ಹಿಂದೂ ಗಣಪತಿ ಶೋಭಾಯಾತ್ರೆಗೆ ಜನಜಾತ್ರೆ

ಚಿತ್ರದುರ್ಗ;

     ಇಲ್ಲಿನ ಸ್ಟೇಡಿಯಂ ರಸ್ತೆಯಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಮಹಾಗಣಪತಿಯ ವಿಸರ್ಜನಾ ಮಹೋತ್ಸವ ಶನಿವಾರ ಜರುಗಿತು. ಇದರ ಅಂಗವಾಗಿ ಜರುಗಿದ ಬೃಹತ್ ಶೋಭಾಯಾತ್ರೆಯಲ್ಲಿ ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನ ಸೇರಿದ್ದರು.

      ಬೆಳಿಗ್ಗೆ 11 ಗಂಟೆಗೆ ಸುಮಾರಿಗೆ ಸ್ಡೇಡಿಯಂ ರಸ್ತೆಯಲ್ಲಿ ವಿಶ್ವ ಹಿಂದೂ ಪರಿಷತ್ ಪ್ರಾಂತ್ಯ ಸಂಚಾಲಕಿ ಡಾ.ವಿಜಯಲಕ್ಷ್ಮೀ ಅವರು ಶೋಭಾಯಾತ್ರೆಗೆ ಚಾಲನೆ ನೀಡಿದರು. ಸ್ಥಳೀಯ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಹೊಳಲ್ಕೆರೆಯ ಶಾಸಕ ಎಂ.ಚಂದ್ರಪ್ಪ, ಶ್ರೀಮಾದಾರ ಚೆನ್ನಯ್ಯಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು, ರಾಜಕೀಯ ಪಕ್ಷಗಳ ಮುಖಂಡರು, ವಿಶ್ವ ಹಿಂದೂ ಪರಿಷತ್, ಭಜರಂಗ ದಳದ ನೇತಾರರು ಈ ಐತಿಹಾಸಿಕ ಯಾತ್ರೆಗೆ ಸಾಕ್ಷೀಕರಿಸಿದರು

     ದಿನವಿಡೀ ನಡೆದ ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ ಮೂಲೆ ಮೂಲೆಗಳಿಂದ ಜನಸಾಗರವೇ ಹರಿದು ಬಂದಿತ್ತು. ಬೃಹತ್ ಶೋಭಾಯಾತ್ರೆಯಲ್ಲಿ ಪಕ್ಷ ಬೇಧ ಮರೆತೆ ಎಲ್ಲಾ ರಾಜಕೀಯ ಪಕ್ಷಗಳ ಕಾರ್ಯಕರ್ತರು, ಮುಖಂಡರುಗಳು ಹಾಗೂ ಚುನಾಯಿತ ಪ್ರತಿನಿಧಿಗಳೂ ಪಾಲ್ಗೊಂಡಿದ್ದುದು ವಿಶೇಷವಾಗಿತ್ತು.

     ಸುಮಾರು ನಾಲ್ಕು ಕಿ.ಮೀ.ನಷ್ಟು ನಡೆದ ಮೆರವಣಿಗೆಯಲ್ಲಿ ಮಹಿಳೆಯರು, ಮಕ್ಕಳು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಮೆರವಣಿಗೆಯ ಉದ್ದಕ್ಕೂ ಯುವಕರು ಕೇಸರಿಯ ಬಾವುಟಗಳನ್ನಿಹಿಡಿದು ಜೈಕಾರ ಹಾಕುತ್ತಲೇ ಕುಣಿದರು.

      ಶೊಭಾಯಾತ್ರೆಯ ಹಿನ್ನಲೆಯಲ್ಲಿ ಪ್ರಮುಖ ರಸ್ತೆಗಳೆಲ್ಲ ಕೇಸರಿಮಯವಾಗಿತ್ತು. ರಾಜವೀರ ಮದಕರಿ ನಾಯಕರ ಪ್ರತಿಮೆ, ವೀರವನಿತೆ ಒನಕೆ ಓಬವ್ವನ ಪ್ರತಿಮೆ ವೃತ್ತ, ಗಾಂಧಿ ವೃತ್ತ, ಸಂಗೊಳ್ಳಿ ರಾಯಣ್ಣನ ವೃತ್ತಗಳನ್ನು ಕೇಸರಿ ಬಾವುಟಗಳಿಂದ ಅಲಂಕಾರ ಮಾಡಲಾಗಿತ್ತು. ಮುಖ್ಯ ರಸ್ತೆಯ ಉದ್ದಗಲಕ್ಕೂ ಕೇಸರಿ ಬಟ್ಟೆ, ಬಾವುಟಗಳನ್ನು ಕಟ್ಟಲಾಗಿತ್ತು.

     ಮೆರವಣಿಗೆಗೆ ಬೆಳಿಗ್ಗೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಹಳ್ಳಿಗಳಿಂದಲೂ ಲಾರಿ, ಟ್ರಾಕ್ಟರ್ ಇನ್ನಿತರೆ ವಾಹನಗಳಲ್ಲಿ ಜನ ತಂಡೋಪ ತಂಡವಾಗಿ ನಗರ ಪ್ರವೇಶಿಸಿದರು. ಮದ್ಯಾಹ್ನ 12 ಗಂಟೆಯ ವೇಳೆಗೆ ಒಂದು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಜನ ಸೇರಿದ್ದರು. ಕಣ್ಣು ಹಾಯಿಸಿದಷ್ಟು ದೂರದವರೆಗೂ ಜನಸ್ತೋಮವೇ ಕಣ್ಣಿಗೆ ರಾಚುತ್ತಿತ್ತು.

    ಕೈಯಲ್ಲಿ ಕೇಸರಿಯ ಬಾವುಟ ಹಿಡಿದು ಹಣೆಯ ಮೇಲೆ ಕೇಸರಿ ಟೇಪು, ಕೇಸರಿ ಶಲ್ಯ ತೊಟ್ಟ ಯುವಕರಿಂದ ಪ್ರಮುಖ ರಸ್ತೆಗಳು ಕಿಕ್ಕಿರಿದು ತುಂಬಿದ್ದವು. ಮೆರವಣಿಗೆಯ ಉದ್ದಕ್ಕೂ ಯುವಕರು ಜೈಕಾರ ಹಾಕುತ್ತಾ, ಕುಣಿದು ಕುಪ್ಪಳಿಸುತ್ತಲೇ ಸಾಗಿದರು. ಎದೆ ನಡುಗಿಸುವ ಅಬ್ಬರದ ಮ್ಯೂಸಿಕ್‍ಗೆ ಸಾವಿರಾರು ಮಂದಿ ಯುವಕರು ಹುಚ್ಚೆದ್ದು ಕುಣಿದರು.

     ಹುಲಿವೇಶ, ವೀರಗಾಸೆ, ಡೊಳ್ಳುವಾದ್ಯ, ಚಂಡೆ ವಾದ್ಯ, ನಾಸಿಕ್ ಬ್ಯಾಂಡ್ ಇನ್ನಿತರೆ ಕಲಾತಂಡಗಳು ಶೋಭಾಯಾತ್ರೆಗೆ ಇನ್ನಷ್ಟು ಮೆರಗು ನೀಡಿದವು. ದೇಶಭಕ್ತರ ಹತ್ತಾರು ಸ್ಥಬ್ದಚಿತ್ರಗಳು, ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿದ್ದವು.

      ಮೆರವಣಿಗೆಯ ಉದ್ದಕ್ಕೂ ಸ್ವಯಂ ಸೇವಕರು 50ಕ್ಕೂ ಹೆಚ್ಚು ಕಡೆ ಕುಡಿಯುವ ನೀರು, ಮಜ್ಜಿಗೆ ಉಪಹಾರದ ವ್ಯವಸ್ಥೆ ಮಾಡಿದ್ದರು. ಮಹಾಗಣಪತಿ ಶೋಭಾಯಾತ್ರೆ ವೀಕ್ಷಣೆಗೆ ಮಹಿಳೆಯರು, ಮಕ್ಕಳು ಅಪಾರ ಸಂಖ್ಯೆಯಲ್ಲಿ ಸೇರಿದ್ದರು. 

       ಮದಕರಿ ನಾಯಕ ವೃತ್ತ, ಅಂಬೇಡ್ಕರ್ ವೃತ್ತ, ಗಾಂಧಿ ವೃತ್ತದಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ತುಂಬಿದ್ದರು. ಮೆರವಣಿಗೆ ಸಾಗಿಬರುವ ಮಾರ್ಗಗಳ ಉದ್ದಕ್ಕೂ ಗಣೇಶನ ವಿಗ್ರಹ ವೀಕ್ಷಿಸಲು ಹಾಗೂ ಚಿತ್ರಗಳನ್ನು ಕ್ಯಾಮೆರಾಗಳಲ್ಲಿ ಚಿತ್ರೀಕರಿಸಿಕೊಳ್ಳಲು ನೂಕುನುಗ್ಗಲು ಉಂಟಾಗಿತ್ತು. ಮಹಿಳೆಯರು ಗಣೇಶನಿಗೆ ತಮ್ಮ ಭಕ್ತಿ ಸಮರ್ಪಿಸಲು ಮುಗಿಬಿದ್ದರು. ನಿರೀಕ್ಷೆಗೂ ಮೀರಿ ಜನ ಸೇರಿದ್ದರಿಂದ ಭಾರೀ ನೂಕು ನುಗ್ಗಲು ಉಂಟಾಯಿತು.

       ಮುಖ್ಯ ರಸ್ತೆಯ ಎಲ್ಲಾ ಅಂಗಡಿ ಮುಂಗಟ್ಟು ಮುಂಜಾನೆಯಿಂದಲೇ ಬಾಗಿಲು ಮುಚ್ಚಿದ್ದವು. ಜನ ಸ್ವಯಂ ಪ್ರೇರಿತವಾಗಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap