ಹುಳಿಯಾರು:
ಹಿಂದೆ ಸಿದ್ದರಾಮಯ್ಯ ಕುರಿತು ಅವಹೇಳನ ಕಾರಿಯಾಗಿ ಮಾತನಾಡಿದ್ದ ಎಚ್.ಡಿ.ದೇವೇಗೌಡರು, ಇಂದು ಅವರನ್ನು ಕರೆದುಕೊಂಡು ಮತಯಾಚನೆಗೆ ಬರುತ್ತಿರುವುದು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಿದ್ದರಾಮಯ್ಯ ಅಭಿಮಾನಿಗಳಲ್ಲಿ ನೋವುಂಟು ಮಾಡಿದೆ ಎಂದು ಚಿಕ್ಕನಾಯಕನಹಳ್ಳಿ ತಾಲೂಕು ಕಾಂಗ್ರೆಸ್ ಓಬಿಸಿ ನಗರ ಘಟಕದ ಅಧ್ಯಕ್ಷ ಕೆ.ಎನ್.ಉಮೇಶ್ ತಿಳಿಸಿದರು.
ಈ ಸಂಬಂಧ ಅವರು ಪತ್ರಿಕಾ ಹೇಳಿಕೆ ನೀಡಿ, `ಸಿದ್ದರಾಮಯ್ಯ ನೀಚ ವ್ಯಕ್ತಿ. ಇಂಥ ವ್ಯಕ್ತಿಯನ್ನು ಬೆಳೆಸಿದ್ದಕ್ಕೆ ತಾವು ರಾಜ್ಯದ ಜನತೆ ಕ್ಷಮೆಯಾಚಿಸುವುದಾಗಿ ದೇವೇಗೌಡರು ಈ ಹಿಂದೆ ಹೇಳಿದ್ದರು. ಈಗ ಅವರ ಸಹಕಾರದಿಂದಲೇ ಮಗನ ಮುಖ್ಯಮಂತ್ರಿ ಮಾಡಿದ್ದು, ಚುನಾವಣೆಯಲ್ಲಿ ತಮ್ಮ, ಕುಟುಂಬ ಸದಸ್ಯರ ಗೆಲುವಿಗೆ ಜಿಲ್ಲೆಗೆ ಕರೆ ತಂದು ಪ್ರಚಾರ ನಡೆಸುತ್ತಿದ್ದಾರೆ. ಕನಿಷ್ಠ ಹಿಂದೆ ತಾವು ಮಾಡಿದ ಪದಬಳಕೆ ಕುರಿತು ವಿಷಾದಿಸಲಿ’ ಎಂದರು.
ಬಹಿರಂಗ ವೇದಿಕೆಯಲ್ಲಿ ಸಿದ್ದರಾಮಯ್ಯ ಒಬ್ಬ ಮುತ್ಸದ್ಧಿ ನಾಯಕ ಎಂದು ಜನರಿಗೆ ಮನವರಿಕೆ ಮಾಡಿಕೊಟ್ಟು ಅಭಿಮಾನಿಗಳ ಮನಸ್ಸಿಗೆ ಮಾಡಿರುವ ಗಾಯವನ್ನು ವಾಸಿ ಮಾಡಲು ಮುಂದಾಗುತ್ತಾರೆಯೇ ಎಂದು ಪ್ರಶ್ನಿಸಿದರಲ್ಲದೆ ದೇವೇಗೌಡರು ಇದಕ್ಕೆ ಮುಂದಾಗದೇ ಇದ್ದಲ್ಲಿ ಲೋಕಸಭಾ ಚುನಾವಣೆ ಕುರಿತು ಸಿದ್ದರಾಮಯ್ಯ ಅಭಿಮಾನಿಗಳು ತಮ್ಮದೇ ನಿರ್ಣಯಕ್ಕೆ ಮುಂದಾಗಲು ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
