ಬಿ ಎಸ್ ವೈ ಹೆಗಲಿಗೆ ಉಪಚುನಾವಣೆ ಜವಾಬ್ದಾರಿ..!

ಬೆಂಗಳೂರು

   ರಾಜ್ಯದ ಹದಿನೈದು ಅನರ್ಹ ಶಾಸಕರ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಯ ಸಂಪೂರ್ಣ ಜವಾಬ್ದಾರಿಯನ್ನು ಬಿಜೆಪಿ ಹೈಕಮಾಂಡ್ ಇದೀಗ ಸಿಎಂ ಯಡಿಯೂರಪ್ಪ ಅವರ ಹೆಗಲ ಮೇಲೆ ಹಾಕಿದೆ.

    ಅನರ್ಹಗೊಂಡ ಹದಿನೇಳು ಶಾಸಕರ ಕ್ಷೇತ್ರಗಳ ಪೈಕಿ ಹದಿನೈದು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು ಈ ಎಲ್ಲ ಕ್ಷೇತ್ರಗಳಿಗೆ ಯಾರು ಅಭ್ಯರ್ಥಿಗಳಾಗಬೇಕು?ಚುನಾವಣೆಯನ್ನು ಗೆಲ್ಲಲು ಹೂಡುವ ರಣತಂತ್ರ ಹೇಗಿರಬೇಕು?ಅನ್ನುವುದನ್ನು ಯಡಿಯೂರಪ್ಪ ಅವರೇ ನಿರ್ಧರಿಸಲಿ ಎಂಬುದು ಹೈಕಮಾಂಡ್ ಬಯಕೆ.

   ಯಡಿಯೂರಪ್ಪ ಅವರ ಆಡಳಿತದಲ್ಲಿ ಹಸ್ತಕ್ಷೇಪ ಮಾಡದೆ ಇರಲು ನಿರ್ಧರಿಸಿರುವ ಬಿಜೆಪಿ ಹೈಕಮಾಂಡ್ ಮಂತ್ರಿ ಮಂಡಲ ರಚನೆಯ ನಂತರ ಸರ್ಕಾರದ ಯಾವ ಚಟುವಟಿಕೆಗಳ ವಿಷಯದಲ್ಲೂ ಮಧ್ಯೆ ಪ್ರವೇಶಿಸುತ್ತಿಲ್ಲ.

   ಸರ್ಕಾರ ಅಸ್ತಿತ್ವಕ್ಕೆ ಬಂದ ಎರಡು ತಿಂಗಳಲ್ಲಿ ದಾಖಲೆಯ ಪ್ರಮಾಣದಷ್ಟು ಸರ್ಕಾರಿ ನೌಕರರ ವರ್ಗಾವಣೆ ನಡೆದಿದ್ದರೂ ಆ ಬಗ್ಗೆ ಚಕಾರ ಎತ್ತದ ಬಿಜೆಪಿ ಹೈಕಮಾಂಡ್ ಇದೀಗ ಉಪಚುನಾವಣೆಯ ಸಂಪೂರ್ಣ ಜವಾಬ್ದಾರಿಯನ್ನೂ ಯಡಿಯೂರಪ್ಪ ಅವರ ಹೆಗಲ ಮೇಲೇ ಹೊರಿಸಿದೆ.

   ಯಾವ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿಗಳಾಗಬೇಕು?ಎಂಬ ವಿಷಯದಲ್ಲಿ ಯಡಿಯೂರಪ್ಪ ಅವರೇ ಅಂತಿಮ ನಿರ್ಧಾರ ಕೈಗೊಳ್ಳಲಿ.ಇಲ್ಲದಿದ್ದರೆ ನಾನು ಹೇಳಿದವರನ್ನು ಕ್ಯಾಂಡಿಡೇಟ್ ಮಾಡದೆ ಇದ್ದುದರಿಂದ ಸಮಸ್ಯೆಯಾಯಿತು ಎಂದು ಅವರು ಹೈಕಮಾಂಡ್ ಮೇಲೆ ದೋಷ ಹೊರಿಸುವಂತಿರಬಾರದು.

   ಇದರ ಬದಲು ಉಪಚುನಾವಣೆಯ ಕ್ಯಾಂಡಿಡೇಟುಗಳನ್ನು ಅವರೇ ನಿರ್ಧರಿಸಿದರೆ ಫಲಿತಾಂಶದ ಹೊಣೆಗಾರಿಕೆಯನ್ನು ಯಡಿಯೂರಪ್ಪ ಅವರೇ ಹೊರುತ್ತಾರೆ.ಹೀಗಾಗಿ ಉಪಚುನಾವಣೆಯಲ್ಲಿ ಪಕ್ಷ ಗೆಲ್ಲಲು ಸಂಪೂರ್ಣ ಸಹಕಾರ ನೀಡುವುದಷ್ಟೇ ನಮ್ಮ ಉದ್ದೇಶವಾಗಬೇಕು ಎಂದು ಹೈಕಮಾಂಡ್ ವರಿಷ್ಟರು ರಾಜ್ಯದ ಇತರ ನಾಯಕರಿಗೆ ಸಿಗ್ನಲ್ ರವಾನಿಸಿದ್ದಾರೆ.

   ಇದ್ದಕ್ಕಿದ್ದಂತೆ ಬಿಜೆಪಿ ಹೈಕಮಾಂಡ್ ತಳೆದಿರುವ ಈ ಧೋರಣೆ ಯಡಿಯೂರಪ್ಪ ಅವರ ಆಪ್ತರಲ್ಲಿ ಹಲವು ಅನುಮಾನಗಳನ್ನು ಮೂಡಿಸಿದ್ದು ಇದು ರಾಜ್ಯ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಸುವ ಇರಾದೆಯಿರಬಹುದು ಎಂಬ ಶಂಕೆ ಮೂಡುವಂತೆ ಮಾಡಿದೆ.

   ವರ್ಷಾಂತ್ಯದ ವೇಳೆಗೆ ಇಲ್ಲವೇ ಹೊಸ ವರ್ಷದ ಶುರುವಿನ ವೇಳೆಗೆ ನಡೆಯಲಿರುವ ಬೇರೆ ರಾಜ್ಯದ ವಿಧಾನಸಭಾ ಚುನಾವಣೆಯ ಜತೆಗೆ ಕರ್ನಾಟಕ ವಿಧಾನಸಭೆಗೂ ಮಧ್ಯಂತರ ಚುನಾವಣೆ ನಡೆಸುವ ಪೂರ್ವಬಾವಿ ತಯಾರಿ ಇದು ಎಂದು ಯಡಿಯೂರಪ್ಪ ಬೆಂಬಲಿಗರು ಅನುಮಾನಪಡುತ್ತಿದ್ದಾರೆ.

   ರಾಜ್ಯ ಅತಿವೃಷ್ಟಿಯಿಂದ ತತ್ತರಿಸಿದರೂ ನೆರವಿಗೆ ಬರದ ಕೇಂದ್ರ ಸರ್ಕಾರದ ಧೋರಣೆ,ನೆರವು ಕೊಡಿ ಎಂದು ಯಡಿಯೂರಪ್ಪ ಅವರು ಪದೇ ಪದೇ ಕೋರಿದರೂ ಅವರನ್ನು ನಿರ್ಲಕ್ಷ್ಯ ಮಾಡುತ್ತಿರುವ ರೀತಿಗಳೂ ಇದಕ್ಕೆ ಪೂರಕವಾಗಿವೆ.

   ಈಗ ಹದಿನೈದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಯ ವಿಷಯದಲ್ಲೂ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರ ನೆತ್ತಿಯ ಮೇಲೆ ಜವಾಬ್ದಾರಿಯ ಬೆಟ್ಟ ಹೊರಿಸಿದ್ದು ಅದು ಕೂಡಾ ಸಿಎಂ ಬೆಂಬಲಿಗರಿಗೆ ಅನುಮಾನ ಮೂಡಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap