ಹುಳಿಯಾರು
ತುಮಕೂರು ಲೋಕಸಭಾ ಕ್ಷೇತ್ರದ ಚುನಾವಣೆಯು ಗುರುವಾರ ನಡೆದಿದ್ದು ಹುಳಿಯಾರು ಹೋಬಳಿ ವ್ಯಾಪ್ತಿಯಲ್ಲಿ ಯಾವುದೇ ಘರ್ಷಣೆ, ಗದ್ದಲ ನಡೆಯದೆ ಶಾಂತಿಯುತವಾಗಿ ಮತದಾನ ನಡೆಯಿತು.
ಮುಂಜಾನೆ ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಮತದಾನ ಕೇಂದ್ರದ ಮುಂದೆ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಲು ಉತ್ಸುಕತೆ ತೋರಿದ್ದು ಕಂಡು ಬಂತು. ಮಧಾಹ್ನ ಬಿಸಿಲ ಝಳವಿದ್ದ ಕಾರಣ ಒಂದು ಗಂಟೆ ವೇಳೆಗೆ ನೀರಸ ಎನ್ನುವಂತೆ ಶೇ.30 ರಷ್ಟು ಮತದಾನವಾಗಿತ್ತು.
ಸಂಜೆ ವೇಳೆಗೆ ಮತದಾರರು ಮತಕೇಂದ್ರಕ್ಕೆ ಬರಲಾರಂಭಿಸಿದ್ದು ಪುನಃ ಚುರುಕುಗೊಂಡಿತ್ತು. ಮತ ಚಲಾಯಿಸಲು ವಯೋವೃದ್ಧರು, ವಿಕಲಚೇತನರು, ಮಹಿಳೆಯರು, ಪುರುಷರು ಮತದಾನಕ್ಕೆ ಬರುತ್ತಿದ್ದರು. ಪಟ್ಟಣದ ಕೆಲ ಮತಘಟ್ಟೆಯಲ್ಲಿ ಸರದಿಯಲ್ಲಿ ನಿಂತು ಮತಚಲಾಯಿಸಿದರೆ ಇನ್ನುಳಿದ ಮತಘಟ್ಟೆಯಲ್ಲಿ ಜನ ವಿರಳವಾಗಿತ್ತು.
ಆಯೋಗವು ಮತದಾರರ ಗುರುತಿನ ಚೀಟಿಗಳನ್ನು ಮತದಾರರ ಮನೆಗಳಿಗೆ ತಲುಪಿಸಿದ ಪರಿಣಾಮ ಮತಗಟ್ಟೆ ಕೇಂದ್ರಗಳನ್ನು ಹುಡುಕುವ ಗೊಂದಲವಿಲ್ಲದೆ ಮತಚಲಾಯಿಸಿದರು. ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್, ಶತಾಯುಷಿ ಟಿ.ಆರ್.ಶ್ರೀನಿವಾಸಶೆಟ್ಟರು, ಸ್ವಾತಂತ್ರ್ಯ ಹೋರಾಟಗಾರ ಜಿ.ಎಸ್.ವೆಂಕಟಚಲಪತಿಶೆಟ್ಟಿ ಹುಳಿಯಾರಿನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಹುಳಿಯಾರಿನಲ್ಲಿ ಪಟ್ಟಣ ಪಂಚಾಯ್ತಿ ಮತ್ತು ಚುನಾವಣಾ ಸ್ವೀಪ್ ಸಮಿತಿ ಸಹಯೋಗದಲ್ಲಿ ಮತಗಟ್ಟೆಯ ಬಳಿ ಶಾಮಿಯಾನ ಹಾಕಿದ್ದು, ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದು, ಅಂಗವಿಕಲರು, ವೃದ್ಧರನ್ನು ಕರೆತರಲು ವಾಹನ ವ್ಯವಸ್ಥೆ ಮಾಡಿದ್ದು ಮತಗಟ್ಟೆಯ ಬಳಿ ಸ್ವಯಂ ಸೇವಕರನ್ನು ನೇಮಿಸಿದ್ದು ಈ ಚುನಾವಣೆಯ ವಿಶೇಷವಾಗಿತ್ತು.
ಒಟ್ಟಾರೆ ಕಣದಲ್ಲಿರುವ ಅಭ್ಯರ್ಥಿಗಳ ಹಣೆ ಬರಹ ಇಂದು ನಿರ್ಧಾರವಾಗಿದ್ದು ಮತದಾರರ ಒಲವು ಯಾರಿಗೆ ವ್ಯಕ್ತವಾಗಿದೆ. ಮತಾದೀಶನ ನಿಲುವೇನೆಂದು ಅರಿಯಲು ಫಲಿತಾಂಶಕ್ಕಾಗಿ ಕಾಯಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/04/18HULIYAR1.gif)