು.
ನಾಲ್ಕು ವರ್ಷಗಳಿಂದ ಹೆಸರು ಬೆಳೆ ಬಿತ್ತಿ ರೈತರು ಕೈಸುಟ್ಟು ಕೊಂಡಿದ್ದರು. ಹಾಗಾಗಿ ಈ ವರ್ಷವೂ ಮಳೆ ಕೈ ಕೊಟ್ಟು ಬೆಳೆ ನೆಲಕಚಚುವ ಆತಂಕ ಕಾಡುತ್ತಿತ್ತು. ಆದರೆ ಕಳೆದ ವಾರದಿಂದ ಬೀಳುತ್ತಿರುವ ಸೋನೆ ಮಳೆ ಈ ಹೆಸರು ಬೆಳೆಗೆ ಆಸರೆಯಾಗಿದೆ. ಅಲ್ಲದೆ ರಾಗಿ ಬಿತ್ತನೆಗೆ ಪೂರಕವಾದ ಮಳೆ ಸಹಾ ಬಾರದೆ ಕೈ ಚಲ್ಲಿ ಕುಳಿತಿದ್ದ ರೈತರಿಗೂ ಭರವಸೆ ಮೂಡಿಸಿದೆ. ಹಾಗಾಗಿ ಈ ಬೀಳುತ್ತಿರುವ ಸೋನೆ ಮಳೆಯಲ್ಲಿ ನೆಂದಿರುವ ಭೂಮಿಯಲ್ಲೇ ಕೆಲವರು ರಾಗಿ ಬಿತ್ತನೆ ಕಾರ್ಯದಲ್ಲಿ ತೊಡಗುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
